
ವರ್ಷಧಾರೆ ಕರುಣೆ ತೋರಿಸಿದೆ ರಾಜ್ಯದೆಲ್ಲೆಡೆ ಬರಗಾಲದ ಛಾಯೆ ಆವರಿಸಿದೆ. ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ದೇವನಹಳ್ಳಿಯ ಈ ಗ್ರಾಮದ ರೈತರು ಮಳೆಗಾಗಿ ಮಳೆರಾಯನಿಗೆ ಮೊರೆ ಇಟ್ಟಿದ್ದು ವಿಭಿನ್ನ ಆಚರಣೆಯನ್ನು ಮಾಡಿದ್ದಾರೆ.

ನಮ್ಮಲ್ಲಿ ಮಳೆಗಾಗಿ ಕತ್ತೆ ಮದುವೆ, ಕಪ್ಪೆ ಮದುವೆಗಳನ್ನು ಮಾಡುವುದು ಸಾಮಾನ್ಯ, ಇನ್ನೂ ಕೆಲ ಕಡೆ ವಿಭಿನ್ನ ಮಾದರಿಯ ಆಚರಣೆಗಳು ರೂಢಿಯಲ್ಲಿವೆ. ಆದ್ರೆ ದೊಡ್ಡಬಳ್ಳಾಪುರದ ಪಚ್ಚಾರಲಹಳ್ಳಿ ಗ್ರಾಮದಲ್ಲಿ ಗಂಡು ಮಗುವಿಗೆ ಹೆಣ್ಣಿನ ವೇಷ ಹಾಕಿಸಿ ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಲಾಗಿದೆ.

ಒಬ್ಬ ಬಾಲಕನಿಗೆ ಹುಡುಗಿ ವೇಷ ಹಾಕಿ ದಂಪತಿಗಳಂತೆ ಮದುವೆ ಮಾಡಿಸಿದ್ದಾರೆ. ಹುಡುಗನಿಗೆ ಪೇಟ, ಬಾಸಿಂಗ ಕಟ್ಟಿ ಹುಡುಗಿಗೆ ರೇಷ್ಮೆ ಸೀರೆ ಉಡಿಸಿ ಅಲಂಕಾರ ಮಾಡಿ ಶಾಸ್ತ್ರೋಕ್ತವಾಗಿ ಗ್ರಾಮಸ್ಥರೆ ಮುಂದೆ ನಿಂತು ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ. ಈ ರೀತಿ ಮದುವೆ ಮಾಡಿದ್ರೆ ಮಳೆಯಾಗುತ್ತೆ ಎಂಬುವುದು ಈ ಗ್ರಾಮದ ಜನರ ನಂಬಿಕೆ.

ರಿಯಾಲಿಟಿಯಲ್ಲಿ ಒಂದು ಗಂಡು-ಹೆಣ್ಣಿಗೆ ಯಾವ ರೀತಿ ಮದುವೆ ಮಾಡುತ್ತರೋ ಅದೇ ರೀತಿ ಶಾಸ್ತ್ರೋಕ್ತವಾಗಿ ಗ್ರಾಮದ ಜನರೆಲ್ಲಾ ಸೇರಿ ವಿಜೃಂಭಣೆಯಿಂದ ಮದುವೆ ಮಾಡಿ ಹಾಡುಗಳನ್ನಾಡಿ ಸಂಭ್ರಮಿಸಿದ್ದಾರೆ. ಊರಿನ ಜನರ ಈ ನಂಬಿಗೆ ಸುಳ್ಳಾಗದಿದ್ದರೆ ರಾಜ್ಯವೇ ವರ್ಷಧಾರೆಯ ಕೃಪೆಗೆ ತಣ್ಣಗಾಗಲಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಮಗಳಕೊಪ್ಪೆ ಗ್ರಾಮದಲ್ಲಿ ಕೂಡ ಇತ್ತೀಚೆಗೆ ಮಕ್ಕಳಿಗೆ ಮದುವೆ ಮಾಡಿ ವರುಣ ದೇವನಿಗೆ ಪ್ರಾರ್ಥಿಸಲಾಗಿತ್ತು. ಮಳೆ ಇಲ್ಲದೆ ಬೆಳೆ ಇಲ್ಲದೆ ಕಂಗಾಲಾಗಿದ್ದ ಗ್ರಾಮಸ್ಥರು ಮಕ್ಕಳಿಗೆ ಮದುವೆ ಮಾಡಿ ಮಳೆಗಾಗಿ ಬೇಡಿದ್ದರು. ಗ್ರಾಮದ ಬೀದಿಯಲ್ಲೇ ಗಂಡು-ಹೆಣ್ಣನ್ನು ಕೂರಿಸಿ ಮದುವೆಯ ಎಲ್ಲ ಸಂಪ್ರಾಯಗಳನ್ನು ಪಾಲಿಸಿ ಮದುವೆ ಮಾಡಲಾಗಿತ್ತು.

ಇನ್ನು ಹುಡುಗ ಹುಡುಗಿಗೆ ಶಾಸ್ತ್ರೋಕ್ತವಾಗಿ ತಾಳಿ ಕೂಡ ಕಟ್ಟಿದ್ದ. ಪುರೋಹಿತರು ಮಾಂಗಲ್ಯಂ ತಂತುನಾನೇನ ಅಂತ ಮಂತ್ರ ಕೂಡ ಪಠಿಸಿದ್ದರು. ನವ ದಂಪತಿ ಸಪ್ತಪದಿಯನ್ನೂ ತುಳಿದರು. ಬಳಿಕ ಗ್ರಾಮದ ಜನರಿಗೆ ಮದುವೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಈ ಆಚರಣೆಯಲ್ಲಿ ಬಾಲಕನಿಗೆ ಬಾಲಕಿಯ ವೇಷ ಹಾಕಲಾಗಿದೆ. ಇಬ್ಬರು ಬಾಲಕರನ್ನು ಮದುವೆ ಗಂಡು-ಹೆಣ್ಣಿನಂತೆ ಅಲಂಕಾರ ಮಾಡಿ ಮದುವೆ ಮಾಡಿ ಮಳೆಗಾಗಿ ದೇವರನ್ನು ಬೇಡಲಾಗಿದೆ.