ಬಾಲಾಕೋಟ್​ ದಾಳಿಗೆ 2 ವರ್ಷ: ವೈರಿ ನೆಲದಲ್ಲೂ ಮುಗುಳ್ನಗುತ್ತಿದ್ದ ಧೀರ ಅಭಿನಂದನ್​ ವರ್ಧಮಾನ್

| Updated By: ಆಯೇಷಾ ಬಾನು

Updated on: Feb 26, 2021 | 6:13 AM

Balakot Air Strike: ಫೆಬ್ರವರಿ 26, 2019ರಂದು ಬಾಲಾಕೋಟ್​​ನಲ್ಲಿ ಏನೋ ಆಗಿದೆ ಎಂಬುದನ್ನು ಟ್ವೀಟ್ ಮೂಲಕ ಹೊರ ಜಗತ್ತಿಗೆ ಬಿಟ್ಟು ಕೊಟ್ಟ ವ್ಯಕ್ತಿ ಪಾಕಿಸ್ತಾನದ ಮೇಜರ್ ಜನರಲ್ ಅಸೀಫ್ ಗಫೂರ್. ಆಗ ಸಮಯವಾದರೂ ಎಷ್ಟು ಅಂದುಕೊಳ್ತೀರಿ? ನಸುಕಿನ 5 ಗಂಟೆ 12 ನಿಮಿಷ.

ಬಾಲಾಕೋಟ್​ ದಾಳಿಗೆ 2 ವರ್ಷ: ವೈರಿ ನೆಲದಲ್ಲೂ ಮುಗುಳ್ನಗುತ್ತಿದ್ದ ಧೀರ ಅಭಿನಂದನ್​ ವರ್ಧಮಾನ್
ದೇಶದ ಹೆಮ್ಮೆಯ ಪ್ರತೀಕ ಎನಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್
Follow us on

ಪಾಕಿಸ್ತಾನದ ಮೇಜರ್ ಜನರಲ್ ಅಸೀಫ್ ಗಫೂರ್​​ನನ್ನು ‘ಟ್ವಿಟ್ಟರ್ ಜನರಲ್’ ಅಂತಲೇ ಕರೆಯಲಾಗ್ತಿತ್ತು. ಈ ವ್ಯಕ್ತಿ ಪಾಕ್ ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆಗಿದ್ದರು. ಫೆಬ್ರವರಿ 26, 2019ರಂದು ಬಾಲಾಕೋಟ್​​ನಲ್ಲಿ ಏನೋ ಆಗಿದೆ ಎಂಬುದನ್ನು ಟ್ವೀಟ್ ಮೂಲಕ ಹೊರ ಜಗತ್ತಿಗೆ ಬಿಟ್ಟು ಕೊಟ್ಟ ವ್ಯಕ್ತಿಯೇ ಈತ. ಆಗ ಸಮಯವಾದರೂ ಎಷ್ಟು ಅಂದುಕೊಳ್ತೀರಿ? ನಸುಕಿನ 5 ಗಂಟೆ 12 ನಿಮಿಷ. ಆ ಘಟನೆ ನಡೆಯುವ ಹನ್ನೆರಡು ದಿನಕ್ಕೆ ಮುಂಚೆ, ಫೆಬ್ರವರಿ 14ರಂದು ಜಮ್ಮು- ಕಾಶ್ಮೀರದ ಪುಲ್ವಾಮಾದಲ್ಲಿನ ಲೇತ್​​ಪುರ್​ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ಆಗಿತ್ತು. ಜಮ್ಮು- ಶ್ರೀನಗರ್ ಹೆದ್ದಾರಿಯಲ್ಲಿ ಬರುತ್ತಿದ್ದ ಭಾರತೀಯ ಭದ್ರತಾ ಪಡೆಯ ವಾಹನದ ಮೇಲೆ ಉಗ್ರನೊಬ್ಬ ದಾಳಿ ನಡೆಸಿ, ನಲವತ್ತು ಮಂದಿ ಹುತಾತ್ಮರಾಗಲು ಕಾರಣನಾಗಿದ್ದ. ಆ ಪೈಶಾಚಿಕ ಕೃತ್ಯಕ್ಕೆ ಭಾರತ ಪ್ರತೀಕಾರ ಹೇಳಲಿದೆ ಎಂಬ ಚರ್ಚೆ ನಡೆಯುತ್ತಲೇ ಇತ್ತು.

ಭಾರತದಲ್ಲಿ ಜನ ಕಣ್ಣುಜ್ಜಿಕೊಳ್ಳುತ್ತಾ ಟೀವಿ ಮುಂದೆ ಕೂತು, ರಿಮೋಟ್ ಕಂಟ್ರೋಲ್​ನ ಬಟನ್ ಒತ್ತುವ ಮೊದಲೇ ಗಫೂರ್ ಟ್ವೀಟ್ ಭಯಂಕರ ಸದ್ದು ಮಾಡಿತ್ತು. ‘ಭಾರತೀಯ ವಾಯುಸೇನೆ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿತು. ಪಾಕಿಸ್ತಾನ ವಾಯು ಸೇನೆಯು ತಕ್ಷಣವೇ ಕಾರ್ಯಾಚರಣೆಗೆ ಇಳಿಯಿತು. ಭಾರತೀಯ ವಿಮಾನಗಳು ಹಿಂತಿರುಗಿದವು. ಮಾಹಿತಿಗಾಗಿ ಫಾಲೋ ಮಾಡಿ’ ಎಂಬ ಟ್ವೀಟ್​ನಿಂದ ಜಗತ್ತಿಗೇ ಸುದ್ದಿ ನೀಡಿದ ವ್ಯಕ್ತಿ ಇವರು. 2016ರ ಸೆಪ್ಟೆಂಬರ್​ನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ವೇಳೆ ಭಾರತೀಯ ಸೇನಾ ಮುಖ್ಯಸ್ಥರೇ ಪತ್ರಿಕಾಗೋಷ್ಠಿ ನಡೆಸಿ, ಹೀಗೆ ಮಾಡಿದ್ದೇವೆ ಎಂದಿದ್ದರು. ಈ ಸಲ ಮಧ್ಯಾಹ್ನವಾದರೂ ಮಾಧ್ಯಮಗಳು ಮಾತನಾಡುತ್ತಿದ್ದವೇ ಹೊರತು, ಸರ್ಕಾರ ಮೌನವಾಗಿತ್ತು.

non-military preemptive strike ಎಂಬ ಅದ್ಭುತವಾದ ಪದ
ಅಂತೂ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಮಾತನಾಡಿ, ಇದೊಂದು non-military preemptive strike. ದೊಡ್ಡ ಸಂಖ್ಯೆಯಲ್ಲಿ ಉಗ್ರಗಾಮಿಗಳು ಸತ್ತಿದ್ದಾರೆ ಅಂತಷ್ಟೇ ಹೇಳಿ ಸುಮ್ಮನಾದರು. non-military preemptive strike ಎಂಬ ಅದ್ಭುತವಾದ ಪದವೊಂದನ್ನು ಹೇಳುವ ಮೂಲಕ ಇಡೀ ಜಗತ್ತು ಭಾರತದ ದಾಳಿಗೆ ಆಕ್ಷೇಪ ವ್ಯಕ್ತಪಡಿಸದಂತೆ ನೋಡಿಕೊಳ್ಳಲಾಯಿತು. ಹೀಗಂದರೆ ಪಾಕಿಸ್ತಾನದ ಸೇನಾ ವ್ಯವಸ್ಥೆಗೆ ಅಥವಾ ಸೈನಿಕರ ಜೀವಕ್ಕೆ, ಮಿಲಿಟರಿ ಆಸ್ತಿಗೆ ಕಿಂಚಿತ್ತೂ ನಷ್ಟ ಮಾಡದೆ ಕೈಗೊಂಡ ದಾಳಿ ಇದು. ಭಾರತದ ಮಗ್ಗುಲಲ್ಲೇ ಇರುವ ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್​​​ನಲ್ಲಿ ಬಿರಿಯಾನಿ ಹಾಕಿ, ಸಾಕುತ್ತಿದ್ದ ಉಗ್ರರನ್ನು ಹೊಸಕಿ ಹಾಕಿದ್ದೇವೆ ಅಷ್ಟೇ. ಇದರಲ್ಲಿ ಪಾಕಿಸ್ತಾನಕ್ಕೆ ಏನೂ ನಷ್ಟವಿಲ್ಲವಲ್ಲ ಎಂಬರ್ಥದಲ್ಲಿ ಸರಿಯಾಗಿ ತಿವಿದಿತ್ತು ಭಾರತ.

ಭಾರತದ ಹೇಳಿಕೆ ಬರುವ ಹೊತ್ತಿಗೆ ಗಡಿ ನಿಯಂತ್ರಣ ರೇಖೆ (LOC) ಬಳಿ ಪರಿಸ್ಥಿತಿ ಬಿಗಡಾಯಿಸಿತ್ತು. ಮೊದಲಿಗೆ ತಾನೇ ದಾಳಿ ನಡೆಸಿದ್ದ ಭಾರತಕ್ಕೆ ಫಲಿತಾಂಶ ಏನಾಗುತ್ತದೆ ಎಂಬ ಅಂದಾಜಿತ್ತು. ಫೆಬ್ರವರಿ 27ನೇ ತಾರೀಕಿನಂದು ಪಾಕಿಸ್ತಾನದ ವಾಯುಸೇನೆ ಜಮ್ಮು-ಕಾಶ್ಮೀರದ ಭೂ ಸೇನಾ ನೆಲೆಗಳ ಮೇಲೆ ದಾಳಿಗೆ ಪ್ರಯತ್ನಿಸಿತು. ಆದರೆ ಅಂಥ ದಾಳಿ ಯತ್ನಗಳನ್ನು ಅಂದಾಜು ಮಾಡಿದ್ದರಿಂದ ಭಾರತದ ವಾಯು ಸೇನೆ ಸನ್ನದ್ಧ ಸ್ಥಿತಿಯಲ್ಲಿತ್ತು. ಈ ಕಾದಾಟದ ವೇಳೆ ಪಾಕ್- ಭಾರತದ ಯುದ್ಧ ವಿಮಾನಗಳ ಮಧ್ಯೆ ‘ಡಾಗ್ ಫೈಟ್’ ನಡೆದು, ಮಿಗ್- 21ನಿಂದ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಲಾಯಿತು. ಇನ್ನು ಭಾರತದ ಮಿಗ್-21 ಯುದ್ಧ ವಿಮಾನವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪತನಗೊಂಡಿತು.

ಅದರಲ್ಲಿದ್ದ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ಧಮಾನ್​​​ರನ್ನು ಪಾಕ್ ಸೇನೆ ವಶಕ್ಕೆ ಪಡೆದುಕೊಂಡಿತು. ಮಾರ್ಚ್ 1ನೇ ತಾರೀಕಿನಂದು ಬಿಡುಗಡೆ ಸಹ ಮಾಡಲಾಯಿತು. ಪಾಕ್​ ಸೇನೆಯ ವಶದಲ್ಲಿದ್ದಾಗಲೂ ಅಭಿನಂದನ್ ಎದೆಗುಂದಿರಲಿಲ್ಲ. ಅವರ ಪೊಗದಸ್ತಾದ ಮೀಸೆ ಮತ್ತು ಆತ್ಮವಿಶ್ವಾಸ ತುಳುಕಿಸಿದ್ದ ಮುಗುಳ್ನಗು ಎಲ್ಲರ ಗಮನ ಸೆಳೆದಿತ್ತು. ಅವರ ಮೀಸೆ ದೇಶದ ಯುವಜನರ ಪಾಲಿಗೆ ಫೇವರಿಟ್ ಫ್ಯಾಷನ್ ಸಹ ಆಗಿತ್ತು.

ಅಂದ ಹಾಗೆ F16 ಎಂಬ ಅತ್ಯಾಧುನಿಕ ಯುದ್ಧ ವಿಮಾನವನ್ನು ಪಾಕಿಸ್ತಾನಕ್ಕೆ ನೀಡಿದ್ದು ಅಮೆರಿಕ. ಬೇರೆ ದೇಶಗಳ ಮೇಲೆ ದಾಳಿ ಮಾಡಲು ಆ ವಿಮಾನ ಬಳಸುವಂತಿದ್ದಲ್ಲಿ ತನ್ನ ಅನುಮತಿ ಪಡೆಯಬೇಕು ಎಂಬ ಷರತ್ತು ಸಹ ಹಾಕಿತ್ತು. ಆದರೆ ಪಾಕ್ ಅದನ್ನು ಮೀರಿತ್ತು. ಇದರಿಂದ ಭಾರೀ ಮುಜುಗರಕ್ಕೆ ಒಳಗಾಯಿತು.

ಪಾಕಿಸ್ತಾನದ ಮೇಜರ್ ಜನರಲ್ ಅಸೀಫ್ ಗಫೂರ್

ಈಗಲೂ ಪ್ರಶ್ನೆಗಳು ಬಾಕಿಯಿವೆ
ಬಾಲಾಕೋಟ್ ವಾಯು ದಾಳಿ ಈಗಲೂ ಪ್ರಶ್ನೆಗಳನ್ನು ಉಳಿಸಿಕೊಂಡು ಬಂದಿದೆ. ಆ ದಾಳಿಯ ನಂತರ ಬಾಲಾಕೋಟ್ ಸುತ್ತಮುತ್ತ ಯಾರನ್ನೂ ಬಿಡುತ್ತಿರಲಿಲ್ಲ ಎಂಬುದರಿಂದ ಮೊದಲುಗೊಂಡು, ಕೆಲ ತಿಂಗಳ ನಂತರ ಅದೇ ಸ್ಥಳಕ್ಕೆ ಅಂತರರಾಷ್ಟ್ರೀಯ ಮಾಧ್ಯಮಗಳನ್ನು ಕರೆದೊಯ್ಯುವ ತನಕ ಮುಂದುವರಿಯಿತು. ಕೆಲ ಮಾಧ್ಯಮಗಳು, ಅಲ್ಲಿ ದಾಳಿ ಆಗಿದ್ದು ಹೌದು ಎಂದವು. ಮತ್ತೆ ಕೆಲವು ಇಲ್ಲ ಎಂದವು. ಪಾಕಿಸ್ತಾನದಲ್ಲಿ ಇಂಥ ಬೆಳವಣಿಗೆಯಾದರೆ, ಭಾರತದಲ್ಲಿ ಆ ದಾಳಿಗೆ ಸಾಕ್ಷ್ಯಗಳನ್ನು ಕೇಳಲಾಯಿತು. ವಾಯುಸೇನೆ ಮುಖ್ಯಸ್ಥರು ಈ ಬಗ್ಗೆ ಮಾತನಾಡಿದರು, ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಲಾಯಿತು. ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬದವರೇ ಬಾಲಾಕೋಟ್ ದಾಳಿ ಬಗ್ಗೆ ಸಾಕ್ಷ್ಯಗಳನ್ನು ಕೇಳಿದರು.

ಬಾಲಾಕೋಟ್ ವಾಯು ದಾಳಿ ನಂತರ ಪಾಕಿಸ್ತಾನದ ಸ್ಥಿತಿ ದಯನೀಯ ಆಗಿದೆ. ಅಂತರರಾಷ್ಟ್ರೀಯ ಸಮುದಾಯಗಳ ಎದುರು, ವೇದಿಕೆಗಳಲ್ಲಿ ಭಾರತ ತಿವಿಯುತ್ತಲೇ ಇದೆ. ಆ ಘಟನೆಯಿಂದ ತತ್ತರಿಸಿದಂತೆ ಗೋಚರಿಸುವ ಪಾಕಿಸ್ತಾನದ ನಡವಳಿಕೆ ಅಲ್ಲಿನ ಸಚಿವರ ಹೇಳಿಕೆಗಳಲ್ಲೂ ಆಗೀಗ ಇಣುಕುತ್ತದೆ. ಪಾಕಿಸ್ತಾನದ ಸೇನಾ ಮಾಧ್ಯಮ ವಿಭಾಗವಾದ ISPRನಲ್ಲಿ ಇದ್ದ ಮೇ.ಜ.ಅಸೀಫ್ ಗಫೂರ್ ವರ್ಷದ ಹಿಂದೆಯೇ ಆ ಹುದ್ದೆಯಿಂದ ಬಿಡುಗಡೆ ಆಗಿದ್ದಾರೆ. ಆದರೆ ಬಾಲಾಕೋಟ್ ಮೇಲೆ ಭಾರತ ದಾಳಿ ಮಾಡಿದ್ದನ್ನು ಇಡೀ ಜಗತ್ತಿಗೆ ತಿಳಿಸಿದ ಆ ವ್ಯಕ್ತಿಯನ್ನು ಮರೆಯಲು ಆಗುತ್ತಿಲ್ಲ.

ಇದನ್ನೂ ಓದಿ: ಮತ್ತೊಂದು ಸರ್ಜಿಕಲ್​ ಸ್ಟ್ರೈಕ್​ಗೆ ಭಾರತದ ಪ್ಲಾನ್: ಪಾಕ್ ವಿದೇಶಾಂಗ ಸಚಿವ ಆರೋಪ

Published On - 10:32 pm, Thu, 25 February 21