
ಕೆಲವೇ ತಿಂಗಳುಗಳ ಹಿಂದೆ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ಗೆ (IPL) ರಾಜಾತಿಥ್ಯ ನೀಡಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ ಯಾವುದೇ ಪಂದ್ಯಗಳು ನಡೆಯುವುದಿಲ್ಲವೇನೋ ಎಂಬ ಆತಂಕ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಮೂಡಿತ್ತು. ಇದಕ್ಕೆ ಕಾರಣ ಅದೊಂದು ಘೋರ ದುರಂತ. 18 ವರ್ಷಗಳ ಬಳಿಕ ಐಪಿಎಲ್ ಪ್ರಶಸ್ತಿಯ ಬರ ನೀಗಿಸಿಕೊಂಡಿದ್ದ ಆರ್ಸಿಬಿ (RCB), ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ನಡೆಸುವ ಸಲುವಾಗಿ ಸಡಗರದಿಂದಲೇ ಬೆಂಗಳೂರಿಗೆ ಬಂದಿಳಿದಿತ್ತು. ಆದರೆ ಈ ಸಂಭ್ರಮಕ್ಕೆ ಕೆಲವೇ ಗಂಟೆಗಳಲ್ಲಿ ಸೂತಕದ ಛಾಯೆ ಆವರಿಸಿತು. ತನ್ನ ನೆಚ್ಚಿನ ಆಟಗಾರರನ್ನು ಹತ್ತಿರದಿಂದ ನೋಡುವ ಆಸೆಯಿಂದ ಚಿನ್ನಸ್ವಾಮಿ (M. Chinnaswamy Stadium) ಮೈದಾನದತ್ತ ಬಂದ ಅಭಿಮಾನಿಗಳು ಸಾವಿನ ಮನೆ ಕದ ತಟ್ಟಿದ್ದರು.
ಈ ದುರಂತದ ಬಳಿಕ ರಾಜ್ಯ ಸರ್ಕಾರ, ನ್ಯಾಯಮುರ್ತಿ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಆ ಸಮಿತಿಯು ಚಿನ್ನಸ್ವಾಮಿ ಕ್ರೀಡಾಂಗಣ ಯಾವುದೇ ದೊಡ್ಡ ಸಮಾರಂಭಗಳ ಆಯೋಜನೆಗೆ ಯೋಗ್ಯವಾಗಿಲ್ಲ ಎಂಬ ವರದಿ ನೀಡಿತ್ತು. ಆ ಬಳಿಕ ಈ ಮೈದಾನದಲ್ಲಿ ನಡೆಯಬೇಕಿದ್ದ ಮಹಾರಾಜ ಟಿ20 ಟ್ರೋಫಿ ಆಯೋಜನೆಗೆ ನಗರದ ಪೊಲೀಸರಿಂದ ಅನುಮತಿ ಸಿಗಲಿಲ್ಲ. ಹೀಗಾಗಿ ಈ ಟೂರ್ನಿಯನ್ನು ಮೈಸೂರಿಗೆ ಸ್ಥಳಾಂತರಿಸಲಾಯಿತು. ಇದೀಗ ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಮಹಿಳೆಯ ಏಕದಿನ ವಿಶ್ವಕಪ್ ಪಂದ್ಯಗಳನ್ನು ಸಹ ನವಿ ಮುಂಬೈಗೆ ಶಿಫ್ಟ್ ಮಾಡಲಾಗಿದೆ.
ಇದರಿಂದಾಗಿ ಇನ್ನು ಮುಂದೆ ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುವುದಿಲ್ಲವಾ ಎಂಬ ಪ್ರಶ್ನೆಗಳು ಮೂಡಿದ್ದವು. ಆದರೀಗ ನಗರದ ಪೊಲೀಸರು ಕೆಎಸ್ಸಿಎಗೆ 17 ಷರತ್ತುಗಳನ್ನು ವಿಧಿಸಿದ್ದು, ಈ ಷರತ್ತುಗಳನ್ನು ಪೂರ್ಣಗೊಳಿಸಿದರೆ ಪಂದ್ಯ ನಡೆಸಲು ಅನುಮತಿ ನೀಡುವ ಸುಳಿವು ನೀಡಿದ್ದಾರೆ. ಅಲ್ಲದೆ 15 ದಿನದೊಳಗೆ ಷರತ್ತುಗಳನ್ನು ಪೂರೈಸುವಂತೆ ಕೆಎಸ್ಸಿಎಗೆ ಡೆಡ್ ಲೈನ್ ಕೂಡ ನೀಡಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:05 pm, Fri, 22 August 25