ಇಂದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಮೂರನೇ ಟಿ20 ಪಂದ್ಯ ಆಯೋಜಿಸಲಾಗಿದೆ. ದ್ವಿತೀಯ ಪಂದ್ಯ ನಡೆದಿದ್ದ ಗಯಾನದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲೇ ಈ ಪಂದ್ಯ ಕೂಡ ನಡೆಯಲಿದೆ. ಸತತ ಎರಡು ಪಂದ್ಯಗಳನ್ನು ಸೋತಿರುವ ಟೀಮ್ ಇಂಡಿಯಾ ಸರಣಿ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಇಂದಿನದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ವೆಸ್ಟ್ ಇಂಡೀಸ್ ಸದ್ಯ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. ಹಾರ್ದಿಕ್ ಪಡೆ ಮಾನ ಉಳಿಸಿಕೊಳ್ಳಬೇಕಾದರೆ ಉಳಿದಿರುವ ಮೂರು ಪಂದ್ಯವನ್ನು ಗೆಲ್ಲಲೇ ಬೇಕಿದೆ. ಅತ್ತ ಕೆರಿಬಿಯನ್ ಪಡೆ ಇತಿಹಾಸ ಸೃಷ್ಟಿಸಲು ಕೇವಲ ಒಂದು ಪಂದ್ಯ ಗೆದ್ದರೆ ಸಾಕು.
ಈಗಾಗಲೇ ಈ ಮೈದಾನದಲ್ಲಿ ಭಾರತ ಆಡಿರುವ ಕಾರಣ ಪಿಚ್ ವರ್ಮವನ್ನು ಅರತಿದೆ. ಹಿಂದಿನ ಪಂದ್ಯದಂತೆ, ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿನ ವಿಕೆಟ್ ನಿಧಾನಗತಿಯಿಂದ ಕೂಡಿದೆ. ಸ್ಪಿನ್ನರ್ಗಳು ನಿರ್ಣಾಯಕ ಪಾತ್ರವನ್ನು ವಹಿಸುವ ಸಾಧ್ಯತೆಯಿದೆ.
ಈ ಪಿಚ್ನಲ್ಲಿ ದೊಡ್ಡ ರನ್ಗಳನ್ನು ಹೊಡೆಯುವುದು ಸುಲಭದ ಕೆಲಸವಲ್ಲ. ಆರಂಭಿಕ ಓವರ್ಗಳಲ್ಲಿ ಇಲ್ಲಿನ ಪಿಚ್ ವೇಗಿಗಳು ಸ್ವಲ್ಪ ಸಹಾಯವನ್ನು ಮಾಡಲಿದೆ. ಇಲ್ಲಿ ಸರಾಸರಿ ಒಟ್ಟು 122 ರನ್ ಆಗಿರುವುದರಿಂದ 160 ಪ್ಲಸ್ ರನ್ ಕಲೆಹಾಕಿದರೆ ಎದುರಾಳಿಗೆ ಕಠಿಣ ಟಾರ್ಗೆಟ್ ಎನ್ನಬಹುದು.
ಜಾರ್ಜ್ಟೌನ್ನಲ್ಲಿನ ಹವಾಮಾನವು ಆಗಸ್ಟ್ 8 ರಂದು ಕ್ಲೀಯರ್ ಆಗಿದೆ. ತಾಪಮಾನವು 26 ರಿಂದ 40 ಡಿಗ್ರಿ ಸೆಲ್ಸಿಯಸ್ನ ನಡುವೆ ಇರುತ್ತದೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿಲ್ಲ. ಪಂದ್ಯ ನಡೆಯುವ ಸಮಯದಲ್ಲಿ ಗಾಳಿಯ ರಭಸವು ಸುಮಾರು 43 ಕಿಮೀ/ಗಂಟೆಯಷ್ಟಿದ್ದರೆ ತೇವಾಂಶವು ಸುಮಾರು 30 ಪ್ರತಿಶತದಷ್ಟು ಇರುತ್ತದೆ.
ಟೀಮ್ ಇಂಡಿಯಾಕ್ಕೆ ಇಂದಿನ ಪಂದ್ಯ ಬಹುಮುಖ್ಯವಾಗಿದೆ. ಯಾಕೆಂದರೆ ಮೂರನೇ ಟಿ20 ಸೋತರೆ ಹಾರ್ದಿಕ್ ಪಡೆ ಸರಣಿ ಕಳೆದುಕೊಳ್ಳಲಿದೆ. ಹೀಗಾದಲ್ಲಿ 17 ವರ್ಷಗಳ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಮೊದಲ ಸರಣಿ ಸೋತಂತಾಗುತ್ತದೆ.
ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಖಚಿತ ಎಂದೇ ಹೇಳಬಹುದು. ಯಾಕೆಂದರೆ ಹಿಂದಿನ ಎರಡೂ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ಹೀಗಾಗಿ ಶುಭ್ಮನ್ ಗಿಲ್ ಅವರನ್ನು ಕೈಬಿಟ್ಟು ಯಶಸ್ವಿ ಜೈಸ್ವಾಲ್ಗೆ ಅವಕಾಶ ಸಿಗುವ ಸಂಭವವಿದೆ.
ಬ್ಯಾಟಿಂಗ್ನಲ್ಲಿ ಹೆಚ್ಚಿನ ಆಯ್ಕೆ ಇಲ್ಲದ ಕಾರಣ ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ ಎಡವುತ್ತಿದ್ದರೂ ಆಡಿಸಲೇ ಬೇಕಿದೆ. ಹಾರ್ದಿಕ್ ಪಾಂಡ್ಯ ಕಡೆಯಿಂದ ನಾಯಕನ ಆಟ ಬರುತ್ತಿಲ್ಲ. ಕೇವಲ ಎರಡೇ ಎರಡು ಅಂತರರಾಷ್ಟ್ರೀಯ ಪಂದ್ಯವನ್ನಾಡಿರುವ ತಿಲಕ್ ವರ್ಮಾ ಮಾತ್ರ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ.