ಹಾವೇರಿ ಜಿಲ್ಲಾಸ್ಪತ್ರೆ ಹಿಂಭಾಗ ಅನ್ನಸಂತರ್ಪಣೆ ಕೆಂದ್ರ ತೆರೆಯಲಾಗಿದ್ದು ನೂರಾರು ಜನರು ಪ್ರತಿ ದಿನ ಹೊಟ್ಟೆ ತುಂಬ ಊಟ ಮಾಡುವಂತಾಗಿದೆ. ದಾನಿಯೊಬ್ಬರು ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ.
ಹಾವೇರಿ ಜಿಲ್ಲಾಸ್ಪತ್ರೆಗೆ ಜಿಲ್ಲೆಯ ನಾನಾ ಕಡೆಗಳಿಂದ ಜನ ಬರುತ್ತಾರೆ ಅದರಲ್ಲಿ ಬಡವರೇ ಹೆಚ್ಚಾಗಿ ಬರುತ್ತಾರೆ. ಇದನ್ನ ಮನಗಂಡ ಉದ್ಯಮಿ ಬಹದ್ದೂರ್ ದೇಸಾಯಿ ತಮ್ಮ ತಂದೆ ಕುಶ ಅವರ ಸ್ಮರಣಾರ್ಥ ಅನ್ನ ಸಂತರ್ಪಣೆ ಮಾಡಲು ಮುಂದಾಗಿದ್ದು ಪ್ರತಿದಿನ ಕನಿಷ್ಠ ನೂರು ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.
ಒಂದು ವರ್ಷಗಳ ಕಾಲ ಈ ಅನ್ನಸಂತರ್ಪಣೆ ಮಾಡಲು ಉದ್ದೇಶಿಸಿ ಕಳೆದ ಒಂದು ತಿಂಗಳಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರನ್ನು ಗುರುತಿಸಿ ಅವರಿಗೆ ಪ್ರತಿದಿನ ಹನ್ನೆರಡು ಘಂಟೆಯಿಂದ ಒಂದು ಘಂಟೆಯ ವರೆಗೆ ಊಟ ಬಡಿಸುವ ಕಾರ್ಯ ಮಾಡುತ್ತಿದ್ದಾರೆ.
ಆಸ್ಪತ್ರೆ ಸಿಬ್ಬಂದಿಯೇ ರೋಗಿಗಳ ಕುಟುಂಬಸ್ಥರಿಗೆ ಕೋಪನ್ ನೀಡುತ್ತಿದ್ದು ಆಸ್ಪತ್ರೆ ಹಿಂಭಾಗದಲ್ಲಿರುವ ಅನ್ನಸಂತರ್ಪಣೆ ಕೇಂದ್ರದಲ್ಲಿ ನೂರಕ್ಕೂ ಹೆಚ್ಚು ಜನರು ಪ್ರತಿ ದಿನ ಊಟ ಸೇವಿಸುತ್ತಿದ್ದಾರೆ. ವಾರದಲ್ಲಿ ಮೂರು ದಿನ ಅನ್ನ ಸಾಂಬಾರ್, ಉಪ್ಪಿನಕಾಯಿ, ಎರಡು ದಿನ ಪಲಾವ್, ಒಂದು ದಿನ ಉಪ್ಪಿಟ್ಟು ಕೇಸರಿ ಬಾತ್ ನೀಡುತ್ತಾರೆ.
ಆಸ್ಪತ್ರೆ ಸುತ್ತಲೂ ಇರುವ ಹೋಟೆಲ್ಗಳಲ್ಲಿ ನೂರಾರು ರೂ ಕೊಟ್ಟು ಊಟ ಮಾಡುವುದಕ್ಕಿಂತ ಇಲ್ಲಿ ನೀಡುವ ಊಟ ರುಚಿಯಾಗಿದ್ದು ಊಟ ಮಾಡುವ ಜನ ಖುಷಿಯಾಗಿ ಊಟ ಮಾಡುತ್ತಿದ್ದಾರೆ. ಹಳ್ಳಿಯಿಂದ ಬರುವ ಬಡ ಜನರೆ ಹೆಚ್ಚಾಗಿ ಜಿಲ್ಲಾಸ್ಪತ್ರೆಗೆ ಬರುವುದರಿಂದ ಅವರಿಗೆ ಇಲ್ಲಿ ಸಿಗುವ ಊಟ ಉಪಯುಕ್ತವಾಗುತ್ತಿದೆ.
ಪ್ರತಿದಿನ ನೂರಾರು ಜನ ಅನ್ನಸಂತರ್ಪಣೆ ಮಾಡುವವರಿಗೆ ಹರಸಿ ಹೋಗುತ್ತಾರೆ. ಇದರ ಜೊತೆಗೆ ಆಸ್ಪತ್ರೆ ಸಿಬ್ಬಂದಿಯೆ ಮೇಲ್ವಿಚಾರಣೆ ಮಾಡಿ ವ್ಯವಸ್ಥಿತವಾಗಿ ಊಟ ನೀಡುವುದರಿಂದ ಹಸಿದವರು ಹಾಗು ದುರುಪಯೋಗ ಆಗದೆ ಇರುವ ರೀತಿ ಅನ್ನಸಂತರ್ಪಣೆ ನಡೆಯುತ್ತಿದೆ. ಜಿಲ್ಲಾ ಆಸ್ಪತ್ರೆ ಸಹಯೋಗ ಹಾಗು ಬಹದ್ದೂರ್ ದೇಸಾಯಿ, ಅದಮ್ಯ ಚೇತನ ಫೌಂಡೆಶನ್ ಸಹಕಾರದ ಜೊತೆಗೆ ತಂದೆಯ ಸ್ಮರಣಾರ್ಥ ಪ್ರತಿದಿನ ನೂರಾರು ಜನರಿಗೆ ಅನ್ನಸಂತರ್ಪಣೆ ಮಾಡುವ ಬಹದ್ದೂರ್ ದೇಸಾಯಿ ಅವರಿಗೆ ಧನ್ಯವಾದ ಹೇಳಲೇಬೇಕು.