
ಮಹಿಳಾ ಪ್ರೀಮಿಯರ್ ಲೀಗ್ 2026 ರ ಸೀಸನ್ಗೆ ಅದ್ಭುತ ಆರಂಭ ಸಿಕ್ಕಿದೆ. ಮೊದಲ ಪಂದ್ಯವನ್ನು ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಗೆದ್ದುಕೊಂಡಿದ್ದ ಆರ್ಸಿಬಿ ಇದೀಗ ತನ್ನ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಎದುರಿಸಿದೆ. ಈ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿದ ಆರ್ಸಿಬಿ, ಯುಪಿ ತಂಡವನ್ನು 144 ರನ್ಗಳಿಗೆ ಸೀಮಿತಗೊಳಿಸಿದೆ.

ಈ ಪಂದ್ಯದಲ್ಲಿ ಆರಂಭದಿಂದಲೂ ಯುಪಿ ಬ್ಯಾಟಿಂಗ್ ವಿಭಾಗವನ್ನು ಕಾಡಿದ ಆರ್ಸಿಬಿ ಬೌಲರ್ಗಳು 50 ರನ್ಗಳ ಒಳಗೆ ತಂಡದ ಪ್ರಮುಖ 5 ವಿಕೆಟ್ ಉರುಳಿಸಿದರು. ಇದಕ್ಕೆ ಪೂರಕವಾಗಿ ಈ ಪಂದ್ಯದಲ್ಲಿ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್ಗಳು ಪತನಗೊಂಡವು. ಆದರೆ ಈ ಬಾರಿ ಹ್ಯಾಟ್ರಿಕ್ ಸಾಧಿಸಲಾಗಲಿಲ್ಲ. ಇದಕ್ಕೆ ಕಾರಣ ಏನೆಂದರೆ?

ಜನವರಿ 12, ಸೋಮವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಡಬ್ಲ್ಯೂಪಿಎಲ್ 2026 ಪಂದ್ಯದಲ್ಲಿ, ಸ್ಮೃತಿ ಮಂಧಾನ ನಾಯಕತ್ವದ ಬೆಂಗಳೂರು ತಂಡ ಮೊದಲು ಬೌಲಿಂಗ್ ಮಾಡಿತು. ಮತ್ತೊಮ್ಮೆ, ಇಂಗ್ಲೆಂಡ್ನ ಸ್ಟಾರ್ ವೇಗಿ ಲಾರೆನ್ ಬೆಲ್ ಇನ್ನಿಂಗ್ಸ್ನ ಮೂರನೇ ಓವರ್ನಲ್ಲಿ ತಮ್ಮ ಮೊದಲ ವಿಕೆಟ್ ಪಡೆದರು.

ಆರ್ಸಿಬಿಯ ಬಿಗಿಯಾದ ಬೌಲಿಂಗ್ನಿಂದಾಗಿ, ಯುಪಿ ವಾರಿಯರ್ಸ್ ಮುಕ್ತವಾಗಿ ರನ್ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ತಂಡ ಒತ್ತಡಕ್ಕೊಳಗಾಯಿತು. ಇದರ ಪರಿಣಾಮವಾಗಿ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಸೇರಿದಂತೆ ಬ್ಯಾಟಿಂಗ್ ಜೀವಾಳ ಎನಿಸಿಕೊಂಡಿದ್ದ ಪ್ರಮುಖ ಆಟಗಾರ್ತಿಯರು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು.

ಎಂಟನೇ ಓವರ್ನ ಮೊದಲ ಎಸೆತದಲ್ಲಿ ಶ್ರೇಯಾಂಕ ಪಾಟೀಲ್ ಯುಪಿ ನಾಯಕಿ ಲ್ಯಾನಿಂಗ್ ಅವರನ್ನು ಔಟ್ ಮಾಡಿದರೆ, ಫೋಬೆ ಲಿಚ್ಫೀಲ್ಡ್ ಮತ್ತು ಕಿರಣ್ ನವ್ಗಿರೆ ಆ ಓವರ್ನಲ್ಲಿ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಆದಾಗ್ಯೂ ಯುಪಿ ಆ ಬಳಿಕ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು.

ಮೊದಲು, ಲಿಚ್ಫೀಲ್ಡ್ ಔಟಾದರೆ, ನಂತರ ಮುಂದಿನ ಎಸೆತದಲ್ಲಿ ನವ್ಗಿರೆ ಔಟ್ ಆದರು. ಹೊಸ ಬ್ಯಾಟ್ಸ್ಮನ್ ಶ್ವೇತಾ ಸೆಹ್ರಾವತ್ ಮೊದಲ ಎಸೆತದಲ್ಲೇ ಖಾತೆ ತೆರೆಯದೆಯೇ ಔಟಾದರು. ಹೀಗಾಗಿ, ಯುಪಿ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು.

ಆದರೆ ಇದರ ಹೊರತಾಗಿಯೂ, ಹ್ಯಾಟ್ರಿಕ್ ಆಗಲಿಲ್ಲ. ವಾಸ್ತವವಾಗಿ ಯುಪಿ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್ಗಳನ್ನು ಕಳೆದುಕೊಂಡಿತ್ತಾದರೂ ಆ 3 ವಿಕೆಟ್ಗಳು ಎರಡು ವಿಭಿನ್ನ ಓವರ್ಗಳಲ್ಲಿ ಪತನಗೊಂಡವು. ಶ್ರೇಯಾಂಕ ಪಾಟೀಲ್ ಅವರ ಓವರ್ನ ಕೊನೆಯ ಎಸೆತದಲ್ಲಿ ಲಿಚ್ಫೀಲ್ಡ್ ಅವರ ವಿಕೆಟ್ ಪತನವಾದರೆ, ಮುಂದಿನ ಓವರ್ನಲ್ಲಿ ನಾಡಿನ್ ಡಿ ಕ್ಲರ್ಕ್ ಮೊದಲ ಎರಡು ಎಸೆತಗಳಲ್ಲಿ ನವ್ಗಿರೆ ಮತ್ತು ಸೆಹ್ರಾವತ್ ಅವರನ್ನು ಔಟ್ ಮಾಡಿದರು.

ಡಿ ಕ್ಲರ್ಕ್ ತಮ್ಮ ಓವರ್ನಲ್ಲಿ ಹ್ಯಾಟ್ರಿಕ್ ಪೂರ್ಣಗೊಳಿಸುವ ಅವಕಾಶವನ್ನು ಹೊಂದಿದ್ದರು, ಆದರೆ ಅದು ಆಗಲಿಲ್ಲ. ಈ ಇನ್ನಿಂಗ್ಸ್ನಲ್ಲಿ ಹ್ಯಾಟ್ರಿಕ್ ಸಾಧಿಸದಿದ್ದರೂ, ಆರ್ಸಿಬಿ ಕೇವಲ ಎಂಟು ಎಸೆತಗಳಲ್ಲಿ ನಾಲ್ಕು ವಿಕೆಟ್ಗಳನ್ನು ಪಡೆಯುವ ಮೂಲಕ ಯುಪಿ ವಾರಿಯರ್ಸ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು.