ಕರ್ನಾಟಕದ ಈ ನಗರ ಆರು ಭಾಷೆಗಳಲ್ಲಿ ಆರು ಹೆಸರು ಹೊಂದಿದೆ: ಇದು ಯಾವ ಜಾಗ ಗೊತ್ತೇ?

|

Updated on: May 17, 2024 | 3:08 PM

ಮಂಗಳೂರನ್ನು ಮಂಗಳೂರು ಎಂದು ಹೇಳುವ ಬದಲು ವಿಭಿನ್ನ ಹೆಸರಿನೊಂದಿಗೆ ಕರೆಯುತ್ತಾರೆ. ಹಾಗಾದರೆ, ಮಂಗಳೂರಿಗೆ ಇರುವ ಇತರೆ ಹೆಸರು ಏನು?, ಅಲ್ಲಿನ ಜನರು ಏನೆಂದು ಕರೆಯುತ್ತಾರೆ?, ಒಂದೇ ಹೆಸರನ್ನು ಬೇರೆ ಬೇರೆ ರೀತಿಯಲ್ಲಿ ಕರೆಯಲು ಏನು ಕಾರಣ?..

ಕರ್ನಾಟಕದ ಈ ನಗರ ಆರು ಭಾಷೆಗಳಲ್ಲಿ ಆರು ಹೆಸರು ಹೊಂದಿದೆ: ಇದು ಯಾವ ಜಾಗ ಗೊತ್ತೇ?
Mangalore City
Follow us on

ರಾಜ್ಯದಲ್ಲಿ ಅತ್ಯಂತ ವೇಗವಾಗಿ ಮುನ್ನಡೆಯುತ್ತಿರುವ ಮತ್ತು ಅಭಿವೃದ್ದಿ ಹೊಂದುತ್ತಿರುವ ನಗರಗಳಲ್ಲಿ ದಕ್ಷಿಣ ಕನ್ನಡದ ಮಂಗಳೂರು ಕೂಡ ಒಂದು. ಪರಶುರಾಮ ಸೃಷ್ಟಿಸಿದ ಈ ನಾಡನ್ನು ಬುದ್ದಿವಂತರ ಜಿಲ್ಲೆ ಎಂದು ಕೂಡ ಕರೆಯುತ್ತಾರೆ. ಸಣ್ಣ ಪ್ರದೇಶವಾದ ಈ ನಗರವನ್ನು ಮಂಗಳೂರು ಎಂದು ಅಧಿಕೃತವಾಗಿ ಕರೆಯುತ್ತಿದ್ದರೂ, ಅಲ್ಲಿ ವಾಸಿಸುವ ಜನರಿಗೆ ಈ ಹೆಸರು ಮುಖ್ಯವಲ್ಲ. ಇದು ಆರು ವಿಭಿನ್ನ ಭಾಷೆಗಳಲ್ಲಿ ಆರು ಹೆಸರುಗಳನ್ನು ಹೊಂದಿದೆ. ಇಲ್ಲಿರುವ ಹೆಚ್ಚಿನ ಜನರು ಮಂಗಳೂರನ್ನು ಮಂಗಳೂರು ಎಂದು ಹೇಳುವ ಬದಲು ವಿಭಿನ್ನ ಹೆಸರಿನೊಂದಿಗೆ ಕರೆಯುತ್ತಾರೆ. ಹಾಗಾದರೆ, ಮಂಗಳೂರಿಗೆ ಇರುವ ಇತರೆ ಹೆಸರು ಏನು?, ಅಲ್ಲಿನ ಜನರು ಏನೆಂದು ಕರೆಯುತ್ತಾರೆ?, ಒಂದೇ ಹೆಸರನ್ನು ಬೇರೆ ಬೇರೆ ರೀತಿಯಲ್ಲಿ ಕರೆಯಲು ಏನು ಕಾರಣ?.

ಮೂಲತಃ ನೇತ್ರಾವತಿ ನದಿ, ಗುರುಪುರ ನದಿ ಮತ್ತು ಕರಾವಳಿ ಕರ್ನಾಟಕದ ಅರಬ್ಬಿ ಸಮುದ್ರದ ನಡುವೆ ಬಂದ ನಗರವನ್ನು ತುಳುವಿನಲ್ಲಿ ಕುಡ್ಲ ಎಂದು ಕರೆಯಲಾಗುತ್ತದೆ. ಅದೇ ಬ್ಯಾರಿ ಭಾಷೆಯಲ್ಲಿ ಮೈಕಲ್, ಕೊಂಕಣಿಯಲ್ಲಿ ಕೊಡಿಯಾಲ್‌, ಮಲಯಾಳಂನಲ್ಲಿ ಮಂಗಳಾಪುರಂ, ಇಂಗ್ಲಿಷ್‌ನಲ್ಲಿ Mangalore ಮತ್ತು ಕನ್ನಡದಲ್ಲಿ Mangaluru. ದಕ್ಷಿಣ ಕನ್ನಡ ಮತ್ತು ಉಡುಪಿಯ ಎರಡು ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ನಗರದ ಮತ್ತು ಸುತ್ತಮುತ್ತ ವಾಸಿಸುವ ಹೆಚ್ಚಿನ ಜನರು ಮಂಗಳೂರನ್ನು ಕರೆಯುವುದು ಕುಡ್ಲ (ತುಳು ಭಾಷೆಯಲ್ಲಿ ಮಂಗಳೂರು). ಹೀಗೆ ಮಂಗಳೂರು ನಗರಕ್ಕೆ ಒಟ್ಟು ಆರು ಭಾಷೆಗಳಲ್ಲಿ ಆರು ಹೆಸರಿದೆ.

ಕೆಲ ಜಾಗದಲ್ಲಿ ಕನ್ನಡ ಭಾಷೆಯೇ ಇಲ್ಲ:

ಮಂಗಳೂರು ಮತ್ತು ಕರಾವಳಿ ಕರ್ನಾಟಕದ ಕೆಲವು ಭಾಗಗಳು ಐತಿಹಾಸಿಕವಾಗಿ ಕನ್ನಡದ ಸಂಪರ್ಕವನ್ನು ಹೊಂದಿಲ್ಲ. ಈ ಪ್ರದೇಶವು ತುಳುನಾಡು ಎಂದು ಕರೆಯಲ್ಪಡುವ ಭಾಗವಾಗಿತ್ತು, ಅಂದರೆ ತುಳುವರ (ತುಳು ಮಾತನಾಡುವ ಜನರು) ನಾಡು. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆ, ಶ್ರೀಮಂತ ಮೌಖಿಕ ಸಂಪ್ರದಾಯವನ್ನು ಹೊಂದಿದೆ. ಆ ಜಾಗದಲ್ಲಿ ತುಳು ಮತ್ತು ಬ್ಯಾರಿ ಭಾಷೆಯನ್ನು ಹೆಚ್ಚಾಗಿ ಮಾತನಾಡಲಾಗುತ್ತದೆ. ತುಳು ಸ್ವತಃ ಎರಡು ಉಪಭಾಷೆಗಳನ್ನು ಹೊಂದಿದೆ. ಒಂದು ಶಿವಳ್ಳಿ ಬ್ರಾಹ್ಮಣರು ಮಾತನಾಡುತ್ತಾರೆ ಮತ್ತು ಇನ್ನೊಂದು ಎಲ್ಲಾ ಇತರ ತುಳು-ಮಾತನಾಡುವ ಸಮುದಾಯಗಳು.

ವಿಶೇಷ ಎಂದರೆ ತುಳು ಭಾಷೆ ತನ್ನದೇ ಆದ ಲಿಪಿಯನ್ನು ಕೂಡ ಹೊಂದಿದೆ. ಆದರೆ ಇದನ್ನು ಶತಮಾನಗಳಿಂದ ಬಳಸಲಾಗುತ್ತಿಲ್ಲ. ”ಬಂದರ್” ಮಂಗಳೂರಿನ ಹಳೆಯ ಪ್ರದೇಶವಾಗಿದೆ. ಬಂದರ್ ಪದವು ಪರ್ಷಿಯನ್ ಮೂಲಗಳನ್ನು ಹೊಂದಿದೆ. ಈ ಪ್ರದೇಶದ ಭಾಷಾ ವೈವಿಧ್ಯತೆಗೆ ಕಾರಣವೆಂದರೆ ಇದು ಬಂದರು ಪಟ್ಟಣವಾಗಿದ್ದು, ಕನಿಷ್ಠ 7 ನೇ ಶತಮಾನದಿಂದ ನೈಋತ್ಯ ಏಷ್ಯಾ ಮತ್ತು ಪಶ್ಚಿಮ ಏಷ್ಯಾದೊಂದಿಗೆ ಐತಿಹಾಸಿಕ ಸಂಪರ್ಕವನ್ನು ಹೊಂದಿದೆ. ಈ ಪ್ರದೇಶದ ಯಹೂದಿ ಮತ್ತು ಅರಬ್ ವ್ಯಾಪಾರಿಗಳು ಹಲವಾರು ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿದ್ದರು ಮತ್ತು ಕುಟುಂಬಗಳೊಂದಿಗೆ ನೆಲೆಸಿದ್ದರು ಎಂದು ತಿಳಿದುಬಂದಿದೆ. ಈ ಸಾಂಸ್ಕೃತಿಕ ವಿನಿಮಯವು ಬ್ಯಾರಿ ಸಮುದಾಯದ ಉದಯಕ್ಕೆ ಕಾರಣವಾಯಿತು.

ಸ್ಥಳೀಯ ಮುಸ್ಲಿಮರು ತಮ್ಮ ಸಮುದಾಯದ ಹೆಸರನ್ನು ಹೊಂದಿರುವ ಭಾಷೆಯನ್ನು ಮಾತನಾಡುತ್ತಾರೆ. ಈ ಭಾಷೆ ತುಳು ಮತ್ತು ಮಲಯಾಳಂ ಭಾಷೆಗೆ ನಿಕಟ ಸಂಬಂಧ ಹೊಂದಿದೆ. ಆದರೆ ಸಮುದಾಯದ ಸಂಸ್ಕೃತಿಯು ಅಲ್ಲಿ ವಾಸಿಸುವ ಇತರ ಎಲ್ಲಾ ಸಮುದಾಯಗಳ ಸಂಸ್ಕೃತಿಗಳಿಗಿಂತ ಭಿನ್ನವಾಗಿದೆ. ಈ ಪ್ರದೇಶದಲ್ಲಿ ನೆಲೆಸಿರುವ ಕೊಂಕಣಿ ಭಾಷಿಕರು ಕೂಡ ತಮ್ಮದೇ ಆದ ಇತಿಹಾಸವನ್ನು ಹೊಂದಿದ್ದಾರೆ.

1960 ರ ದಶಕದವರೆಗೂ ಈ ಪ್ರದೇಶದಲ್ಲಿ ಕನ್ನಡವನ್ನು ಅಷ್ಟೇನೂ ಮಾತನಾಡುತ್ತಿರಲಿಲ್ಲ. ಔಪಚಾರಿಕ ಶಿಕ್ಷಣದ ಪರಿಚಯದೊಂದಿಗೆ ಮಾತ್ರ ಕನ್ನಡ ಮಾತನಾಡಲು ಪ್ರಾರಂಭವಾಯಿತು ಎಂದು ಮಂಗಳೂರಿನ ಹಿರಿಯ ಲೇಖಕಿ ಅತ್ರಾಡಿ ಅಮೃತ ಶೆಟ್ಟಿ ಅವರು ಹೇಳುತ್ತಾರೆ. ಮಂಗಳೂರು ಪದವು ಆಡಳಿತಾತ್ಮಕ ಹೆಸರು. ನಾವು ಇದನ್ನು ಕುಡ್ಲ ಎಂದು ಕರೆಯುತ್ತೇವೆ. ಮಂಗಳೂರು ಎಂಬ ಪದವು ಸರ್ಕಾರಿ ಕಡತಗಳಲ್ಲಿ ಮಾತ್ರ ಕಂಡುಬರುತ್ತದೆ ಮತ್ತು ಸರ್ಕಾರಿ ಅಧಿಕಾರಿಗಳು ಮಾತ್ರ ಬಳಸುತ್ತಾರೆ. 1960 ರ ದಶಕದ ಮಧ್ಯಭಾಗದಲ್ಲಿ ಮಾತ್ರ ಶಾಲೆಗಳಲ್ಲಿ ಕನ್ನಡವನ್ನು ಪರಿಚಯಿಸಲಾಯಿತು. ಅಲ್ಲಿಯವರೆಗೂ ನನ್ನ ಹಳ್ಳಿಯಲ್ಲಿ ಅಥವಾ ಈ ಪ್ರದೇಶದ ಬೇರೆಲ್ಲಿಯೂ ಕನ್ನಡ ಮಾತನಾಡುವವರು ಇರಲಿಲ್ಲ,” ಎಂದು ಹೇಳಿದರು.

”ಬೆಳ್ತಂಗಡಿಯ ಸ್ವಲ್ಪ ದೂರದಲ್ಲಿ ದಿಡುಪೆ ಎಂಬ ಗ್ರಾಮವಿದೆ, ಅಲ್ಲಿ ಇಂದಿಗೂ ಗುಣಮಟ್ಟದ ರಸ್ತೆಗಳಿಲ್ಲ ಮತ್ತು ಸರಿಯಾದ ವಿದ್ಯುತ್ ಸಂಪರ್ಕವಿಲ್ಲ. ಅಲ್ಲದೆ ಈ ಜಾಗದಲ್ಲಿರುವ ಹೆಚ್ಚಿನವರ ನಾಡು-ನುಡಿ ತುಳುವೇ ಆಗಿದೆ. ಅವರು ತಮ್ಮ ಕೃಷಿ ಜೀವನಶೈಲಿಯಿಂದ ಭಾಷೆಯನ್ನು ನಿರ್ಮಿಸಿದ್ದಾರೆ. ದಕ್ಷಿಣ ಕನ್ನಡದಲ್ಲಿ ಇಂದಿನವರೆಗೂ ತುಳುವನ್ನು ಮಾತ್ರ ಮಾತನಾಡುವ ಮತ್ತು ಬೇರೆ ಭಾಷೆ ತಿಳಿಯದ ಅನೇಕ ಮಂದಿ ಇದ್ದಾರೆ,” ಎನ್ನುತ್ತಾರೆ ಉಜಿರೆ ನಿವಾಸಿ ಉದಯ್ ಕುಮಾರ್.

ಮಂಗಳೂರಿನ ಭಾಷಾ ವೈವಿಧ್ಯ

ಕರಾವಳಿ ಕರ್ನಾಟಕವು ಇಡೀ ರಾಜ್ಯದಲ್ಲಿ ಶ್ರೀಮಂತ ಭಾಷಾ ವೈವಿಧ್ಯತೆಯನ್ನು ಹೊಂದಿದೆ. ಇದು ಕರಾವಳಿಯುದ್ದಕ್ಕೂ ಪ್ರಯಾಣಿಸುವ ಯಾರಿಗಾದರೂ ತಕ್ಷಣವೇ ಗೋಚರಿಸುತ್ತದೆ. 2011 ರ ಜನಗಣತಿಯ ಪ್ರಕಾರ, ಮಂಗಳೂರಿನಲ್ಲಿ 39.2% ರಷ್ಟು ಹೆಚ್ಚು ಮಾತನಾಡುವ ಭಾಷೆ ತುಳು. ತುಳು, ಶತಮಾನಗಳಿಂದ ಕನ್ನಡದಿಂದ ಪ್ರಭಾವಿತವಾಗಿರುವ ಸಾಹಿತ್ಯೇತರ ಭಾಷೆಯಾಗಿದ್ದು, ಕರಾವಳಿಯ ಉದ್ದಕ್ಕೂ ಮತ್ತು ಘಟ್ಟಗಳ ಪಶ್ಚಿಮದಲ್ಲಿ ಸುಮಾರು 1.85 ಮಿಲಿಯನ್ ಜನರು ಮಾತನಾಡುತ್ತಾರೆ. ಸಾಮಾನ್ಯವಾಗಿ ತುಳುನಾಡು ಎಂದು ಕರೆಯಲ್ಪಡುವ ಈ ಸಾಂಸ್ಕೃತಿಕ ಪ್ರದೇಶವು ಸ್ಥೂಲವಾಗಿ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಗಳಿಗೆ ಮತ್ತು ಕಾಸರಗೋಡು ಜಿಲ್ಲೆ, ಮಂಜೇಶ್ವರ ತಾಲೂಕುಗಳಿಗೆ ಅನುರೂಪವಾಗಿದೆ.

ಮಂಗಳೂರು ಮತ್ತು ಮಂಗಳಪುರಂ ಮಧ್ಯಕಾಲೀನ ಯುಗದ ಮಂಗಳಾ ದೇವಿ ದೇವಸ್ಥಾನವನ್ನು ಉಲ್ಲೇಖಿಸುತ್ತದೆ. ಎರಡೂ ಹೆಸರುಗಳು, ಸಂಸ್ಕೃತದಲ್ಲಿ ಮಂಗಳಾಪುರ ಜೊತೆಗೆ, ತುಳುನಾಡಿನಾದ್ಯಂತ ವಿಜಯನಗರ ಶಾಸನಗಳಲ್ಲಿ ನಗರವನ್ನು ಉಲ್ಲೇಖಿಸಲು ಬಳಸಲಾಗುತ್ತಿತ್ತು ಮತ್ತು ವಿದೇಶಿ ಪ್ರವಾಸಿಗರು ಮತ್ತು ವ್ಯಾಪಾರಿಗಳಿಗೆ ತಿಳಿದಿರುವ ಹೆಸರುಗಳಾಗಿವೆ. ಪ್ರಸಿದ್ಧ ಮೊರೊಕನ್ ಪ್ರವಾಸಿ ಇಬ್ನ್ ಬತ್ತೂಟಾ 1342 ರಲ್ಲಿ ಮಂಗಳೂರಿಗೆ ಭೇಟಿ ನೀಡಿದ್ದರು. ಅವರು ಈ ನಗರವನ್ನು ಮಂಜರೂರ್ ಎಂದು ಉಲ್ಲೇಖಿಸಿದ್ದಾರೆ.

ಕನ್ನಡಕ್ಕೂ ಪ್ರಾಮುಖ್ಯತೆ ಇದೆ:

ಕರ್ನಾಟಕದ ಭಾಗವಾಗಿ, ಮಂಗಳೂರಿನ ಪ್ರಾಥಮಿಕ ಅಧಿಕೃತ ಭಾಷೆ ಕನ್ನಡ. ತುಳುನಾಡಿನಾದ್ಯಂತ ಬಳಸಲಾಗುವ ಲಿಖಿತ ಭಾಷೆಯಾಗಿದೆ. ಹೆಚ್ಚಿನ ಸ್ಥಳೀಯರು ಕನ್ನಡವನ್ನು ಹೆಚ್ಚುವರಿ ಭಾಷೆಯಾಗಿ ಕಲಿಯುತ್ತಾರೆ. ಬಾಸೆಲ್ ಮಿಷನ್ ಪ್ರೆಸ್ 1841 ರಲ್ಲಿ ಮಂಗಳೂರಿನ ಬಲ್ಮಟ್ಟದಲ್ಲಿ ಸ್ಥಾಪಿಸಲಾಯಿತು. ಇವುಗಳಲ್ಲಿ ಅತ್ಯಂತ ಗಮನಾರ್ಹವಾದ, ಫರ್ನಿನಾಂಡ್ ಕಿಟ್ಟೆಲ್ ಅವರು 1894 ರಲ್ಲಿ ಮೊದಲ ಕನ್ನಡ-ಇಂಗ್ಲಿಷ್ ನಿಘಂಟನ್ನು ಸಂಕಲಿಸಿದರು. ಮೊದಲ ಕನ್ನಡ ಪತ್ರಿಕೆಯಾದ ಮಂಗಳೂರ ಸಮಾಚಾರ 1843 ರಲ್ಲಿ ಮಂಗಳೂರಿನಿಂದ ಪ್ರಕಟವಾಯಿತು. ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ್ ಪೈ ಅವರು ಕೂಡ ಈ ನಗರದಲ್ಲೇ ಜೀವನ ನಡೆಸಿದ್ದರು.

ತುಳುವರು ಕನ್ನಡವನ್ನು ಲೆಕ್ಕಕೇ ತೆಗೆದುಕೊಳ್ಳುತ್ತಿಲ್ಲ ಎಂಬ ಕೂಗು ಈಗಲೂ ಕೇಳಿ ಬರುತ್ತದೆ. ಈ ಕುರಿತು ಮಾತನಾಡಿದ ತುಳು ಸಂಘಟನೆಯ ಅಧಿಕಾರಿಯೊಬ್ಬರು, ”ಕನ್ನಡೀಕರಣ ಎಂದ ತಕ್ಷಣ ಕನ್ನಡ ವಿರೋಧಿ ಎಂದು ತಪ್ಪು ತಿಳಿಯಬೇಕಿಲ್ಲ. ನಮಗೆ ಕನ್ನಡ ಖಂಡಿತಾ ಬೇಕು. ನಾವು ಇದರ ವಿರೋಧಿಯಲ್ಲ. ಕನ್ನಡ ನಮ್ಮ ಇನ್ನೊಂದು ತಾಯಿ ಭಾಷೆ ಇದ್ದಂತೆ. ಹಾಗಂತ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಹಾಕಲು ಆಗದು. ತುಳು ಭಾಷೆಯ ಅಭಿವೃದ್ಧಿಗೆ ಎಲ್ಲೆಲ್ಲಿ ತೊಡಕಾಗಿದೆಯೋ ಅಲ್ಲಿ ನಾವು ಪ್ರಶ್ನಿಸಲೇಬೇಕಾಗುತ್ತದೆ. ಕನ್ನಡ ತುಳುವಿನ ಜೊತೆ ಇರಲಿ. ಆದರೆ ತುಳು ಭಾಷೆಯನ್ನು ತುಳಿದು ಕನ್ನಡದ ಉದ್ಧಾರ ಮಾಡುವುದು ತಪ್ಪು. ತುಳು ಭಾಷೆಯನ್ನು ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು,” ಎಂದು ಹೇಳುತ್ತಾರೆ.

ದಕ್ಷಿಣ ಕನ್ನಡದ ಬೆಳವಣಿಗೆಗೆ ಇಲ್ಲಿನ ಜನರೇ ಕಾರಣ?:

ದೇಶಕ್ಕೆ ಮಾದರಿಯಾಗಬಲ್ಲ ಜಿಲ್ಲೆ ದಕ್ಷಿಣ ಕನ್ನಡ, ಮಂಗಳೂರನ್ನು ಇಲ್ಲಿನ ಶಾಸಕರಿಗಿಂತ ಹೆಚ್ಚಾಗಿ ನಾವೇ ಬೆಳೆಸಿದ್ದು ಎನ್ನುತ್ತಾರೆ ಅಲ್ಲಿನ ಜನರು. ”ಶಾಸಕರಿಂದ ದೊಡ್ಡ ಮಟ್ಟದ ಬೆಂಬಲ ಸಿಗದೆ ನಾವೇ ಕಟ್ಟಿ ಬೆಳೆಸಿದ ಮಂಗಳೂರು ದೇಶಕ್ಕೆ ಮಾದರಿ. ಯಾಕೆಂದರೆ, ಹಾಸನ, ಮಂಡ್ಯ, ರಾಮನಗರ, ಶಿವಮೊಗ್ಗವನ್ನು ಅಲ್ಲಿನ ಶಾಸಕರು ಬೆಳೆಸಿದರು. ಬೆಂಗಳೂರನ್ನು ಕೆಂಪೇಗೌಡರು ಕಟ್ಟಿದರೆ, ಮೈಸೂರನ್ನು ಮಹಾರಾಜರು ಬೆಳೆಸಿದರು. ಆದರೆ, ಹಾಸನ, ಮೈಸೂರು, ಶಿವಮೊಗ್ಗ ಬೆಳೆದ ಹಾಗೆ ಮಂಗಳೂರು ಬೆಳೆದಿದ್ದು ಅಲ್ಲ. ಇಲ್ಲಿಗೆ ಸರ್ಕಾರದಿಂದ ದೊಡ್ಡ ಮಟ್ಟದ ವಿಶೇಷ ಅನುದಾನ ತರುವಂತಹ ನಾಯಕ ಸಿಗಲಿಲ್ಲ. ನಮ್ಮ ಊರನ್ನು ಸರ್ಕಾರಕ್ಕಿಂತ ಹೆಚ್ಚಾಗಿ ಸ್ವತಃ ನಾವೇ ಬೆಳೆಸಿದ್ದು,” ಎಂದು ಮಂಗಳೂರಿನ ನಿವಾಸಿ ಪದ್ಮನಾಭ ಅವರು ಹೇಳುತ್ತಾರೆ.

ಇಲ್ಲಿನ ಶಿಕ್ಷಣದ ಕುರಿತು ಮಾತನಾಡಿದ ಸೇಂಟ್ ಜಾರ್ಜ್ ಹೈಸ್ಕೂಲ್​ನಲ್ಲಿ ಶಿಕ್ಷಕಿ ಸ್ಮಿತಾ, ”ರಾಜ್ಯದಲ್ಲಿ ಅತ್ಯಂತ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಜಿಲ್ಲೆ ದಕ್ಷಿಣ ಕನ್ನಡ. ಹತ್ತಕ್ಕೂ ಹೆಚ್ಚು ಮೆಡಿಕಲ್ ಕಾಲೇಜು, ಇಪ್ಪತ್ತಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜು, 200ಕ್ಕೂ ಹೆಚ್ಚು ಪದವಿ ಕಾಲೇಜು, 250ಕ್ಕೂ ಹೆಚ್ಚು ಪಿಯು ಕಾಲೇಜುಗಳನ್ನು ಹೊಂದಿರುವ ಶಿಕ್ಷಣದ ಕಾಶಿ ಈ ಜಿಲ್ಲೆ. ಇಲ್ಲಿ ಮಡಿಕೇರಿ, ಹಾಸನ, ಚಿಕ್ಕಮಗಳೂರು ಮತ್ತು ಕೇರಳದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೇರಳದ ಗಡಿನಾಡಿನ ಶೇಕಡಾ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುವುದು ಮಂಗಳೂರಲ್ಲಿ. ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವುದರಿಂದಲೇ ಇಲ್ಲಿನ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ, ಪಿಯುಸಿ, ಸಿಇಟಿ ಪರೀಕ್ಷೆಗಳಲ್ಲಿ ಸಾಧನೆ ಮಾಡುತ್ತಾ ಇರುವುದು. ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿ ಕೂಡ ಮಂಗಳೂರಿನ ಜನ ಮುಂದು,” ಎಂಬುದು ಅವರ ಅಭಿಪ್ರಾಯ.

Published On - 3:07 pm, Fri, 17 May 24