
ಫೆಬ್ರವರಿ 18ರಂದು ಮಹಾ ಶಿವರಾತ್ರಿ ಹಬ್ಬ ಹಿನ್ನೆಲೆ ರಾಜ್ಯದಲ್ಲಿ ಭರ್ಜರಿ ತಯಾರಿ ನಡೆದಿದೆ. ಹೊಸಕೋಟೆ ನಗರದ ಚೆನ್ನಬೈರೆಗೌಡ ಕ್ರೀಡಾಂಗಣದಲ್ಲಿ ಬೃಹತ್ ಶಿವಲಿಂಗ ಪ್ರತಿಷ್ಟಾಪನೆಗೆ ಶಿವ ಭಕ್ತರು ಮುಂದಾಗಿದ್ದಾರೆ.

ಶಿವರಾತ್ರಿ ಉತ್ಸವಕ್ಕಾಗಿ 60 ಅಡಿ ಎತ್ತರದ 108 ಲಿಂಗಗಳನ್ನ ಒಳಗೊಂಡ ಲಿಂಗ ನಿರ್ಮಾಣ ಮಾಡಲು ಭರ್ಜರಿ ತಯಾರಿ ನಡೆದಿದೆ. ಹಗಲು-ರಾತ್ರಿ ಎನ್ನದೆ ಭಕ್ತರು ಇದರ ನಿರ್ಮಾಣದಲ್ಲಿ ತೊಡಗಿದ್ದಾರೆ.

40 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಲಿಂಗ ನಿರ್ಮಾಣ ಮಾಡಲಾಗುತ್ತಿದೆ. ಮೂರು ದಿನಗಳ ಶಿವರಾತ್ರಿ ಉತ್ಸವಕ್ಕಾಗಿ ಸಚಿವ ಎಂಟಿಬಿ ನಾಗರಾಜ್ ಅವರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಶಿವಲಿಂಗದ ಮುಂಭಾಗ ಬೃಹತ್ ವೇದಿಕೆ ಮೂಲಕ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ವಿವಿಧ ಪ್ರಸಿದ್ಧ ಕಲಾವಿದರನ್ನ ಕರೆಸಿ ಮೂರು ದಿನಗಳ ಕಾಲ ಅದ್ಧೂರಿ ಕಾರ್ಯಕ್ರಮಕ್ಕೆ ತಯಾರಿ ನಡೆದಿದೆ.

ಇತ್ತೀಚೆಗಷ್ಟೆ ಮುಸ್ಲಿಂ ಸಮುದಾಯಕ್ಕಾಗಿ ಎಂಟಿಬಿ ಕವ್ವಾಲಿ ಕಾರ್ಯಕ್ರಮ ಮಾಡಿಸಿದ್ದರು. ಇದೀಗ ಶಿವರಾತ್ರಿಗಾಗಿ ಲಿಂಗ ಪ್ರತಿಷ್ಟಾಪನೆ ಮಾಡಿಸಿ ಉತ್ಸವ ಮಾಡುತ್ತಿದ್ದಾರೆ.

ಅವಿಮುಕ್ತೇಶ್ವರ ದೇವಸ್ಥಾನದದಲ್ಲಿ ವಿಶೇಷ ಪೂಜೆ ಹವನ ಇರಲಿದೆ. ಹಾಗೂ ನಾಳೆ 60 ಅಡಿ ಎತ್ತರದ ಶಿವಲಿಂಗ ಉದ್ಘಾಟನೆಯಾಗಲಿದೆ. ಬೃಹತ್ ಶಿವಲಿಂಗದ ದರ್ಶನಕ್ಕಾಗಿ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜಕೀಯ ನಾಯಕರು ಉತ್ಸವಗಳ ಮೊರೆ ಹೋಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದಲ್ಲಿ ಹಬ್ಬದ ಕಳೆ ಜೋರಾಗಿದೆ.
Published On - 2:50 pm, Thu, 16 February 23