
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 4 ಪಂದ್ಯಗಳ ಟಿ20 ಸರಣಿಯ ಮೊದಲೆರಡು ಮ್ಯಾಚ್ಗಳು ಮುಗಿದಿವೆ. ಈ ಎರಡೂ ಪಂದ್ಯಗಳಲ್ಲೂ ಅಕ್ಷರ್ ಪಟೇಲ್ ಕಾಣಿಸಿಕೊಂಡಿದ್ದರು. ಆದರೆ ಈ ಎರಡು ಮ್ಯಾಚ್ಗಳಲ್ಲಿ ಅಕ್ಷರ್ ಎಸೆದಿದ್ದು ಕೇವಲ 2 ಓವರ್ಗಳು ಎಂದರೆ ನಂಬಲೇಬೇಕು.

ಟೀಮ್ ಇಂಡಿಯಾದ ಸ್ಪಿನ್ ಆಲ್ರೌಂಡರ್ ಆಗಿರುವ ಅಕ್ಷರ್ ಪಟೇಲ್ ತಮ್ಮ ಅನಿರೀಕ್ಷಿತ ಎಸೆತಗಳಿಂದ ವಿಕೆಟ್ ಕಬಳಿಸಬಲ್ಲ ಬೌಲರ್. ಇದಾಗ್ಯೂ ಸೂರ್ಯಕುಮಾರ್ ಯಾದವ್ ಅಕ್ಷರ್ ಅವರನ್ನು ಎರಡೂ ಪಂದ್ಯಗಳಲ್ಲಿ ಬಳಸಿಕೊಳ್ಳದಿರುವುದು ಇದೀಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಮೊದಲ ಟಿ20 ಪಂದ್ಯದಲ್ಲಿ ಅಕ್ಷರ್ ಪಟೇಲ್ ಕಡೆಯಿಂದ ಸೂರ್ಯಕುಮಾರ್ ಯಾದವ್ ಹಾಕಿಸಿದ್ದು ಕೇವಲ ಒಂದು ಓವರ್ ಮಾತ್ರ. ಅದು ಕೂಡ 6ನೇ ಬೌಲರ್ ಆಗಿ ಬಳಸಿಕೊಂಡಿದ್ದರು. ಅಂದರೆ ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ ಕಡೆಯಿಂದ ಒಟ್ಟು 8 ಓವರ್ಗಳನ್ನು ಹಾಕಿಸಿದ್ದ ಸೂರ್ಯ, ಅನುಭವಿ ಅಕ್ಷರ್ಗೆ ಕೇವಲ ಒಂದು ಓವರ್ ಎಸೆಯಲು ಮಾತ್ರ ಅವಕಾಶ ನೀಡಿದ್ದರು.

ಇನ್ನು ದ್ವಿತೀಯ ಟಿ20 ಪಂದ್ಯದಲ್ಲೂ ಇದು ಪುನರಾವರ್ತನೆಯಾಯಿತು. ವರುಣ್ ಚಕ್ರವರ್ತಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುತ್ತಿದ್ದರೂ, ಅನುಭವಿ ಸ್ಪಿನ್ನರ್ ಅಕ್ಷರ್ ಪಟೇಲ್ ಅವರನ್ನು ಬಳಸಿಕೊಳ್ಳಲು ಸೂರ್ಯಕುಮಾರ್ ಯಾದವ್ ಮುಂದಾಗಲೇ ಇಲ್ಲ. ಅಲ್ಲದೆ ಈ ಪಂದ್ಯದಲ್ಲೂ 6ನೇ ಬೌಲರ್ ಆಗಿ ಬಳಸಿಕೊಂಡು ಕೇವಲ ಒಂದು ಓವರ್ ಮಾತ್ರ ನೀಡಿದ್ದರು. ಪರಿಣಾಮ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 3 ವಿಕೆಟ್ಗಳಿಂದ ಸೋಲಬೇಕಾಯಿತು.

ಅಂದರೆ ಎರಡು ಪಂದ್ಯಗಳಲ್ಲಿ ಅಕ್ಷರ್ ಪಟೇಲ್ ಎಸೆದಿದ್ದು ಕೇವಲ 2 ಓವರ್ಗಳು ಮಾತ್ರ. ಪರಿಪೂರ್ಣ ಸ್ಪಿನ್ ಆಲ್ರೌಂಡರ್ ಆಗಿರುವ ಅಕ್ಷರ್ ಪಟೇಲ್ ಅವರನ್ನು ಆಡುವ ಬಳಗಕ್ಕೆ ಆಯ್ಕೆ ಮಾಡಿ, ನಾಯಕ ಸೂರ್ಯಕುಮಾರ್ ಯಾದವ್ ಓವರ್ ನೀಡುತ್ತಿಲ್ಲವೇಕೆ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದರ ಜೊತೆಗೆ ಟೀಮ್ ಇಂಡಿಯಾ ನಾಯಕ ನಡೆಯು ಅನುಮಾನಕ್ಕೆ ಕಾರಣವಾಗಿದೆ.