
ಮೈಸೂರಿನ ಭುವನೇಶ್ವರಿ ದೇವಾಲಯ : ಮೈಸೂರು ಅರಮನೆಯ ಆವರಣದ ಉತ್ತರ ದ್ವಾರದ ಬಳಿ ಭುವನೇಶ್ವರಿ ದೇವಾಲಯವಿದೆ. ಗರ್ಭಗುಡಿಯಲ್ಲಿ ಭುವನೇಶ್ವರಿ ದೇವಿಯು ನೆಲೆಸಿದ್ದಾಳೆ. ಅರಮನೆಯ ವಾಸ್ತುಶಿಲ್ಪಿ ಸಿದ್ದಲಿಂಗಸ್ವಾಮಿಯವರೇ ಇದರ ವಾಸ್ತುಶಿಲ್ಪಿಯಾಗಿದ್ದು, ದ್ರಾವಿಡ ಶೈಲಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇಗುಲದಲ್ಲಿ ರಾಜರಾಜೇಶ್ವರಿ, ಚಾಮುಂಡೇಶ್ವರಿ, ಮಹೇಶ್ವರ, ಮಹಾಗಣಪತಿ, ಸೂರ್ಯನಾರಾಯಣ, ಮಹಾವಿಷ್ಣುವನ್ನು ಪೂಜಿಸಲಾಗುತ್ತದೆ.

ಬಾಗಲಕೋಟೆಯ ಭುವನೇಶ್ವರಿ ದೇಗುಲ : ಬಾಗಲಕೋಟೆ ಜಿಲ್ಲೆಯ ಕುಂದರಗಿ ಗ್ರಾಮದ ಬಳಿಯಿರುವ ಶಿರಿಗಿರಿ ಬೆಟ್ಟದಲ್ಲಿ ತಾಯಿ ಭುವನೇಶ್ವರಿ ದೇವಿಯೂ ನೆಲೆ ನಿಂತಿದ್ದಾಳೆ. ಇಲ್ಲಿ ಅಂಬಲಿ ತೀರ್ಥ ವಿಶೇಷವಾಗಿದ್ದು, ಇದನ್ನು ಕುಡಿದರೆ ಎಂತಹ ರೋಗ ರುಜಿನವಾದರೂ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದು. ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭುವನೇಶ್ವರಿ ದೇವಿಗೆ ಅಂಬಾರಿ ಮೆರವಣಿಗೆ ಸೇರಿದಂತೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಹಂಪಿಯ ಭುವನೇಶ್ವರಿ ಮಂದಿರ : ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಉತ್ತರ ಭಾಗದಲ್ಲಿ ಭುವನೇಶ್ವರಿ ಮಂದಿರವಿದೆ. ಈ ದೇಗುಲವು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿದ್ದು, ಕ್ರಿ.ಶ. 12ನೇ ಶತಮಾನದ ರಚನೆಗಳಾಗಿವೆ. ಕಲ್ಯಾಣ ಚಾಲುಕ್ಯರ ಶೈಲಿಯಲ್ಲೆ ಶ್ರೀ ಭುವನೇಶ್ವರಿ ದೇವಿಯ ವಿಗ್ರಹ ಕೆತ್ತಲಾಗಿದೆ ಈ ದೇವಸ್ಥಾನವು ಬಸಾಲ್ಟ್ ಶಿಲೆಯಲ್ಲಿ ಮಾಡಿದ ಇಲ್ಲಿನ ದುಂಡಾದ ಕಂಬಗಳು, ಛಾವಣಿ ಮತ್ತು ದ್ವಾರಬಂಧಗಳಂತಹ ಕೆತ್ತನೆಗಳಿಂದ ಕೂಡಿದ್ದು ಆಕರ್ಷಕವಾಗಿದೆ

ಬೆಂಗಳೂರಿನ ಭುವನೇಶ್ವರಿ ದೇವಸ್ಥಾನ : ಮಾಯಾನಗರಿ ಬೆಂಗಳೂರಿನಲ್ಲಿ ಹಲವೆಡೆ ಕನ್ನಡ ದೇವಿ ಭುವನೇಶ್ವರಿಯ ದೇವಾಲಯ ಹಾಗೂ ವೃತ್ತಗಳಿವೆ. ದೂಪನಹಳ್ಳಿಯ ಭುವನೇಶ್ವರಿಯ ಮೂರ್ತಿ, ಹೆಬ್ಬಾಳದ ಕೆಂಪಾಪುರ ಬಳಿ ಭುವನೇಶ್ವರಿ ಗುಡಿಯನ್ನು ಕಾಣಬಹುದು. ಇಂದಿರಾನಗರದ ಹತ್ತಿರದ ದೂಪನಹಳ್ಳಿಯಲ್ಲಿ 1991ರಲ್ಲಿ ಭುವನೇಶ್ವರಿ ದೇವಿ ದೇವಸ್ಥಾನವು ನಿರ್ಮಾಣ ಮಾಡಲಾಗಿದ್ದು, ಈ ದೇಗುಲದ ಸುತ್ತಲೂ ಶಿಲಾಕೆತ್ತನೆಯಿಂದ ಕೂಡಿದ್ದು ಆಕರ್ಷಕವಾಗಿದೆ.

ಸಿದ್ಧಾಪುರದ ಭುವನೇಶ್ವರಿ ದೇವಾಲಯ : ತಾಯಿ ಕನ್ನಡಾಂಬೆಗೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭುವನಗಿರಿ ಬಳಿ ದೇವಾಲಯ ಇದೆ. ಇದು ಕದಂಬರ ಕಾಲದ ದೇವಾಲಯವಾಗಿದ್ದು, ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಕದಂಬರು ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಸಿದ್ದಾಪುರ ಆಳುವ ಸಂದರ್ಭದ ಕಾಲದಲ್ಲಿ ಭುವನೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ತಮ್ಮ ಕುಲದೇವಿಯನ್ನಾಗಿ ಆರಾಧಿಸುತ್ತಿದ್ದರು. ಆದರೆ ಈ ದೇವಾಲಯದ ಪುನರ್ ನಿರ್ಮಾಣಗೊಳಿಸಿದ್ದು ಬಿಳಗಿ ಅರಸರು ಎನ್ನಲಾಗಿದೆ. ಕನ್ನಡಮ್ಮನಿಗೆ ಇಂದಿಗೂ ಇಲ್ಲಿ ತ್ರಿಕಾಲ ಪೂಜೆಗಳು ನಡೆಯುತ್ತವೆ.
Published On - 6:16 pm, Thu, 31 October 24