ಸಂಪತ್ತು ಎನ್ನುವುದು ದೊಡ್ಡದು, ತೃಪ್ತಿ ಎನ್ನುವುದು ಅದಕ್ಕಿಂತಲೂ ದೊಡ್ಡದು

| Updated By: Digi Tech Desk

Updated on: Jun 06, 2023 | 2:04 PM

ಇದೊಂದು ವಿಚಿತ್ರವಾದ ಚಿಂತನೆ ಆದರೂ ಅತ್ಯಂತ ಅವಶ್ಯ ಚಿಂತನೆ. ಅಯೋಧ್ಯಾ ಅಂದರೆ ಯುದ್ಧದಲ್ಲಿ ಜಯಸಿಲಾಗದ್ದು ಎಂಬ ಅರ್ಥವನ್ನು ನೀಡುತ್ತದೆ. ಇಲ್ಲಿನ ರಾಜಪರಂಪರೆ ಅತ್ಯಂತ ಗೌರವಯುತವಾದದ್ದು. ರಾಮನ ಕಾಲದ ಪೂರ್ವ ಮತ್ತು ಪರದಲ್ಲಿ ಇಲ್ಲಿಯ ಜನ ಅತ್ಯಂತ ನೆಮ್ಮದಿಯಿಂದ ಬಾಳುತ್ತಿದ್ದರು.

ಸಂಪತ್ತು ಎನ್ನುವುದು ದೊಡ್ಡದು, ತೃಪ್ತಿ ಎನ್ನುವುದು ಅದಕ್ಕಿಂತಲೂ ದೊಡ್ಡದು
ಸಾಂದರ್ಭಿಕ ಚಿತ್ರ
Follow us on

ಇದೊಂದು ವಿಚಿತ್ರವಾದ ಚಿಂತನೆ ಆದರೂ ಅತ್ಯಂತ ಅವಶ್ಯ ಚಿಂತನೆ. ಅಯೋಧ್ಯಾ ಅಂದರೆ ಯುದ್ಧದಲ್ಲಿ ಜಯಸಿಲಾಗದ್ದು ಎಂಬ ಅರ್ಥವನ್ನು ನೀಡುತ್ತದೆ. ಇಲ್ಲಿನ ರಾಜಪರಂಪರೆ ಅತ್ಯಂತ ಗೌರವಯುತವಾದದ್ದು. ರಾಮನ ಕಾಲದ ಪೂರ್ವ ಮತ್ತು ಪರದಲ್ಲಿ ಇಲ್ಲಿಯ ಜನ ಅತ್ಯಂತ ನೆಮ್ಮದಿಯಿಂದ ಬಾಳುತ್ತಿದ್ದರು. ಕಾರಣವಿಷ್ಟೇ ಅವರಲ್ಲಿ ಹೇರಳವಾದ ಸಂಪತ್ತು ಇತ್ತು ಅಥವಾ ಇರುವುದರಲ್ಲೇ ತೃಪ್ತಿ ಕಾಣುವ ಮನಸ್ಸಿತ್ತು. ಇಂದಿನ ವರ್ತಮಾನದಲ್ಲಿ ನಮ್ಮಲ್ಲಿ ಎಲ್ಲದೂ ಇದೆ ಆದರೆ ನಮಗೆ ಎಲ್ಲಾ ಅನುಕೂಲವಿದೆ ಎಂಬ ತೃಪ್ತಿಯಿಲ್ಲ ಅಥವಾ ಇರುವುದರಲ್ಲೇ ಸಂತೋಷ ಕಾಣುವ ಮನೋಭೂಮಿಕೆಯಿಲ್ಲ. ಆದ ಕಾರಣ ನಮ್ಮ ಅಂತರಂಗದಲ್ಲಿ ರಾಮರಾಜ್ಯದ ಸ್ವರೂಪ ಸ್ಪಷ್ಟವಾಗಿ ಮೂಡುತ್ತಿಲ್ಲ.

ಈಗ ಪ್ರಶ್ನೆ ಏಳುತ್ತದೆ ಏನೀ ರಾಮರಾಜ್ಯವೆಂದು? ರಾಮರಾಜ್ಯವನ್ನು ಸುಲಭವಾಗಿ ಹೇಳುವುದಾದರೆ ಸುಂದರವಾಗಿ ಬದುಕುವುದು ಎನ್ನಬಹುದು. ನಮ್ಮಲ್ಲಿ ಸಾಕಷ್ಟು ಜನರಿಗೆ ಸುಂದರವಾಗಿ ಬದುಕುವುದೇ ತಿಳಿದಿಲ್ಲ. ಸುಂದರವಾಗಿ ಬದುಕುವುದು ಎಂದರೆ ಉಪಭೋಗಿಸುತ್ತ ಜೀವಿಸುವುದು ಎಂದು ಭ್ರಮಿಸಬೇಡಿ. ಬದುಕಿನ ಸುಂದರತೆ ಅಡಗಿರುವುದು ಕರ್ತವ್ಯವನ್ನು ಪಾಲಿಸುತ್ತಾ ಆಂತರಂಗಿಕವಾಗಿ ಬೆಳೆಯುವುದರಲ್ಲಿ. ಹಲವಾರು ಜನ ಆ ಜಾತಿ ಈ ಜಾತಿ ಎಂದು ಹೇಳುತ್ತಿರುತ್ತಾರೆ. ಆದರೆ ತನ್ನ ಜಾತಿಯ ತಾತ್ವಿಕತೆಯನ್ನು ಅರಿಯುವುದೇ ಇಲ್ಲ. ಬೇಡನಾದ ಕಣ್ಣಪ್ಪ ತಾನು ಭಕ್ತಿಯಿಂದ ಬೇಟೆಯಾಡಿ ತಂದ ಮಾಂಸವನ್ನೇ ಶಿವನಿಗೊಪ್ಪಿಸಿದ ಶ್ರೇಷ್ಠ ಭಕ್ತನೆನಿಸಿಕೊಂಡ.

ಇದನ್ನೂ ಓದಿ:Spiritual: ಗ್ರಹಣದಿಂದ ಈ ರಾಶಿಯವರಿಗೆ ಯಾವೆಲ್ಲ ಸಮಸ್ಯೆಗಳು ಎದುರಾಗಬಹುದು? ಇಲ್ಲಿದೆ ಮಾಹಿತಿ

ಈ ಆಂತರಂಗಿಕ ಬೆಳವಣಿಗೆಗೆ ಮಾನಸಿಕ ನೆಮ್ಮದಿ ಅತ್ಯಗತ್ಯ. ಈ ನೆಮ್ಮದಿ ನಮ್ಮಲ್ಲಿ ನೆಲೆಸಬೇಕಾದರೆ ಮೊದಲು ನಾವು ಸಹನೆಯನ್ನು ರೂಢಿಸಿಕೊಳ್ಳಬೇಕು. ಈ ಸಹನೆ ಎನ್ನುವುದರ ನಾಶಕ್ಕೆ ಅತೃಪ್ತಿ ಎನ್ನುವುದು ಮೂಲ ಕಾರಣ. ಹಾಗಾದರೆ ಸಹನೆ ವೃದ್ಧಿಸಲು ತೃಪ್ತಿ ಬೇಕು. ತಮಗೆ ಲಭ್ಯವಾದ ಸ್ಥಿತಿಯನ್ನು ಪ್ರೀತಿಯಿಂದ ಸ್ವೀಕಾರ ಮಾಡುವುದೇನಿದೆ ಅದುವೇ ತೃಪ್ತಿಯ ಮೊದಲ ಮೆಟ್ಟಿಲು. ಆಗ ಸಹನೆ ನಾಶವಾಗದೆ ನೆಮ್ಮದಿಯ ವಾತಾವರಣ ನೆಲೆಸುವುದು.

ಪರರ ವಸ್ತುವಿಗೆ ಅಥವಾ ಪರರ ಸ್ಥಿತಿಯ ಕುರಿತು ಯೋಚಿಸುತ್ತಾ ತನ್ನ ವಾಸ್ತವ ಸ್ಥಿತಿಯನ್ನು ನಾಶ ಮಾಡಿಕೊಂಡ ದುರ್ಯೋಧನ. ನಿಜವಾಗಿಯೂ ದುರ್ಯೋಧನನೊಬ್ಬ ಅದ್ಭುತ ಪರಾಕ್ರಮಿ. ದ್ರೋಣರ ಮಾತ್ರವಲ್ಲದೇ ಮಹಾಪರಾಕ್ರಮಿ ಬಲರಾಮರ ಶಿಷ್ಯ ಈ ದುರ್ಯೋಧನ. ಆದರೆ ತಾನು ಜೀವನ ಪೂರ್ತಿ ಪರರ ಕುರಿತಾಗಿ ಅಸೂಯೆಯಿಂದ ಯೋಚಿಸುತ್ತಾ ತನಗೆ ಅವರಿಂದ (ಪಾಂಡವರಿಂದ) ವಿಪತ್ತು ಅಥವಾ ತನ್ನ ಸ್ಥಾನಕ್ಕೆ ಕುತ್ತು ಎಂದು ಅಸಹನೆಯಿಂದ ಕೂಡಿದ ಚಿತ್ತವುಳ್ಳವನಾಗಿ ತೃಪ್ತಿಯಿಲ್ಲದ ಜೀವನವನ್ನು ಆರಂಭಿಸಿದ. ಆಮೇಲೆ ಅವನಿಗೆ ದೊರೆತವರೆಲ್ಲ ಅತೃಪ್ತ ಮನಸ್ಥಿತಿಯುಳ್ಳವರೇ ಆಗಿದ್ದಾರೆ. ಆದ್ದರಿಂದ ಅವನಿಗೆ ನೆಮ್ಮದಿ ಅಥವಾ ಇರುವುದರಲ್ಲೇ ತೃಪ್ತನಾಗಿ ಬಾಳುವ ಜೀವನದ ಸವಿ ಅನುಭವಕ್ಕೆ ಬರಲೇ ಇಲ್ಲ. ಅದರ ಫಲವೇ ತನ್ನ ಅಷ್ಟೂ ಪರಾಕ್ರಮವನ್ನು ತನ್ನ ವಂಶದ ನಾಶಕ್ಕೇ ಬಳಸುವಂತಹ ಸ್ಥಿತಿಗೆ ತಲುಪಿದ ದುರ್ಯೋಧನ.
ಅಲ್ಪ ತೃಪ್ತರಾಗಬೇಕೆಂಬುದು ಇದರ ತಾತ್ಪರ್ಯವಲ್ಲ. ಆದರೆ ಪರರ ಸ್ಥಿತಿಗೆ ಅಸೂಯೆ ಪಡುವ ಮನಸ್ಥಿತಿ ನಮ್ಮಲ್ಲಿರಬಾರದು. ಸುಲಭ ಮಾರ್ಗದಲ್ಲಿ ಕಾರ್ಯಸಾಧನೆಯ ಬಗ್ಗೆ ಯೋಚಿಸುತ್ತಾ ಕೂರುವುದರ ಬದಲು ಪ್ರಾಮಾಣಿಕ ಪರಿಶ್ರಮಪಟ್ಟು ಕಾರ್ಯಸಾಧನೆ ಮಾಡಿದರೆ ಉತ್ತಮ ಫಲ ಲಭಿಸುವುದು.

ನಮ್ಮಲ್ಲಿ ಎಷ್ಟೋ ಜನ ಒತ್ತಡದಿಂದ ಪ್ರಾಣತ್ಯಾಗ ಇತ್ಯಾದಿಗಳನ್ನು ಮಾಡುತ್ತಾರೆ. ಅವರೆಲ್ಲಾ ತಮ್ಮ ಇರುವ ಸ್ಥಿತಿಯನ್ನು ತೃಪ್ತಿಯಿಂದ ಪ್ರೀತಿಸಲು ಕಲಿತರೆ ಅದಕ್ಕಿಂತ ದೊಡ್ಡ ಸಂಪತ್ತು ಬೇರೆ ಇಲ್ಲ. ತಮಗಿಷ್ಟವಾದ ದೇವರ ನಾಮವನ್ನು ಶಾಂತರಾಗಿ ಯಾವುದರ ಕುರಿತೂ ಯೋಚಿಸದೆ ಕಣ್ಮುಚ್ಚಿ ಜಪಿಸುತ್ತಾ ಹೋಗಿ ಆಗ ಕಾಲಕ್ರಮೇಣ ಮನಸ್ಸು ಸರೋವರದ ನೀರಿನಂತೆ ಶಾಂತವಾಗಿ ಇರುವುದು. ಆಗ ಅಸಾಧ್ಯವಾದದ್ದೂ ಸಾಧ್ಯವಾಗುತ್ತದೆ ನಿಮ್ಮಿಂದ. ಅಸಾಧ್ಯವಾದದ್ದನ್ನು ಸಾಧ್ಯವಾಗಿಸುವುದೇ ರಾಮರಾಜ್ಯ. ಪ್ರಾಮಾಣಿಕವಾಗಿ ನೆಮ್ಮದಿಯಿಂದ ಬದುಕುವುದೇ ರಾಮರಾಜ್ಯ.

ಡಾ. ಗೌರಿ ಕೇಶವಕಿರಣ.ಬಿ

ಧಾರ್ಮಿಕ ಚಿಂತಕರು

Published On - 7:00 am, Tue, 6 June 23