ಮಾಜಿ ಶಾಸಕ‌-ಹಾಲಿ ಶಾಸಕಿ ಜಟಾಪಟಿ; ಮಾಜಿ ಶಾಸಕ ಸತೀಶ್ ಸೈಲ್, ಕಾಂಗ್ರೆಸ್ ವಕ್ತಾರ ಶಂಭುಶೆಟ್ಟಿ ವಿರುದ್ಧ ಎಫ್​ಐಆರ್

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾರವಾರ ಕ್ಷೇತ್ರದ ಹಾಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ನಡುವಿನ ಕಿತ್ತಾಟ ತಾರಕಕ್ಕೇರಿ ಇಬ್ಬರೂ ಠಾಣೆ ಮೆಟ್ಟಿಲೇರಿದ್ದರು. ಅದರಂತೆ ಸತೀಶ್ ಸೈಲ್ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಮಾಜಿ ಶಾಸಕ‌-ಹಾಲಿ ಶಾಸಕಿ ಜಟಾಪಟಿ; ಮಾಜಿ ಶಾಸಕ ಸತೀಶ್ ಸೈಲ್, ಕಾಂಗ್ರೆಸ್ ವಕ್ತಾರ ಶಂಭುಶೆಟ್ಟಿ ವಿರುದ್ಧ ಎಫ್​ಐಆರ್
ಮಾಜಿ ಶಾಸಕ ಸತೀಶ್ ಸೈಲ್ ಮತ್ತು ಶಾಸಕಿ ರೂಪಾಲಿ ನಾಯ್ಕ್
Rakesh Nayak Manchi

Updated on: Mar 04, 2023 | 10:30 PM

ಕಾರವಾರ: ಬಿಜೆಪಿ ಶಾಸಕಿ ರೂಪಾಲಿ ನಾಯ್ಕ (MLA Roopali Naik) ವಿರುದ್ಧ ತೊಡೆತಟ್ಟಿದ್ದ ಮಾಜಿ ಶಾಸಕ ಸತೀಶ್ ಸೈಲ್ (Satish Sail) ಹಾಗೂ ಕಾಂಗ್ರೆಸ್ ವಕ್ತಾರ ಶಂಭುಶೆಟ್ಟಿ ವಿರುದ್ಧ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರ ಠಾಣೆಯಲ್ಲಿ ಎಫ್​ಐಆರ್ (FIR) ದಾಖಲಾಗಿದೆ. ರೂಪಾಲಿ ನಾಯ್ಕ ನೀಡಿದ ದೂರಿನಂತೆ ಪೊಲೀಸರು ಐಪಿಸಿ ಸೆಕ್ಷನ್ 504, 506, 509, 353, 341ರಡಿ ದೂರು ದಾಖಲಿಸಿಕೊಂಡಿದ್ದಾರೆ. ಮಾತ್ರವಲ್ಲದೆ, ರೂಪಾಲಿ ನಾಯ್ಕ ವಿರುದ್ಧವೂ ಸತೀಶ್ ಸೈಲ್ ದೂರು ನೀಡಿದ್ದು, ರೂಪಾಲಿ ಜನಪ್ರತಿನಿಧಿಯಾದ ಹಿನ್ನಲೆ ಪೊಲೀಸರು ಅವರ ಅನುಮತಿ ಕೇಳಿದ್ದಾರೆ.

ಏನಿದು ರೂಪಾಲಿ ನಾಯ್ಕ ಮತ್ತು ಸತೀಶ್ ಸೈಲ್ ಜಟಾಪಟಿ ಪ್ರಕರಣ?

ಮಾಜಿ ಶಾಸಕ ಸತೀಶ್ ಸೈಲ್ ಮಾಜಾಳಿ ಎನ್ನುವ ಪಂಚಾಯತಿಯಲ್ಲಿನ ಸಮಸ್ಯೆಯೊಂದನ್ನ ಇಟ್ಟುಕೊಂಡು ಕಾರವಾರ ನಗರದ ಜಿಲ್ಲಾ ಪಂಚಾಯತಿ ಸಿಇಒ ಬಳಿ ಮಾತನಾಡಲು ಮಾ.3ರಂದು ಕಚೇರಿಗೆ ಹೋಗಿದ್ದರು. ಇದೇ ವೇಳೆ ಹಾಲಿ ಶಾಸಕಿ ರೂಪಾಲಿ ನಾಯ್ಕ ಸಹ ಸಿಇಓ ಕಚೇರಿಗೆ ಆಗಮಿಸಿದ್ದು ಈ ವೇಳೆ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಇಬ್ಬರ ನಡುವೆ ಜಗಳ ತಾರಕಕ್ಕೆ ಏರಿ ಅಲ್ಲಿಗೇ ಕೊನೆಗೊಂಡಿತ್ತು. ಆದರೆ ತಮ್ಮೊಳಗಿನ ಮುನಿಸು ತಣ್ಣಗಾಗಿರಲಿಲ್ಲ.

ಇದನ್ನೂ ಓದಿ: ಶಾಸಕಿ ರೂಪಾಲಿ ನಾಯ್ಕ್ ವಿರುದ್ಧ ಮಾಡಿದ 40% ಕಮಿಷನ್ ಆರೋಪ ಸತ್ಯ: ದೇವರ ಮೇಲೆ ಮಾದವ ನಾಯ್ಕ್ ಪ್ರಮಾಣ

ಇದಾದ ನಂತರ ರೂಪಾಲಿ ನಾಯ್ಕ ಅವರು ತನ್ನ ಮೇಲೆ ಪೇಪರ್ ವೇಟೇಜ್ ಕಲ್ಲಿನಿಂದ ಹಲ್ಲೆ ಮಾಡಲು ಬಂದಿದ್ದು, ನನಗೆ ಅವ್ಯಾಚ ಶಬ್ದದಿಂದ ನಿಂದಿಸಿದ್ದಾರೆ ಎಂದು ಶಾಸಕಿ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಸತೀಶ್ ಸೈಲ್ ಕಾರವಾರ ನಗರ ಠಾಣೆಗೆ ದೂರು ನೀಡಿದರು. ಈ ವೇಳೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿದ್ದ ರೂಪಾಲಿ ನಾಯ್ಕ ಅವರಿಗೆ ತಮ್ಮ ವಿರುದ್ಧ ದೂರು ದಾಖಲಿಸಿರುವ ವಿಚಾರ ತಿಳಿದುಬಂದಿದೆ. ಅದರಂತೆ ಸಭೆ ಮುಕ್ತಾಯವಾಗುತ್ತಿದ್ದಂತೆ ನೇರವಾಗಿ ಠಾಣೆಗೆ ತೆರಳಿದ್ದ ಶಾಸಕರು ಸತೀಶ್ ಸೈಲ್ ವಿರುದ್ಧ ಪ್ರತಿದೂರು ದಾಖಲಿಸಿದ್ದರು.

ತನ್ನ ಮೇಲೆ ಮಾಜಿ ಶಾಸಕರು ಹಲ್ಲೆ ಮಾಡಲು ಮುಂದಾಗಿದ್ದು ಅವ್ಯಾಚ ಶಬ್ದದಿಂದ ನಿಂದಿಸಿದ್ದು ಕ್ರಮ ಕೈಗೊಳ್ಳುವಂತೆ ಠಾಣೆಗೆ ದೂರು ನೀಡಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ರೂಪಾಲಿ ನಾಯ್ಕ ಮಾಜಿ ಶಾಸಕ ಸತೀಶ್ ಸೈಲ್ ವಿರುದ್ದ ಮನಬಂದಂತೆ ವಾಗ್ದಾಳಿ ನಡೆಸಿದರು. ಮಾಜಿ ಶಾಸಕರು ಕುಡಿದ ಅಮಲಿನಲ್ಲಿ ಜಗಳ ಮಾಡುತ್ತಿದ್ದು, ಗಣಿ ಕಾಲಿ ಮಾಡಿ ಜೈಲು ಸೇರಿದವರು ಮಾಜಿ ಶಾಸಕ ಸತೀಶ್ ಸೈಲ್ ಎಂದು ಕಿಡಿಕಾರಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:30 pm, Sat, 4 March 23

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us