
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯ ಇಂದು ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಈ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಪಾಳಯದಿಂದ ಆಘಾತಕ್ಕಾರಿ ಸುದ್ದಿ ಹೊರಬಿದ್ದಿದ್ದು, ತಂಡದ ಉಪನಾಯಕ ಶುಭ್ಮನ್ ಗಿಲ್ ಟಿ20 ಸರಣಿಯ ಉಳಿದ ಪಂದ್ಯದಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.

ಶುಭ್ಮನ್ ಗಿಲ್ ಸರಣಿಯಿಂದ ಹೊರಬೀಳಲು ಕಾರಣ ಏನು ಎಂಬುದರ ಬಗ್ಗೆ ಬಿಸಿಸಿಐ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ. ಆದಾಗ್ಯೂ ನಾಲ್ಕನೇ ಟಿ20 ಪಂದ್ಯ ನಡೆಯುವ ಹಿಂದಿನ ದಿನದ ಅಭ್ಯಾಸದ ವೇಳೆ ಶುಭ್ಮನ್ ಗಿಲ್ ಗಾಯಕ್ಕೆ ತುತ್ತಾಗಿದ್ದು, ಈ ಕಾರಣದಿಂದಾಗಿ ಅವರು ಹೊರಗುಳಿದಿದ್ದಾರೆ. ಆದಾಗ್ಯೂ ಅವರ ಬದಲಿಯಾಗಿ ಇದುವರೆಗೂ ಯಾರನ್ನೂ ತಂಡಕ್ಕೆ ಸೇರಿಸಿಕೊಂಡಿಲ್ಲ.

ಪಿಟಿಐ ವರದಿಯ ಪ್ರಕಾರ, ಶುಭ್ಮನ್ ಗಿಲ್ ಕಾಲಿನ ಗಾಯದಿಂದಾಗಿ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ತಂಡದ ಆಪ್ತ ಮೂಲಗಳು ಪಿಟಿಐಗೆ ತಿಳಿಸಿರುವ ಪ್ರಕಾರ, ಭಾರತದ ಉಪನಾಯಕ ಶುಭಮನ್ ಗಿಲ್ ಕಾಲಿನ ಗಾಯದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಎರಡು ಟಿ20 ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.

ಇಂಜುರಿಯ ಹೊರತಾಗಿ ಟಿ20 ವಿಶ್ವಕಪ್ಗೂ ಮುನ್ನ ಶುಭ್ಮನ್ ಗಿಲ್ ಅವರ ಫಾರ್ಮ್ ಭಾರತಕ್ಕೆ ಕಳವಳಕಾರಿಯಾಗಿ ಉಳಿದಿದೆ. ಈ ವರ್ಷದ ಏಷ್ಯಾಕಪ್ಗೆ ಅವರನ್ನು ಇದ್ದಕ್ಕಿದ್ದಂತೆ ಟಿ20 ತಂಡದ ಉಪನಾಯಕನನ್ನಾಗಿ ನೇಮಿಸಲಾಯಿತು. ಇದರಿಂದಾಗಿ ಸಂಜು ಸ್ಯಾಮ್ಸನ್ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಕಳೆದುಕೊಂಡರು.

ಶುಭ್ಮನ್ ಗಿಲ್ 2025 ರಲ್ಲಿ ಆಡಿದ 15 ಪಂದ್ಯಗಳಲ್ಲಿ 24.25 ರ ಸರಾಸರಿಯಲ್ಲಿ 291 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಒಂದೇ ಒಂದು ಅರ್ಧಶತಕವನ್ನು ಗಳಿಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. 2025 ರಲ್ಲಿ ಅವರ ಅತ್ಯಧಿಕ ಸ್ಕೋರ್ 47 ಆಗಿದ್ದು, ಟಿ20 ವಿಶ್ವಕಪ್ ಸಮೀಪಿಸುವ ಸಮಯದಲ್ಲಿ ಅವರ ಕಳಪೆ ಫಾರ್ಮ್ ಮ್ಯಾನೇಜ್ಮೆಂಟ್ಗೆ ಕಳವಳಕಾರಿಯಾಗಿದೆ.

ಮತ್ತೊಂದೆಡೆ, ಸಂಜು ಸ್ಯಾಮ್ಸನ್ 2024 ರ ಟಿ20 ವಿಶ್ವಕಪ್ ನಂತರ ತಂಡದಲ್ಲಿ ಆರಂಭಿಕ ಆಟಗಾರನಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದಲ್ಲದೆ ಉತ್ತಮ ಪ್ರದರ್ಶನವನ್ನು ನೀಡಿದ್ದರು. 2024 ರಲ್ಲಿ ಸ್ಯಾಮ್ಸನ್ ಆಡಿದ 13 ಪಂದ್ಯಗಳಲ್ಲಿ 43.60 ಸರಾಸರಿಯಲ್ಲಿ 436 ರನ್ ಗಳಿಸಿದ್ದಾರೆ, ಇದರಲ್ಲಿ ಮೂರು ಶತಕಗಳು ಸೇರಿವೆ. ಆದಾಗ್ಯೂ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಇದೀಗ ಸಂಜು ಗಾಯಗೊಂಡಿರುವುದರಿಂದ ಸಂಜುಗೆ ತಂಡದಲ್ಲಿ ಸ್ಥಾನ ಸಿಗಬಹುದು.
Published On - 7:39 pm, Wed, 17 December 25