
‘ಪಿಕಲ್ಬಾಲ್ ಲೀಗ್ ಬೆಂಗಳೂರು ಒಪನ್ 2025’ ಟೂರ್ನಿಯಲ್ಲಿ ಅಟ್ಲಿ ಮಾಲಿಕತ್ವದ ‘ಬೆಂಗಳೂರು ಜವಾನ್ಸ್’ ತಂಡ ಆಡುತ್ತಿದೆ. ಈ ಕಾರ್ಯಕ್ರಮಕ್ಕೆ ಇಂದು (ಅಕ್ಟೋಬರ್ 10) ಬೆಂಗಳೂರಿನ ಪಿಕಲ್ ಬಾಲ್ ಕ್ಲಬ್ನಲ್ಲಿ ಚಾಲನೆ ನೀಡಲಾಯಿತು. ‘ಜವಾನ್’ ಖ್ಯಾತಿಯ ಪ್ಯಾನ್ ಇಂಡಿಯಾ ನಿರ್ದೇಶಕ ಅಟ್ಲಿ ಭಾಗಿಯಾದರು.

ಅ.10ರಿಂದ 12ರ ತನಕ ರೋಚಕ ಪಿಕಲ್ ಬಾಲ್ ಪಂದ್ಯಾವಳಿ ನಡೆಯಲಿವೆ. ಅದರ ಸಲುವಾಗಿ ಬೆಂಗಳೂರಿಗೆ ಆಗಮಿಸಿದ ತಮಿಳು ಸಿನಿಮಾರಂಗದ ಹೆಸರಾಂತ ಡೈರೆಕ್ಟರ್ ಅಟ್ಲಿ ಅವರು ‘ಬೆಂಗಳೂರು ಜವಾನ್ಸ್’ ಹೆಸರಿನ ತಂಡವನ್ನು ಖರೀದಿ ಮಾಡಿದ್ದಾರೆ. ಈ ಲೀಗ ಉದ್ಘಾಟಿಸಿ, ಸ್ಫರ್ಧಾಳುಗಳ ಜತೆ ಸ್ನೇಹಪೂರ್ವಕ ಮ್ಯಾಚ್ ಆಡಿದರು.

‘ನಾನು RCB ಫ್ಯಾನ್. ಬೆಂಗಳೂರು ತಂಡ ಕಳೆದ ಬಾರಿ ಐಪಿಎಲ್ ಗೆದ್ದಿತ್ತು. ನಮ್ಮ ಬೆಂಗಳೂರು ಜವಾನ್ಸ್ ತಂಡ ಕೂಡ ಗೆದ್ದಿತ್ತು. ನನಗೆ ಬೆಂಗಳೂರು ತುಂಬ ಇಷ್ಟ. ಇಲ್ಲಿನ ನಟರಾದ ಯಶ್, ರಿಷಬ್ ಶೆಟ್ಟಿ ಮುಂತಾದವರ ಜತೆ ನನಗೆ ಉತ್ತಮ ಸ್ನೇಹವಿದೆ. ಎಲ್ಲರೂ ಅದ್ಭುತವಾಗಿ ಕೆಲಸ ಮಾಡುತ್ತಾ ಇದ್ದಾರೆ’ ಎಂದು ಅಟ್ಲಿ ಹೇಳಿದರು.

‘ಜವಾನ್ ಸಿನಿಮಾ ಸೂಪರ್ ಹಿಟ್ ಆದ ಕಾರಣ ನಾನು ಖರೀದಿ ಮಾಡಿರುವ ಪಿಕಲ್ ಬಾಲ್ ತಂಡಕ್ಕೆ ಬೆಂಗಳೂರು ಜವಾನ್ಸ್ ಎಂದು ಹೆಸರಿಟ್ಟಿದ್ದೇನೆ. ಕಳೆದ ವರ್ಷ ಆರ್ಸಿಬಿ ತಂಡ ಐಪಿಎಲ್ ಟ್ರೋಫಿ ಗೆದ್ದಿತ್ತು. ಹಾಗೆಯೇ ಬೆಂಗಳೂರು ಜವಾನ್ಸ್ ಕೂಡ ಚಾಂಪಿಯನ್ಸ್ ಆಗಿತ್ತು’ ಎಂದು ಅಟ್ಲಿ ಅವರು ಸಂತಸ ಹಂಚಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಗ್ಗೆ ಅಟ್ಲಿ ಅವರು ಮಾತನಾಡಿದರು. ‘ಕಾಂತಾರ ನಿಜಕ್ಕೂ ಅದ್ಭುತ ಸಿನಿಮಾ. ನಾನು ನೋಡಿ ಬೆರಗಾಗಿದ್ದೇನೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಬಗ್ಗೆ ಸಖತ್ ಭಕ್ತಿ ಇದೆ ಎಂದು ಅವರು ಹೇಳಿದರು.