ಕೊಡಗಿಗೆ ಪ್ರವಾಸಕ್ಕೆ ಬರುವವರೆಲ್ಲಾ ಇಷ್ಟಪಡುವುದು ಇಲ್ಲಿನ ಪ್ರಕೃತಿಯನ್ನ, ಬೆಟ್ಟ ಗುಡ್ಡಗಳನ್ನ, ಹಚ್ಚ ಹಸಿರನ್ನ.. ಮಂಜು ಮುಸುಕಿದ ವಾತಾವರಣದಲ್ಲಿ ಚುಮು ಚುಮು ಚಳಿಯಲ್ಲಿ ಇದನ್ನೆಲ್ಲಾ ಎಂಜಾಯ್ ಮಾಡ್ತಾರೆ. ಇದೀಗ ಈ ಪ್ರವಾಸಿಗರ ಪಾಲಿಗೆ ಬೋನಸ್ ಆಗಿ ಹೊಸ ವ್ಯೂ ಪಾಯಿಂಟ್ ಲೋಕಾರ್ಪಣೆಗೊಂಡಿದೆ. ರಾಜಾಸೀಟ್ ಇದೀಗ ಗ್ರೇಟರ್ ರಾಜಾಸೀಟ್ ಆಗಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.
ರಾಜಾಸೀಟು... ಬಹುಶಃ ಕೊಡಗು ಜಿಲ್ಲೆಗೆ ಪ್ರವಾಸ ಬಂದವರಿಗೆ ಈ ಹೆಸರು ಬಹಳ ಪರಿಚಯ. ಹಿಂದೆ ಕೊಡಗಿನ ರಾಜ ಮಡಿಕೇರಿ ಬಳಿ (Madikeri) ಈ ರಾಜಾಸೀಟಿನಲ್ಲಿ ಕುಳಿತು ಸೂರ್ಯಾಸ್ತವನ್ನು ಆಸ್ವಾದಿಸುತ್ತಿದ್ದನಂತೆ. ಹಾಗಾಗಿ ಇಂದಿಗೂ ರಾಜಾಸೀಟ್ ಪ್ರವಾಸಿಗರ ಹಾಟ್ ಫೇವರಿಟ್. ಬೆಟ್ಟದ ತುತ್ತ ತುದಿಯಲ್ಲಿ ನಿಂತು ಸುತ್ತಲೂ ಹಸಿರ ರಾಶಿ, ಮಂಜು ಮುಸಿಕಿದ ಗಿರಿಕಂದರಗಳನ್ನು ವೀಕ್ಷಿಸುವುದೇ ಒಂದು ಅದ್ಭುತ ಅನುಭವ. ಇದೀಗ ಪ್ರವಾಸೋಧ್ಯಮ ಇಲಾಖೆ ಈ ರಾಜಾಸೀಟನ್ನು ವಿಶ್ವದರ್ಜೆಯ ಪ್ರವಾಸೀ ತಾಣವನ್ನಾಗಿಸಲು ಹೊರಟಿದೆ (Greater Raja Seat).
ಗ್ರೇಟರ್ ರಾಜಾಸೀಟ್ ಯೋಜನೆಯಡಿ ಪ್ರವಾಸೀತಾಣವನ್ನು ಊಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ 4.5 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಬೆಟ್ಟದ ತುದಿಯಲ್ಲಿ ಓಡಾಡಲು ಟ್ರ್ಯಾಕ್ ಗಳನ್ನು ನಿರ್ಮಿಸಿ 8 ವ್ಯೂ ಪಾಯಿಂಟ್ಗಳನ್ನು ಮಾಡಲಾಗುತ್ತಿದೆ. ಈ ವ್ಯೂ ಪಾಯಿಂಟ್ನಲ್ಲಿ ಪ್ರವಾಸಿಗರಿಗೆ ಮನಸೋ ಇಚ್ಚೆ ಪ್ರಕೃತಿಯನ್ನು ಆಸ್ವಾದಿಸಬಹದಾಗಿದೆ. ವಿಶಾಲ ಹುಲ್ಲಿನ ಲಾನ್ಗಳನ್ನು ಬೆಳೆಸಲಾಗುತ್ತಿದ್ದು, ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತದೆ. (ವರದಿ: ಗೋಪಾಲ್ ಸೋಮಯ್ಯ ಐಮಂಡ, ಟಿವಿ9, ಕೊಡಗು)
ರಾಜಾಸೀಟ್ ಬೆಟ್ಟದ ವಿವಿಧ ಭಾಗಗಳಲ್ಲಿ ಹತ್ತು ಹಲವು ಬಗೆಯ ಮರ ಗಿಡ, ಅಲಂಕಾರಿಕ ಗಿಡಗಳು, ಮಕ್ಕಳ ಪ್ಲೇಗ್ರೌಂಡ್, ಲಾನ್ ಹೀಗೆ ಹತ್ತು ಹಲವು ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಅಲ್ಲದೆ ಸಣ್ಣಪುಟ್ಟ ಸಭೆ ಸಭಾರಂಭಗಳನ್ನು ನಡೆಸಲು ಕೂಡ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.
ಈ ಯೋಜನೆಯ ಮೊದಲ ಹಂತ ಇದೇ ನವೆಂಬರ್ಗೆ ಸಂಪೂರ್ಣಗೊಳ್ಳಲಿದೆ. ಎರಡನೇ ಹಂತ ಮುಂದಿನ ಏಪ್ರಿಲ್ ವೇಳೆಗೆ ಮುಗಿಯಲಿದೆ. ಈ ಗ್ರೇಟರ್ ರಾಜಾಸೀಟ್ ಯೋಜನೆ ಸಂಪೂರ್ಣಗೊಂಡ ಬಳಿಕ ಇದು ಕೊಡಗು ಪ್ರವಾಸೋದ್ಯಮಕ್ಕೆ ಬಹುದೊಡ್ಡ ಆಸ್ತಿಯಾಗಲಿದೆ ಅನ್ನೋ ಅಭಿಪ್ರಾಯವಿದೆ.
ಕೊಡಗು ಜಿಲ್ಲೆಯ ಆಸ್ತಿಯೇ ಪ್ರಕೃತಿ. ಅದ್ರಲ್ಲೂ ಮಡಿಕೇರಿ ನಗರದ ಹೃದಯ ಭಾಗದಲ್ಲಿರೋ ಬೆಟ್ಟಗಳನ್ನ ಬಳಸಿ ಕಲಾತ್ಮಕವಾಗಿ ಹೊಸ ಪಾರ್ಕ್ ನಿರ್ಮಾಣಗೊಂಡಿದೆ. ಇದೀಗ ಇದೇ ಪ್ರಕೃತಿಯನ್ನು ಬಳಸಿಕೊಂಡು ಜಿಲ್ಲಾಡಳಿತ ಮಡಿಕೇರಿ ನಗರದ ಅಂದ ಹೆಚ್ಚಿಸಿದೆ. ಹಾಗಾಗಿ ರಾಜಸೀಟ್ ಇನ್ನು ಅಚ್ಚುಮೆಚ್ಚಿನ ತಾಣವಾಗೋದ್ರಲ್ಲಿ ಸಂಶಯವಿಲ್ಲ.
ರಾಜಸೀಟ್ ಇನ್ನು ಅಚ್ಚುಮೆಚ್ಚಿನ ತಾಣವಾಗೋದ್ರಲ್ಲಿ ಸಂಶಯವಿಲ್ಲ.