ಇನ್ನೇನು ಕೆಲ ದಿನಗಳಲ್ಲಿ ಬರುವ ನಾಗರ ಪಂಚಮಿ ಹಬ್ಬದಂದು ನಾಗರ ಕಲ್ಲಿಗೆ ಹಾಲನ್ನು ಎರೆಯುವುದು ಹೆಚ್ಚಾಗಿರುತ್ತದೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಯನ್ನ ವಿಶೇಷವಾಗಿ ಆಚರಿಸುತ್ತಾರೆ. ಇದೇ ಕಾರಣಕ್ಕೆ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದ ಪಂಚಮಸಾಲಿ ಗುರುಪೀಠ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿಶೇಷ ಪ್ಲಾನ್ವೊಂದನ್ನ ಮಾಡುತ್ತಿದ್ದಾರೆ.
ಈ ಹಿಂದೆ ದಾವಣಗೆರೆ ವಿರಕ್ತಮಠದ ಸ್ವಾಮೀಜಿ ಆಗಿದ್ದರು. ಆಗಿನಿಂದಲೂ ಇಂತಹ ವಿಶೇಷ ಕಾರ್ಯಕ್ರಮ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಬಹುತೇಕ ಕಡೆ ಸಂಚರಿಸಿ ಕಲ್ಲು ನಾಗರಕ್ಕೆ ಹಾಕುವ ಹಾಲು, ಬಡ ಮಕ್ಕಳ ಪಾಲು ಎಂದು ಒಂದು ದೊಡ್ಡ ಆಂದೋಲನ ಶುರು ಮಾಡಿದ್ದಾರೆ.
ಇಂದು ಕೂಡ ಸ್ವಾಮೀಜಿಗಳು ದಾವಣಗೆರೆ ಕೆಲ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಹಾಲು ಹಾಗೂ ಬ್ರೇಡ್ ವಿತರಿಸಿದರು. ವಿಶೇಷ ಅಂದರೆ ಇದು ಸತತ 26 ವರ್ಷಗಳಿಂದ ನಡೆದುಕೊಂಡ ಬಂದ ಅಭಿಯಾನ ಎಂಬುದು ಬಹುತೇಕರಿಗೆ ಗೊತ್ತಿಲ್ಲ.
ಇಡೀ ಶ್ರಾವಣ ಮಾಸದಲ್ಲಿ ಉತ್ತರ ಕರ್ನಾಟಕದ 120ಕ್ಕೂ ಹೆಚ್ಚು ಕಡೆ ಸ್ವಾಮೀಜಿ ಇಂತಹ ಕಾರ್ಯಕ್ರಮ ನಡೆಸುತ್ತಿದ್ದಾರೆ. ಹೆಚ್ಚಾಗಿ ಬಡ ಮಕ್ಕಳು ಓದುತ್ತಿರುವ ಶಾಲೆಗಳಿಗೆ ಹೋಗುತ್ತಾರೆ. ಅಲ್ಲಿ ಅವರಿಗೆ ನಾಗರ ಪಂಚಮಿ ಹೆಸರಿನಲ್ಲಿ ಕಲ್ಲು ನಾಗರಕ್ಕೆ ಹಾಲು ಹಾಕುವುದು ತಪ್ಪು. ಇದೊಂದು ಮೂಢ ನಂಬಿಕೆ ಎಂಬುದನ್ನ ಮನವರಿಕೆ ಮಾಡುತ್ತಾರೆ.
ಹೀಗೆ ಪುರಾತನ ಕಾಲದಿಂದಲೂ ನಿರಂತರವಾಗಿ ನಡೆದುಕೊಂಡು ಬಂದಿರುವ ಮೂಢ ನಂಬಿಕೆಯ ವಿರುದ್ಧ ಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ. ಕಳೆದ 26 ವರ್ಷಗಳಿಂದ ಇಂತಹ ಕೆಲಸ ಸ್ವಾಮೀಜಿ ಮಾಡುತ್ತಿದ್ದಾರೆ.
ವಿಶೇಷವಾಗಿ ನಾಗರ ಪಂಚಮಿಯ ದಿನ ಕೂಡ ಮಹಿಳೆಯರಿಗೆ ತಿಳುವಳಿಕೆ ನೀಡುತ್ತಾರೆ. ಕಲ್ಲು ನಾಗರಕ್ಕೆ ಹಾಕುವ ಹಾಲು ತಮ್ಮ ಮಕ್ಕಳಿಗೆ ಕುಡಿಸಿ ಎಂಬುದು ಸ್ವಾಮೀಜಿ ಉದ್ದೇಶ. ಜೊತೆಗೆ ಮೂಢ ನಂಬಿಕೆಗಳಿಂದ ಹೊರ ಬರಲಿ ಎಂಬುದು ಸ್ವಾಮೀಜಿ ಆಶಯವಾಗಿದೆ.