ಜನಾಭಿಪ್ರಾಯವಿಲ್ಲದ ಬಿಜೆಪಿ ಸರ್ಕಾರಕ್ಕೆ ಮುಂದೆ ಅಧಿಕಾರ ಸಿಗಲ್ಲವೆಂದು ಗೊತ್ತಿದೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ಗುಡುಗು

ಕಪೋಲ ಕಲ್ಪಿತ 'ಚುನಾವಣಾ ಚಾಣಕ್ಯ'ನ ವಾಸ್ತವ ನಡವಳಿಕೆ ಬಿಜೆಪಿ ನಾಯಕರಿಗೇ ಗೊತ್ತಿದೆ. ಕ್ರಿಮಿನಲ್ ಪ್ರಕರಣದಲ್ಲಿ ಜೈಲು ಸೇರಿ ಬಂದವರ ರೌಡಿಸಂ ವರ್ತನೆ ಸಹಜ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಟೀಕೆ ಮಾಡಿದೆ.

ಜನಾಭಿಪ್ರಾಯವಿಲ್ಲದ ಬಿಜೆಪಿ ಸರ್ಕಾರಕ್ಕೆ ಮುಂದೆ ಅಧಿಕಾರ ಸಿಗಲ್ಲವೆಂದು ಗೊತ್ತಿದೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ಗುಡುಗು
ಟ್ವಿಟರ್​ನಲ್ಲಿ ಬಿಜೆಪಿ ಎಂಎಲ್​ಸಿ ಸಿಪಿ ಯೋಗೇಶ್ವರ್ ಫೋಟೋ ಹಂಚಿಕೊಂಡ ಕಾಂಗ್ರೆಸ್ (ಎಡ ಚಿತ್ರ)
Edited By: Rakesh Nayak Manchi

Updated on: Jan 14, 2023 | 3:48 PM

ಬೆಂಗಳೂರು: ಬಿಜೆಪಿ ಎಂಎಲ್​ಸಿ ಸಿ.ಪಿ.ಯೋಗೇಶ್ವರ್ (C.P.Yogeshwar) ಕಾರ್ಯಕರ್ತರೊಬ್ಬರ ಜೊತೆ ಮಾತನಾಡಿದ್ದು ಎನ್ನಲಾದ ಆಡಿಯೋ ಸಖತ್ ವೈರಲ್ (Audio Viral) ಆಗಿದೆ. ಮೈಸೂರು ಭಾಗದಲ್ಲಿ ಬಿಜೆಪಿ ಹೇಗೆ ಗೆಲ್ಲುತ್ತದೆ, ಬಿಜೆಪಿಗೆ ಜನಾಭಿಪ್ರಾಯ ಇಲ್ಲ, ಜೆಡಿಎಸ್​ ಹಾಲಿ ಶಾಸಕರು ಎಷ್ಟು ಸೋಲುತ್ತಾರೆ, ಚುನಾವಣೆ ಪೂರ್ವ ಆಪರೇಶನ್ ಕಮಲ, ಸಿದ್ದರಾಮಯ್ಯ ಗೆಲುವು, ಅಮಿತ್ ಶಾ (Amit Shah) ರೌಡಿ ಇದ್ದಂಗೆ ಇತ್ಯಾದಿಗಳನ್ನು ಆಡಿಯೋದಲ್ಲಿ ಕೇಳಿಸಬಹುದು. ಸದ್ಯ ಆಡಿಯೋ ರಾಜ್ಯ ಕಾಂಗ್ರೆಸ್ (Karnataka Congress) ಪಾಲಿಗೆ ಪ್ರಬಲ ಅಸ್ತ್ರ ಸಿಕ್ಕಂತಾಗಿದ್ದು, ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ (BJP Karnataka) ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದೆ.

ಜನಾಭಿಪ್ರಾಯದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂಬ ಆಡಿಯೋದಲ್ಲಿನ ಹೇಳಿಕೆ ಸಂಬಂಧ ಟ್ವೀಟ್ ಮಾಡಿದ ಕಾಂಗ್ರೆಸ್, ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯ ಬಿಜೆಪಿ ನಾಯಕರ ಬಾಯಲ್ಲೇ ಕಾಣಿಸುತ್ತಿದೆ. ಈ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಜನಾಭಿಪ್ರಾಯ ಇಲ್ಲ, ಮುಂದೆ ಅಧಿಕಾರಕ್ಕೆ ಬರುವುದೂ ಇಲ್ಲ ಎಂಬ ಸತ್ಯ ಅವರಿಗೂ ಗೊತ್ತಿದೆ. ಡಬಲ್ ಇಂಜಿನ್ ಸರ್ಕಾರ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ ಎಂದು ಟೀಕಿಸಿದೆ.

ಕೇಂದ್ರ ಗೃಹಸಚಿವ ಅಮಿತ್ ಶಾ ರೌಡಿ ಇದ್ದ ಹಾಗೆ, ಯಾರನ್ನೂ ಬಿಡುವುದಿಲ್ಲ ಎಂಬ ಆಡಿಯೋದಲ್ಲಿನ ಹೇಳಿಕೆ ಸಂಬಂಧ ಟ್ವೀಟ್ ಮಾಡಿದ ಕಾಂಗ್ರೆಸ್, ಕಪೋಲ ಕಲ್ಪಿತ ‘ಚುನಾವಣಾ ಚಾಣಕ್ಯ’ನ ವಾಸ್ತವ ನಡವಳಿಕೆ ಬಿಜೆಪಿ ನಾಯಕರಿಗೇ ಗೊತ್ತಿದೆ. ಕ್ರಿಮಿನಲ್ ಪ್ರಕರಣದಲ್ಲಿ ಜೈಲು ಸೇರಿ ಬಂದವರ ರೌಡಿಸಂ ವರ್ತನೆ ಸಹಜ. ನಾಯಕರೇ ರೌಡಿಗಳಾಗಿರುವಾಗ ಅವರ ಪಕ್ಷಕ್ಕೆ ರೌಡಿಗಳ ಸೇರ್ಪಡೆಯೂ ಸಹಜವೇ. ಬಿಜೆಪಿ ಪಕ್ಷ ರೌಡಿಗಳ ಪಕ್ಷ ಎಂಬುದು ಅವರ ನಾಯಕರಿಂದಲೇ ಮತ್ತೊಮ್ಮೆ ಸಾಬೀತಾಗಿದೆ ಎಂದಿದೆ.

ಇದನ್ನೂ ಓದಿ: 2023ರ ಚುನಾವಣೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಪಾರುಪತ್ಯ ಸಾಧಿಸಲು ಬಿಜೆಪಿ ರಣತಂತ್ರ, ಇತ್ತ ರಿವರ್ಸ್ ಆಪರೇಷನ್​ಗೆ ಕೈ ಪ್ಲ್ಯಾನ್!

ಆರ್.ಅಶೋಕ್ ತಾಕತ್ತಿದ್ದರೆ ಡಿ.ಕೆ.ಶಿವಕುಮಾರ್ ಎದುರು ಚುನಾವಣೆಗೆ ಸ್ಪರ್ಧಿಸಲಿ ಎಂಬ ಆಡಿಯೋದಲ್ಲಿನ ಹೇಳಿಕೆಯನ್ನು ಮುಂದಿಟ್ಟುಕೊಂಡು ಟ್ವೀಟ್ ಮಾಡಿದ ಕಾಂಗ್ರೆಸ್, ಆಪರೇಷನ್ ಕಮಲದ ಮೂಲಕ ಅಧಿಕಾರ ಪಡೆದ ಬಿಜೆಪಿ ನಿಜ ಬಣ್ಣ ದಿನೇ ದಿನೇ ಬಟಾ ಬಯಲಾಗುತ್ತಿದೆ! ವಾಮ ಮಾರ್ಗದ ಮೂಲಕ ಅಧಿಕಾರ ಪಡೆದ ಬಿಜೆಪಿ ತನ್ನದೇ ಪಕ್ಷದ ಶಾಸಕರ ಹೇಳಿಕೆಗಳಿಂದ ಪ್ರತಿ ದಿನ ಬೆತ್ತಲಾಗುತ್ತಿದೆ. ರಾಜ್ಯದ ಜನ ಬಿಜೆಪಿಗೆ ಪಾಠ ಕಲಿಸಲು ಕಾಯ್ತಿತಿದ್ದಾರೆ! ಎಂದಿದೆ.

ಈ ಬಾರಿ ಚುನಾವಣೆಗೂ ಮೊದಲೇ ಆಪರೇಷನ್ ಕಮಲ ಮಾಡುತ್ತೇವೆ, ಬೇರೆ ಪಕ್ಷದಲ್ಲಿ ಗೆಲ್ಲುವ ನಾಯಕರನ್ನು ಬಿಜೆಪಿಗೆ ಕರೆತರುತ್ತೇವೆ ಎಂಬ ಆಡಿಯೋದಲ್ಲಿನ ಹೇಳಿಕೆ ಮುಂದಿಟ್ಟುಕೊಂಡು ಟ್ವೀಟ್ ಮಾಡಿದ ಕಾಂಗ್ರೆಸ್, ಈ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಜನಾಭಿಪ್ರಾಯ ಇಲ್ಲವೇ ಇಲ್ಲ. ಸ್ವಂತ ಶಕ್ತಿಯ ಮೇಲೆ ಗೆಲ್ಲುವ ಸಾಮರ್ಥ್ಯವೂ ಇಲ್ಲ. ಆಪರೇಷನ್ ಕಮಲದಂತಹ ಅನಿಷ್ಟಗಳ ಮೂಲಕ ಸರ್ಕಾರ ಮಾಡುತ್ತೇವೆ ಎಂದು ಘಂಟಾಘೋಷವಾಗಿ ಲಜ್ಜೆಯಿಲ್ಲದೆ ಹೇಳಿಕೊಳ್ಳುವ ಪ್ರಪಂಚದ ಏಕೈಕ ಪಕ್ಷ ಬಿಜೆಪಿ ಎಂದು ವಾಗ್ದಾಳಿ ನಡೆಸಿದೆ.

ಇನ್ನು, ಸಚಿವ ಮುರುಗೇಶ್ ನಿರಾಣಿ ಮತ್ತು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನಡುವಿನ ಶೀತಲಸಮರ ಹಾಗೂ ವಾಗ್ವಾದದವನ್ನು ಮುಂದಿಟ್ಟುಕೊಂಡು ಟ್ವೀಟ್ ಮಾಡಿದ ಕಾಂಗ್ರೆಸ್, ಅಸಹ್ಯದ ಪರಮಾವಧಿ ತಲುಪಿದೆ ಬಿಜೆಪಿ. ಒಬ್ಬರು ‘ನೀಚ’ ಎನ್ನುತ್ತಾರೆ. ಮತ್ತೊಬ್ಬರು ‘ಪಿಂಪ್’ ಎನ್ನುತ್ತಾರೆ. ಇನ್ನೊಬ್ಬರು ‘ಸಿಡಿ’ ಎನ್ನುತ್ತಾರೆ. BJP vs BJP ಕಿತ್ತಾಟ ಅತ್ಯಂತ ಕೀಳು ಹಂತಕ್ಕೆ ತಲುಪಿದೆ. ತಮ್ಮ ಪಕ್ಷವನ್ನೇ ನಿಭಾಯಿಸಲಾಗದ ಅಸಮರ್ಥರಾದ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಬಗ್ಗೆ ಮಾತಾಡುವುದು ಆಕಾಶಕ್ಕೆ ಉಗುಳಿದಂತೆಯೇ ಸರಿ ಎಂದು ಟೀಕಿಸಿದೆ.

ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಮತ್ತು ಸಚಿವ ಮುರುಗೇಶ್ ನಿರಾಣಿ ಮಧ್ಯೆ ಕೆಲ ದಿನಗಳಿಂದ ವಾಕ್​ ಸಮರ ನಡೆಯುತ್ತಿದೆ. ಪರಸ್ಪರವಾಗಿ ಇಬ್ಬರೂ ನಾಯಕರು ಮಾತಿನಲ್ಲಿಯೇ ಕುಟುಕುತ್ತಿದ್ದಾರೆ. ಇತ್ತೀಚೆಗೆ ಶಾಸಕ ಯತ್ನಾಳ್ ಸಚಿವ ಮುರುಗೇಶ್ ನಿರಾಣಿ ಅವರನ್ನು ಪಿಂಪ್​ ಸಚಿವ ಎಂದು ಹೇಳಿದ್ದರು.

ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:48 pm, Sat, 14 January 23

Web contact

TV9 Kannada

Read More
Follow Us