ಇಂದಿನಿಂದ 2 ದಿನಗಳ ಕಾಲ ನಡೆಯಲಿರುವ ಮಹತ್ವದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂಡೋನೇಷ್ಯಾದ ಬಾಲಿಗೆ ತೆರಳಿದ್ದಾರೆ.
ಬಾಲಿಗೆ ಬಂದಿಳಿದ ಪ್ರಧಾನಿ ಮೋದಿಗೆ ಅಲ್ಲಿನ ಸಂಪ್ರದಾಯದಂತೆ ಅದ್ಧೂರಿ ಸ್ವಾಗತ ನೀಡಲಾಯಿತು.
Narendra Modi
ಈ ವೇಳೆ ಅನಿವಾಸಿ ಭಾರತೀಯರು ಪ್ರಧಾನಿ ಮೋದಿಯವರನ್ನು ಭೇಟಿಯಾದರು. ವಿಮಾನ ಇಳಿಯುತ್ತಿದ್ದಂತೆ ಸಾಂಪ್ರದಾಯಿಕ ಹಾಗೂ ರಾಜತಾಂತ್ರಿಕ ಗೌರವವನ್ನು ಮೋದಿಯವರು ಸ್ವೀಕರಿಸಿದರು.
ಈಗಾಗಲೇ ಜಿ20 ಶೃಂಗಸಭೆ ಆರಂಭವಾಗಿದ್ದು, ಜಾಗತಿಕ ಅಭಿವೃದ್ಧಿ, ಆಹಾರ ಮತ್ತು ಇಂಧನ ಭದ್ರತೆ, ಆರೋಗ್ಯ ಹಾಗೂ ಡಿಜಿಟಲ್ ರೂಪಾಂತರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಜಾಗತಿಕ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಈ ಶೃಂಗ ಸಭೆಯೊಂದಿಗೆ ಇಂಡೋನೇಷ್ಯಾದ ಜಿ20 ಅಧ್ಯಕ್ಷೀಯ ಅವಧಿ ಮುಕ್ತಾಯವಾಗಲಿದ್ದು, ನ.16ರಂದು ಮುಂದಿನ ಒಂದು ವರ್ಷದ ಜಿ20 ಅಧ್ಯಕ್ಷೀಯ ಹುದ್ದೆ ಭಾರತಕ್ಕೆ ಹಸ್ತಾಂತರವಾಗಲಿದೆ.
ಇತ್ತೀಚೆಗೆ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ-20 ಶೃಂಗಸಭೆಯ ಸಂಗ್ರಹ ಚಿತ್ರ
ಜಿ20 ಸಮೂಹದಲ್ಲಿ ಜಗತ್ತಿನ ಪ್ರಮುಖ 20 ರಾಷ್ಟ್ರಗಳಿದ್ದು, ಈ ರಾಷ್ಟ್ರಗಳು ಜಗತ್ತಿನ ಒಟ್ಟು ಉತ್ಪನ್ನದಲ್ಲಿ ಶೇ.85ರಷ್ಟು ಪಾಲು ಹೊಂದಿವೆ. ಜಗತ್ತಿನ ಮೂರನೇ ಎರಡರಷ್ಟು ಜನಸಂಖ್ಯೆ ಇಲ್ಲಿದ್ದು, ಜಾಗತಿಕ ವ್ಯಾಪಾರದ ಶೇ.75ರಷ್ಟು ಈ ದೇಶಗಳಲ್ಲೇ ನಡೆಯುತ್ತದೆ.
ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಯುದ್ಧದ ಕುರಿತು ಮಾತನಾಡಿದರು.
ಕದನ ವಿರಾಮಕ್ಕೆ ಕರೆ ನೀಡಿದ ಮೋದಿ, ಯುದ್ಧ ಪೀಡಿತ ದೇಶದಲ್ಲಿ ಶಾಂತಿಯನ್ನು ವಾಪಾಸ್ ತರಲು ಜಗತ್ತು ಒಳ್ಳೆ ಮಾರ್ಗವನ್ನು ಕಂಡುಕೊಳ್ಳಬೇಕು. ಉಕ್ರೇನ್ನಲ್ಲಿನ ಯುದ್ಧ ನವೆಂಬರ್ 24ರಂದು 9 ತಿಂಗಳುಗಳನ್ನು ಪೂರ್ಣಗೊಳಿಸಲಿದೆ. ಇದು ಜಾಗತಿಕ ಆಹಾರ ಮತ್ತು ಇಂಧನ ಪೂರೈಕೆ ಸರಪಳಿಗೆ ಅಡ್ಡಿಪಡಿಸಿದೆ ಎಂದಿದ್ದಾರೆ.
ಉಕ್ರೇನ್ನಲ್ಲಿ ಕದನ ವಿರಾಮ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳಲು ನಾವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ನಾನು ಪದೇ ಪದೇ ಹೇಳಿದ್ದೇನೆ. ಕಳೆದ ಶತಮಾನದಲ್ಲಿ 2ನೇ ಮಹಾಯುದ್ಧ ವಿನಾಶವನ್ನು ಉಂಟುಮಾಡಿತು. ಆ ನಂತರ ಅಂದಿನ ನಾಯಕರು ಶಾಂತಿ ಮಾರ್ಗವನ್ನು ಅನುಸರಿಸಲು ಹಲವು ರೀತಿಯ ಪ್ರಯತ್ನಗಳನ್ನು ನಡೆಸಿದರು. ಈಗ ಇದು ನಮ್ಮ ಸರದಿ ಎಂದು ಮೋದಿ ಹೇಳಿದ್ದಾರೆ.
ಭಾರತದ ಇಂಧನ ಭದ್ರತೆಯು ಜಾಗತಿಕ ಬೆಳವಣಿಗೆಗೆ ಮುಖ್ಯವಾಗಿದೆ. ಏಕೆಂದರೆ ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ನಾವು ಶಕ್ತಿಯ ಪೂರೈಕೆಯ ಮೇಲೆ ಯಾವುದೇ ನಿರ್ಬಂಧಗಳನ್ನು ಉತ್ತೇಜಿಸಬಾರದು. ಇಂಧನದ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಬೇಕು. ಶುದ್ಧ ಇಂಧನ ಮತ್ತು ಪರಿಸರಕ್ಕೆ ಭಾರತ ಬದ್ಧವಾಗಿದೆ ಎಂದು ಮೋದಿ ಹೇಳಿದರು.
2030ರ ವೇಳೆಗೆ ನಮ್ಮ ಅರ್ಧದಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ಒತ್ತಿಹೇಳಿದ್ದಾರೆ.
ವಿಶ್ವದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾಮೂಹಿಕ ಸಂಕಲ್ಪವನ್ನು ಮಾಡುವುದು ಈ ಸಮಯದ ಅಗತ್ಯವಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.
ಮುಂದಿನ ವರ್ಷ ಬುದ್ಧ ಮತ್ತು ಗಾಂಧೀಜಿಯವರ ಪುಣ್ಯಭೂಮಿಯಲ್ಲಿ ಜಿ20 ಸಭೆ ನಡೆಯುವಾಗ ಜಗತ್ತಿಗೆ ಶಾಂತಿಯ ಬಲವಾದ ಸಂದೇಶವನ್ನು ಸಾರಲು ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ನನಗೆ ವಿಶ್ವಾಸವಿದೆ ಎಂದು ಮೋದಿ ಹೇಳಿದರು.