IND vs SA: ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ? ರಾಂಚಿ ಪಿಚ್ ಯಾರಿಗೆ ಸಹಕಾರಿ?

India vs South Africa 1st ODI: ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೊದಲ ಪಂದ್ಯ ರಾಂಚಿಯಲ್ಲಿ ನಡೆಯಲಿದೆ. ಟೆಸ್ಟ್ ಸರಣಿ ಸೋತ ಭಾರತ ಸೇಡು ತೀರಿಸಿಕೊಳ್ಳಲು ಸಿದ್ಧವಾಗಿದೆ. ಗಾಯಗೊಂಡ ಗಿಲ್, ಅಯ್ಯರ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ನಾಯಕತ್ವ ವಹಿಸಿದ್ದಾರೆ. ರಾಂಚಿಯ ಹವಾಮಾನ ಆಹ್ಲಾದಕರವಾಗಿದ್ದು, ಮಳೆಯ ಭೀತಿಯಿಲ್ಲ. ಪಿಚ್ ಆರಂಭದಲ್ಲಿ ವೇಗಿಗಳಿಗೆ, ನಂತರ ಸ್ಪಿನ್ನರ್‌ಗಳಿಗೆ ಸಹಾಯಕ. ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿ ಪ್ರಭಾವ ಇರಲಿದೆ.

IND vs SA: ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ? ರಾಂಚಿ ಪಿಚ್ ಯಾರಿಗೆ ಸಹಕಾರಿ?
Ranchi Weather

Updated on: Nov 29, 2025 | 9:22 PM

ಟೆಸ್ಟ್ ಸರಣಿಯ ನಂತರ, ಟೀಂ ಇಂಡಿಯಾ ಈಗ ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಭಾರತ ಟೆಸ್ಟ್ ಸರಣಿಯನ್ನು 0-2 ಅಂತರದಿಂದ ಸೋತಿದ್ದು, ಇದೀಗ ಏಕದಿನ ಸರಣಿಯಲ್ಲಿ ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ. ಆದಾಗ್ಯೂ, ಈ ಸರಣಿಗೂ ಮೊದಲು ಭಾರತ ತಂಡಕ್ಕೆ 2 ಆಘಾತ ಎದುರಾಗಿದೆ. ಅದೆನೆಂದರೆ ಭಾರತದ ಖಾಯಂ ನಾಯಕ ಶುಭ್​ಮನ್ ಗಿಲ್ ಮತ್ತು ಉಪನಾಯಕ ಶ್ರೇಯಸ್ ಅಯ್ಯರ್ ಇಬ್ಬರೂ ಗಾಯಗಳಿಂದಾಗಿ ಹೊರಗುಳಿದಿದ್ದಾರೆ. ಆದ್ದರಿಂದ, ಕೆಎಲ್ ರಾಹುಲ್ (KL Rahul) ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಇತ್ತ ಟೆಂಬಾ ಬವುಮಾ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಲಿದ್ದಾರೆ. ಉಭಯ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ರಾಂಚಿಯಲ್ಲಿ ನಡೆಯಲಿದ್ದು, ಪಂದ್ಯದ ದಿನ ರಾಂಚಿಯ ಹವಾಮಾನ ಹೇಗಿರಲಿದೆ? ಮತ್ತು ಪಿಚ್ ಯಾರಿಗೆ ಸಹಕಾರಿಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ಹವಾಮಾನ ವರದಿ ಇಲ್ಲಿದೆ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದ ಸಮಯದಲ್ಲಿ ಹವಾಮಾನವು ಆಹ್ಲಾದಕರವಾಗಿರಲಿದೆ. ನವೆಂಬರ್ 30 ರಂದು, ರಾಂಚಿಯಲ್ಲಿ ಗರಿಷ್ಠ ತಾಪಮಾನ 24°C ಮತ್ತು ಕನಿಷ್ಠ ತಾಪಮಾನ 12°C ಇರಲಿದೆ. ಪಂದ್ಯದ ಸಮಯದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಆದರೆ ಮಳೆಯ ನಿರೀಕ್ಷೆಯಿಲ್ಲ. ಗಂಟೆಗೆ 9 ಕಿ.ಮೀ ವೇಗದಲ್ಲಿ ಶೀತ ಗಾಳಿ ಬೀಸುವ ನಿರೀಕ್ಷೆಯಿದೆ. ಪಂದ್ಯವು ಹಗಲು-ರಾತ್ರಿ ಪಂದ್ಯವಾಗಿರುವುದರಿಂದ, ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಬಹುದು, ಏಕೆಂದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿಯ ಆಟದ ಮೇಲೆ ಪ್ರಭಾವ ಬೀರಬಹುದು.

ಪಿಚ್ ಯಾರಿಗೆ ಸಹಕಾರಿ?

ರಾಂಚಿಯಲ್ಲಿ ಹೊಸ ಚೆಂಡು ವೇಗದ ಬೌಲರ್‌ಗಳಿಗೆ ಸಹಾಯಕವಾಗಿದೆ. ಆದಾಗ್ಯೂ, ಪಿಚ್ ಮತ್ತು ಚೆಂಡು ಹಳೆಯದಾದಂತೆ, ಸ್ಪಿನ್ನರ್‌ಗಳಿಗೆ ಪ್ರಯೋಜನವಾಗಲಿದೆ. ಇನ್ನು ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಕೊಂಚ ನೆರವು ಸಿಗಲಿದೆ. ರಾತ್ರಿಯಲ್ಲಿ ಇಬ್ಬನಿ ಇಲ್ಲದಿದ್ದರೆ, ಸ್ಪಿನ್ ಬೌಲರ್‌ಗಳು ಪ್ರಾಬಲ್ಯ ಸಾಧಿಸುತ್ತಾರೆ, ಆದರೆ ಮೊದಲ ಏಕದಿನ ಸಮಯದಲ್ಲಿ ಇಬ್ಬನಿ ಬೀಳುವ ಸಾಧ್ಯತೆಯಿದೆ. ಇದು ಚೇಸಿಂಗ್ ತಂಡಕ್ಕೆ ನೆರವಾಗಲಿದೆ.

IND vs SA: ತಂಡವನ್ನು ಕಾಡುತ್ತಿರುವ ದೌರ್ಬಲ್ಯಕ್ಕೆ ನನ್ನ ಬಳಿ ಉತ್ತರವಿಲ್ಲ ಎಂದ ರಾಹುಲ್

ಉಭಯ ತಂಡಗಳು

ಏಕದಿನ ಸರಣಿಗೆ ಭಾರತ ತಂಡ: ಕೆಎಲ್ ರಾಹುಲ್ (ನಾಯಕ/ವಿಕೆಟ್ ಕೀಪರ್), ರಿಷಭ್ ಪಂತ್ (ಉಪನಾಯಕ/ವಿಕೆಟ್ ಕೀಪರ್), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ರುತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ಧ್ರುವ ಜುರೆಲ್ ಮತ್ತು ಅರ್ಶ್ದೀಪ್ ಸಿಂಗ್.

ದಕ್ಷಿಣ ಆಫ್ರಿಕಾದ ತಂಡ: ಟೆಂಬಾ ಬವುಮಾ (ನಾಯಕ), ಒಟ್ನೀಲ್ ಬಾರ್ಟ್‌ಮನ್, ಕಾರ್ಬಿನ್ ಬಾಷ್, ಮ್ಯಾಥ್ಯೂ ಬ್ರೀಟ್ಜ್‌ಕೆ, ಡೆವಾಲ್ಡ್ ಬ್ರೂಯಿಸ್, ನಾಂಡ್ರೆ ಬರ್ಗರ್, ಕ್ವಿಂಟನ್ ಡಿ ಕಾಕ್, ಟೋನಿ ಡಿ ಜೊರ್ಜಿ, ರೂಬಿನ್ ಹರ್ಮನ್, ಕೇಶವ್ ಮಹಾರಾಜ್, ಮಾರ್ಕೊ ಯಾನ್ಸೆನ್, ಐಡೆನ್ ಮಾರ್ಕ್ರಾಮ್, ಲುಂಗಿ ಎನ್ಗಿಡಿ, ರಿಯಾನ್ ರಿಕೆಲ್ಟನ್, ಪ್ರೆನೆಲನ್ ಸುಬ್ರಾಯೆನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ