Gautam Gambhir: ಕೋಚ್ ಆಗುವ ಮುನ್ನವೇ 3 ತಂಡಗಳ ಬೇಡಿಕೆಯಿಟ್ಟ ಗೌತಮ್ ಗಂಭೀರ್..!

Gautam Gambhir: ಈ ಬಾರಿಯ ಟಿ20 ವಿಶ್ವಕಪ್​ನ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿ ಮುಗಿಯಲಿದೆ. ಅಲ್ಲದೆ ಆ ಬಳಿಕ ಕೋಚ್ ಹುದ್ದೆಯಲ್ಲಿ ಮುಂದುವರೆಯುವುದಿಲ್ಲ ಎಂದು ದ್ರಾವಿಡ್ ಕೂಡ ಸ್ಪಷ್ಟಪಡಿಸಿದ್ದಾರೆ. ಹೀಗಾಗಿಯೇ ಇದೀಗ ಬಿಸಿಸಿಐ ಹೊಸ ಕೋಚ್ ಆಯ್ಕೆಗೆ ಮುಂದಾಗಿದ್ದು, ಅದರಂತೆ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ನೂತನ ತರಬೇತುದಾರರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

Gautam Gambhir: ಕೋಚ್ ಆಗುವ ಮುನ್ನವೇ 3 ತಂಡಗಳ ಬೇಡಿಕೆಯಿಟ್ಟ ಗೌತಮ್ ಗಂಭೀರ್..!
Gautam Gambhir

Updated on: Jun 18, 2024 | 5:19 PM

ಭಾರತ ತಂಡದ ಮುಖ್ಯ ಕೋಚ್ ಆಗಿ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautam Gambhir) ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇದರ ಮೊದಲ ಹೆಜ್ಜೆ ಎಂಬಂತೆ ಸೋಮವಾರ (ಜೂ.18) ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ನಡೆದ ಸಂದರ್ಶನಕ್ಕೆ ಗಂಭೀರ್ ಹಾಜರಾಗಿದ್ದಾರೆ. ಈ  ವೇಳೆ ಗೌತಮ್ ಗಂಭೀರ್ ಹಲವು ಬೇಡಿಕೆಗಳನ್ನು ಸಹ ಮುಂದಿಟ್ಟಿದ್ದಾರೆ ಎಂದು ವರದಿಯಾಗಿದೆ.

ಇಲ್ಲಿ ಗೌತಮ್ ಗಂಭೀರ್ ಅವರ ಪ್ರಥಮ ಬೇಡಿಕೆ ಮೂರು ತಂಡಗಳ ಆಯ್ಕೆ ಎಂದು ತಿಳಿದು ಬಂದಿದೆ. ಅಂದರೆ ವೈಟ್ ಬಾಲ್ ಮತ್ತು ರೆಡ್ ಬಾಲ್​ ಕ್ರಿಕೆಟ್​ಗೆ ಪ್ರತ್ಯೇಕ ತಂಡಗಳನ್ನು ಆಯ್ಕೆ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ.

ಏನಿದು 3 ತಂಡಗಳ ಪ್ಲ್ಯಾನ್?

ಗೌತಮ್ ಗಂಭೀರ್ ಇಲ್ಲಿ 3 ತಂಡಗಳ ಬೇಡಿಕೆ ಮುಂದಿಡಲು ಮುಖ್ಯ ಕಾರಣ ಬಲಿಷ್ಠ ಪಡೆಯನ್ನು ರೂಪಿಸುವುದು. ಅಂದರೆ ಟೆಸ್ಟ್ ಕ್ರಿಕೆಟ್​ ಆಡಲೆಂದೇ ಸಾಮರ್ಥ್ಯವಾಗಿರುವ ಆಟಗಾರರನ್ನು ಆ ಮಾದರಿಗೆ ಮಾತ್ರ ಆಯ್ಕೆ ಮಾಡುವುದಾಗಿದೆ.

ಇನ್ನು ಸೀಮಿತ ಓವರ್​ಗಳ ಪಂದ್ಯಗಳಿಗೆ ಪತ್ಯೇಕ ತಂಡಗಳನ್ನು ರೂಪಿಸುವ ಯೋಜನೆಯಲ್ಲಿದ್ದಾರೆ ಗಂಭೀರ್. ಇಲ್ಲಿ ಏಕದಿನ ಮಾದರಿಯಲ್ಲಿ ಬ್ಯಾಟ್ ಬೀಸಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರರಿಗೆ ಹೆಚ್ಚಿನ ಮನ್ನಣೆ ಸಿಗಲಿದೆ.

ಆದರೆ ಟಿ20 ಕ್ರಿಕೆಟ್​ನಲ್ಲಿ ಅಬ್ಬರಿಸಿದ ಮಾತ್ರಕ್ಕೆ ಏಕದಿನ ತಂಡಕ್ಕೂ ಆಯ್ಕೆಯಾಗುವುದು ಅನುಮಾನ. ಏಕೆಂದರೆ ಪತ್ಯೇಕ ಪಡೆಗಳನ್ನು ರೂಪಿಸುವ ಮೂಲಕ ಗೌತಮ್ ಗಂಭೀರ್ ಮೂರು ಮಾದರಿಯಲ್ಲೂ ತಂಡವನ್ನು ಬಲಿಷ್ಠಗೊಳಿಸಲು, ಎಲ್ಲರಿಗೂ ಅವಕಾಶ ಸಿಗುವಂತೆ ಮಾಡುವ ಪ್ಲ್ಯಾನ್ ರೂಪಿಸಿದ್ದಾರೆ.

ಹಿರಿಯ ಆಟಗಾರರಿಗೆ ಕೊಕ್:

ಗೌತಮ್ ಗಂಭೀರ್ ಅವರ ಬೇಡಿಕೆಯನ್ನು ಗಮನಿಸಿದರೆ, ಟಿ20 ತಂಡದಿಂದ ಹಿರಿಯ ಆಟಗಾರರನ್ನು ಕೈ ಬಿಡುವುದು ಬಹುತೇಕ ಖಚಿತ. ಏಕೆಂದರೆ 2026 ರ ಟಿ20 ವಿಶ್ವಕಪ್​ಗಾಗಿ ಗಂಭೀರ್ ಹೊಸ ತಂಡವನ್ನು ರೂಪಿಸುವ ಯೋಜನೆಯಲ್ಲಿದ್ದಾರೆ.

ಹೀಗಾಗಿ ಗೌತಮ್ ಗಂಭೀರ್ ಗರಡಿಯಲ್ಲಿ ಟಿ20 ಕ್ರಿಕೆಟ್​ನಲ್ಲಿ ಯಂಗ್ ಇಂಡಿಯಾವನ್ನು ಎದುರು ನೋಡಬಹುದು. ಈ ಮೂಲಕ ಗೌತಮ್ ಗಂಭಿರ್ ಹೊಸ ಪಡೆಯೊಂದಿಗೆ ವಿಶ್ವಕಪ್ ಗೆಲ್ಲುವ ಇರಾದೆಯಲ್ಲಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆಯ ಸಂದರ್ಶನದ ಮೊದಲ ಸುತ್ತು ಮುಗಿಸಿರುವ ಗೌತಮ್ ಗಂಭೀರ್ ಅವರ ಎಲ್ಲಾ ಬೇಡಿಕೆಗಳಿಗೂ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: T20 World Cup 2024: ಒಂದೇ ಪಂದ್ಯದಲ್ಲಿ ಹಲವು ವಿಶ್ವ ದಾಖಲೆ ಬರೆದ ವೆಸ್ಟ್ ಇಂಡೀಸ್

ಇನ್ನು ಬುಧವಾರ 2ನೇ ಸುತ್ತಿನ ಸಂದರ್ಶನ ನಡೆಯಲಿದ್ದು, ಇದಾದ ಬಳಿಕ ಗೌತಮ್ ಗಂಭೀರ್ ಅವರನ್ನು ಮುಖ್ಯ ಕೋಚ್ ಹುದ್ದೆಗೆ ಆಯ್ಕೆ ಮಾಡುವಂತೆ ಬಿಸಿಸಿಐಗೆ ಕ್ರಿಕೆಟ್ ಸಲಹಾ ಸಮಿತಿ ಶಿಫಾರಸ್ಸು ಮಾಡಲಿದೆ. ಆ ಬಳಿಕ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ಅಧಿಕೃತವಾಗಿ ಘೋಷಿಸಲಿದೆ.

 

 

 

 

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us