Anantha Chaturdashi: ಅನಂತ ಚತುರ್ದಶೀ ಯಾರ ಹಬ್ಬ? ಯಾಕೆ ಪೂಜಿಸುವುದು?

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 14, 2024 | 2:28 PM

ಭಾರತೀಯರ ಹರ್ಷಕ್ಕೆ ಹಬ್ಬಗಳೇ ಕಾರಣ. ದಿನವೂ ಒಂದೊಂದು ಹಬ್ಬದಂತೆ ಇರುವಾಗ ಸಂತೋಷವೇ ನಿತ್ಯವೂ. ಸದ್ಯ ಭಾದ್ರಪದ ಮಾಸದಲ್ಲಿ ಬರುವ ವಿಶೇಷ ಹಬ್ಬಗಳಲ್ಲಿ ಇದೂ ಒಂದು ಇದು ವಿಷ್ಣುವಿಗೆ ಸಂಬಂಧಿಸಿದ ಹಬ್ಬವಾಗಿದೆ. ಇದನ್ನು ಭಾದ್ರಪದ ಮಾಸದ ಶುಕ್ಲ ಪಕ್ಷ ಚತುರ್ದಶೀ ತಿಥಿಯಂದು ಪ್ರತಿವರ್ಷವೂ ಆಚರಿಸುತ್ತಾರೆ. ಇದನ್ನು ಹಬ್ಬ ಎನ್ನುವುದಕ್ಕಿಂತ ವ್ರತವೆಂದು ಸ್ವೀಕರಿಸಿ ಆಚರಿಸುತ್ತಾರೆ.

Anantha Chaturdashi: ಅನಂತ ಚತುರ್ದಶೀ ಯಾರ ಹಬ್ಬ? ಯಾಕೆ ಪೂಜಿಸುವುದು?
ಸಾಂದರ್ಭಿಕ ಚಿತ್ರ
Follow us on

ಹಬ್ಬವೆಂದರೆ ಯಾವುದೇ ಉದ್ದೇಶಗಳು ಇಲ್ಲದೇ ಮಾಡುವ ಆಚರಣೆ. ವ್ರತವೆಂದರೆ ಯಾವುದೋ‌ ಒಂದು ಆಸೆಯನ್ನು ಪೂರೈಸಿಕೊಳ್ಳಲು ಮಾಡುವ ಆಚರಣೆ ಇದಾಗಿದೆ. ಈ ಹಬ್ಬ ಅಥವಾ ವ್ರತ ವೈಶಿಷ್ಟ್ಯವನ್ನು ಹಲವು ಪ್ರಕಾರದಲ್ಲಿ ನೋಡಬಹುದು. ಗಣೇಶ ಚತುರ್ಥಿಯು ಕಳೆದು ಹತ್ತನೇ ದಿನಕ್ಕೆ ಗಣೇಶನನ್ನು ವಿಸರ್ಜಿಸುವುದು ಎನ್ನುವುದೂ ಒಂದು ಪದ್ಧತಿ ಇದೆ. ಇದಕ್ಕೆ ಪುರಾಣದ ಕಥೆಯೂ ಕೂಡ ಇದೆ. ಸುಶೀಲ‌ ಎನ್ನುವವಳು ಅನಂತ ಚತುರ್ದಶೀ ವ್ರತವನ್ನು ಮಾಡಿ ಹದಿನಾಲ್ಕು ಗಂಟಿನಿಂದ ತಯಾರಿಸಿದ ದಾರವನ್ನು ಕಟ್ಟಿಕೊಂಡಳು.‌ ಅನಂತರ ಕೌಂಡಿನ್ಯ ಎನ್ನುವ ವ್ಯಕ್ತಿಯನ್ನು ವಿವಾಹವಾಗಿ ಸುಖದಿಂದ, ಸಂಪತ್ತಿನಿಂದ ಜೀವನ ಸಾಗಿಸಿದಳು.‌ ಒಂದು ದಿನ ಕೌಂಡಿನ್ಯನು ಆಕೆ ಧರಿಸಿದ ದಾರವನ್ನು ಕಂಡು, ಅದನ್ನು ಬಿಚ್ಚಿಸಿ ಬೆಂಕಿಗೆ ಎಸೆದ. ಅನಂತರ ಅವರ ಕಷ್ಟಗಳು ಆರಂಭವಾದವು. ‌ಅದನ್ನು ಅರಿತ ಕೌಂಡಿನ್ಯನು ಹದಿನಾಲ್ಕು ವರ್ಷಗಳ ಕಾಲ ಅನಂತ ಚತರ್ದಶೀ ವ್ರತವನ್ನು ಮಾಡಿ ಸಂಪತ್ತು, ಸುಖಗಳನ್ನು ಮರಳಿ‌ಪಡೆದನು ಎಂಬುದು. ಜೈನ ಧರ್ಮೀಯರಿಗೂ ಈ ದಿನ‌ ವಿಶೇಷ.

ಆಷಾಢ ಶುಕ್ಲ ಏಕಾದಶೀ ಶಯನೈಕಾದಶೀ, ಕಾರ್ತಿಕ ಶುಕ್ಲ ದ್ವಾದಶೀ ಉತ್ಥಾನ ದ್ವಾದಶೀ. ಇವೆರಡ ಮಧ್ಯದಲ್ಲಿ ಬರುವ ದಿನ ಭಾದ್ರಪದ ದ್ವಾದಶೀ. ಇದನ್ನು ಪರಿವರ್ತನ ದ್ವಾದಶೀ ಎಂದು ಕರೆಯುತ್ತಾರೆ. ಅಂದರೆ ಯೋಗನಿದ್ರೆಯಲ್ಲಿ ಇರುವ ವಿಷ್ಣುವು ತನ್ನ ಮಗ್ಗಲನ್ನೂ ಬದಲಾಯಿಸುತ್ತಾನೆ.

ಆದರೆ ಇಲ್ಲಿ ವಿಷ್ಣುವಿನ ಆರಾಧನೆ ಉಪಾಸನೇ ಮುಖ್ಯ. ಶುದ್ಧವಾದ ಸ್ಥಳದಲ್ಲಿ, ಬಳೆ ಎಲೆಯನ್ನು ಇಟ್ಟು, ಅಕ್ಕಿಯನ್ನು ಹಾಕಿ, ತಾಮ್ರ, ಹಿತ್ತಾಳೆ, ಬೆಳ್ಳಿ ಅಥವಾ ಬಂಗಾರದ ಕಲಶವನ್ನು ಇಟ್ಟು ಅದರ ಒಳಗೆ ಮಾವಿನ ಎಲೆ, ತೆಂಗಿನ ಕಾಯಿ ಇರಿ, ಮಹಾವಿಷ್ಣುವನ್ನು ಆವಾಹಿಸಿ ಪೂಜಿಸಿ, ವಿಷ್ಣುವಿನ ಕಥೆಯನ್ನು ಕೇಳಬೇಕು.
ಅನಂತಶಯನನ ರೂಪದಲ್ಲಿ ಮಹಾವಿಷ್ಣುವು ಇರುವನು. ಅವನಿಗೆ ಷೋಡಶೋಪಚಾರಗಳಿಂದ ಪೂಜಿಸಿ, ಜಗದ್ರಕ್ಷನ ಮಂತ್ರದಿಂದ ಅಭಿಮಂತ್ರಿಸಿದ ದಾರವನ್ನು ರಕ್ಷೆಯಾಗಿ ಕಟ್ಟಿಕೊಂಡು, ಪ್ರಸಾದವನ್ನು ಸ್ವೀಕರಿಸಿ, ಆಗಮಿಸಿದ ಅತಿಥಿಗಳಿಗೆ ಯಥೇಷ್ಟವಾದ ಭೋಜನವನ್ನು ನೀಡಬೇಕು.

ಇದನ್ನೂ ಓದಿ: ಅನಂತ ಚತುರ್ದಶಿ ಯಾವಾಗ, ಗಣೇಶನ ವಿಸರ್ಜನೆ ಯಾವಾಗ? ಶುಭ ಮುಹೂರ್ತ ಯಾವಾಗ?

ಈ ವರ್ಷ ಸಪ್ಟೆಂಬರ್ ೧೭ರಂದು ಅನಂತ ಚತುರ್ದಶೀ ವ್ರತದ ದಿನ. ಸೂರ್ಯೋದಯದಿಂದಲೇ ಚತುರ್ದಶೀ ತಿಥಿಯು ಇರುವ ಕಾರಣ ಬೆಳಗ್ಗೆಯಿಂದ ಅತಿಥಿಗಳ ಭೋಜನ ಪರ್ಯಂತ ಉಪವಾಸವಿರಬೇಕು. ಅಶಕ್ತರು, ಆರೋಗ್ಯವು ಸರಿಯಿಲ್ಲದವರು ಹಸಿವು ನಿವಾರಣೆಯಾಗುವಷ್ಟು ಮಾತ್ರ ಫಲವನ್ನೋ ದ್ರವಾಹಾರವನ್ನೋ ಶುದ್ಧವಾದ ಆಹಾರವನ್ನೋ ಸೇವಿಸಬಹುದು.

-ಲೋಹಿತ ಹೆಬ್ಬಾರ್ – 8762924271

ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ