
ಪ್ರಕೃತಿಯನ್ನು ಉಳಿಸಿಕೊಳ್ಳಬೇಕು, ಗಿಡ-ಮರಗಳನ್ನು ನೆಡಬೇಕು ಎಂಬ ಜಾಗೃತಿ ಮಾತುಗಳನ್ನು, ಜಾಹಿರಾತುಗಳನ್ನು ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಆದರೆ, ಅನೇಕರು ಕೇಳಿಸಿಕೊಂಡು ಸುಮ್ಮನಾಗುತ್ತಾರೆ ಹೊರತು ಪಾಲಿಸುವುದಿಲ್ಲ. ಆದರೆ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಳಕಾರ ಗ್ರಾಮದ ಜನರು ಪ್ರಕೃತಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹಳಕಾರ ಗ್ರಾಮದ ಜನರು ಶತಮಾನಗಳಿಂದಲೂ ಕಾಡನ್ನು ದೇವರಂತೆ ಆರಾಧಿಸುತ್ತಾ ಬಂದಿದ್ದಾರೆ. 425 ಏಕರೆ ವಿಸ್ತಿರ್ಣದ ಹಳಕಾರ ಗ್ರಾಮದಲ್ಲಿದೆ 219 ಏಕರೆ ಪ್ರದೇಶದಲ್ಲಿ ಗಿಡ-ಮರಗಳೇ ಇವೆ. 1920ರಿಂದ ಇದುವರೆಗೂ ಒಂದೇ ಒಂದು ಅಡಿ ಅರಣ್ಯ ಭೂಮಿಯನ್ನು ಗ್ರಾಮಸ್ಥರು ಅತಿಕ್ರಮಣ ಮಾಡದೆ ಉಳಿಸಿಕೊಂಡಿದ್ದಾರೆ.

ಈ ಮೊದಲು ಒಟ್ಟು 265 ಏಕರೆ ಅರಣ್ಯ ಭೂಮಿ ಗ್ರಾಮದಲ್ಲಿತ್ತು. ಆ ಪೈಕಿ 46 ಏಕರೆ ಜಮೀನನ್ನು ರೈಲು ಹಳಿ ನಿರ್ಮಾಣಕ್ಕೆ ನೀಡಲಾಗಿದೆ. ಹೀಗಾಗಿ, 219 ಎಕರೆ ಪ್ರದೇಶದಲ್ಲಿ ಮಾತ್ರ ಅರಣ್ಯ ಸಂಪತ್ತು ಇದೆ. ಅರಣ್ಯದ ಒಂದೆ ಒಂದು ಗಿಡ ಕಡಿದರೆ ಗ್ರಾಮಸ್ಥರೇ ಶಿಕ್ಷೆ ಕೊಡುತ್ತಾರೆ. ಕಾಡಿನ ಒಣ ಗೀಡ ತೆರವು ಮಾಡಲು ಕೂಡ, ಗ್ರಾಮಸ್ಥರೆಲ್ಲರು ಒಮ್ಮತಕ್ಕೆ ಬರಬೇಕು.

ಹಳಕಾರ ಕಾಡಿನಲ್ಲಿರುವ ಯಾವ ಮರವು ಫಲ ನೀಡುವುದಿಲ್ಲ. ಈ ಅರಣ್ಯದಿಂದ ಯಾವ ಆದಾಯವೂ ಬರದೆ ಇದ್ದರೂ ಗ್ರಾಮಸ್ಥರು ರಕ್ಷಿಸಿಕೊಂಡು ಬಂದಿದ್ದಾರೆ. ಅರಣ್ಯ ರಕ್ಷಣೆಗೆ ರಕ್ಷಕನನ್ನು ಕೂಡ ಇರಿಸಲಾಗಿದೆ.

ವರ್ಷಕ್ಕೆ ಹತ್ತು ಒಣ ಗಿಡಗಳನ್ನು ತೆರವು ಮಾಡಿ, ಅದೆ ಜಾಗದ ಸುತ್ತ ನೂರಕ್ಕೂ ಹೆಚ್ಚು ಸಸಿಗಳನ್ನು ಗ್ರಾಮಸ್ಥರು ನೆಡುತ್ತಾರೆ. ಒಣ ಗಿಡವನ್ನು ಗ್ರಾಮಸ್ಥರ ಒಮ್ಮತದಿಂದಲೆ ಹರಾಜು ಮಾಡಲಾಗುತ್ತೆ. ಅರಣ್ಯದ ಕೆಲವು ಗಿಡಗಳಿಂದ ಬರುವ ಹೂವನ್ನು ಮಾರಾಟ ಮಾಡಿ ಅರಣ್ಯ ರಕ್ಷಣೆಗೆ ವ್ಯಯ ಮಾಡಲಾಗುತ್ತೆ.

ಹಳಕಾರ ಗ್ರಾಮದಲ್ಲಿ ತೀರ ಬಡವರು ಕೂಲಿ ಕಾರ್ಮಿಕರು ವಾಸಿಸುತ್ತಿದ್ದಾರೆ. ಈಗ ಕೆಲವರು ವಿದ್ಯಾವಂತರಾಗಿ ತಮ್ಮ ಜಮೀನುಗಳಲ್ಲಿ ಮನೆ ಕಟ್ಟಿಸಿಕೊಂಡಿದ್ದಾರೆ. ನಮ್ಮ ಗ್ರಾಮದ ಆಸ್ತಿ ಸೌಂದರ್ಯವೇ ನಮ್ಮ ಕಾಡು, ನಮ್ಮ ಕಾಡಿನ ಒಂದೊಂದು ಮರವೂ ಮನೆ ಮಕ್ಕಳ ಸಮಾನ ಎಂದು ಗ್ರಾಮಸ್ಥರು ಅಂದುಕೊಂಡಿದ್ದಾರೆ.

ದೇಶ ವಿದೇಶಗಳಿಂದ ತಜ್ಞರು ಬಂದು ಈ ಗ್ರಾಮಸ್ಥರ ಬಗ್ಗೆ ಅಧ್ಯಯನ ಮಾಡಿದ್ದಾರೆ. ಇದುವರೆಗೂ ನಾಲ್ಕು ಜನರು ಈ ಗ್ರಾಮದ ಕುರಿತು ಅಧ್ಯಯನ ಮಾಡಿ ಪಿಹೆಚ್ಡಿ ಪಡೆದಿದ್ದಾರೆ.
Published On - 10:45 am, Sun, 17 November 24