Sarfaraz Khan: ಟೀಮ್ ಇಂಡಿಯಾಗೆ ಆಯ್ಕೆಯಾದರೂ ದುಲೀಪ್ ಟ್ರೋಫಿ ಆಡಲಿರುವ ಸರ್ಫರಾಝ್ ಖಾನ್

|

Updated on: Sep 11, 2024 | 10:41 AM

Sarfaraz Khan: ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಮೊದಲ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಅತ್ತ ದುಲೀಪ್ ಟ್ರೋಫಿಯ 2ನೇ ಸುತ್ತಿನ ಪಂದ್ಯಗಳು ಸೆಪ್ಟೆಂಬರ್ 12 ರಿಂದ ಆರಂಭವಾಗಲಿದೆ. ಈ ಎರಡು ಪಂದ್ಯಗಳ ನಡುವೆ ವಾರಗಳ ನಡುವಣ ಅಂತರವಿದ್ದು, ಹೀಗಾಗಿ ಸರ್ಫರಾಝ್ ಖಾನ್ ದುಲೀಪ್ ಟ್ರೋಫಿಯಲ್ಲೇ ಮುಂದುವರೆಯಲಿದ್ದಾರೆ.

Sarfaraz Khan: ಟೀಮ್ ಇಂಡಿಯಾಗೆ ಆಯ್ಕೆಯಾದರೂ ದುಲೀಪ್ ಟ್ರೋಫಿ ಆಡಲಿರುವ ಸರ್ಫರಾಝ್ ಖಾನ್
Sarfaraz Khan
Follow us on

ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾದ ಟೀಮ್ ಇಂಡಿಯಾದಲ್ಲಿ ಯುವ ದಾಂಡಿಗ ಸರ್ಫರಾಝ್ ಖಾನ್ ಕೂಡ ಸ್ಥಾನ ಪಡೆದಿದ್ದಾರೆ. ಇದಾಗ್ಯೂ ಅವರು ಮೊದಲ ಪಂದ್ಯಕ್ಕಾಗಿ ಚೆನ್ನೈಗೆ ಪ್ರಯಾಣಿಸುತ್ತಿಲ್ಲ. ಬದಲಾಗಿ ದುಲೀಪ್ ಟ್ರೋಫಿಯಲ್ಲೇ ಮುಂದುವರೆಯಲಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಭಾರತ ಬಿ ತಂಡದ ಭಾಗವಾಗಿರುವ ಸರ್ಫರಾಝ್ ಖಾನ್ ನಾಳೆಯಿಂದ (ಸೆ.12) ಶುರುವಾಗಲಿರುವ ಭಾರತ ಸಿ ತಂಡದ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಅಂದರೆ ಇಲ್ಲಿ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾದರೂ ದೇಶೀಯ ಟೂರ್ನಿಯಲ್ಲಿ ಮುಂದುವರೆಯುವಂತೆ ಸರ್ಫರಾಝ್ ಖಾನ್​ಗೆ ಬಿಸಿಸಿಐ ಆಯ್ಕೆ ಸಮಿತಿ ತಿಳಿಸಿದೆ.

ಏಕೆಂದರೆ ಭಾರತ ಟೆಸ್ಟ್ ತಂಡದಲ್ಲಿ ಒಟ್ಟು 16 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಇಲ್ಲಿ ಕಣಕ್ಕಿಳಿಯುವುದು ಕೇವಲ 11 ಮಂದಿ ಮಾತ್ರ. ಉಳಿದ ಐವರು ಆಟಗಾರರು ಬೆಂಚ್ ಕಾಯಲಿದ್ದಾರೆ. ಹಾಗೆಯೇ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿ ಶುರುವಾಗುವುದು ಸೆಪ್ಟೆಂಬರ್ 19 ರಿಂದ. ಅದೇ ದುಲೀಪ್ ಟ್ರೋಫಿಯ 2ನೇ ಸುತ್ತಿನ ಪಂದ್ಯಗಳು ಸೆಪ್ಟೆಂಬರ್ 12 ರಿಂದ ಆರಂಭವಾಗಲಿದೆ. ಹೀಗಾಗಿ  ಸರ್ಫರಾಝ್ ಖಾನ್​ಗೆ ದುಲೀಪ್ ಟ್ರೋಫಿ ಆಡುವಂತೆ ಸೂಚಿಸಲಾಗಿದೆ. ಇನ್ನು ಭಾರತ ಟೆಸ್ಟ್ ತಂಡದ ಯಾವುದಾದರೂ ಬ್ಯಾಟರ್ ಗಾಯಗೊಂಡು ಹೊರಗುಳಿದರೆ ಸರ್ಫರಾಝ್ ಖಾನ್​ಗೆ ಬುಲಾವ್ ನೀಡಬಹುದು. ಅದುವರೆಗೆ ಅವರು ದುಲೀಪ್ ಟ್ರೋಫಿಯಲ್ಲೇ ಮುಂದುವರೆಯುವ ಸಾಧ್ಯತೆಯಿದೆ.

ಕೆಎಲ್ ರಾಹುಲ್ ಕಣಕ್ಕಿಳಿಯುವುದು ಖಚಿತ:

ಸರ್ಫರಾಝ್ ಖಾನ್ ದುಲೀಪ್ ಟ್ರೋಫಿಯಲ್ಲಿ ಮುಂದುವರೆಯುತ್ತಿರುವುದರಿಂದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕಣಕ್ಕಿಳಿಯುವುದು ಖಚಿತವಾಗಿದೆ. ಇದಕ್ಕೂ ಮುನ್ನ ಸರ್ಫರಾಝ್ ಹಾಗೂ ಕೆಎಲ್ ರಾಹುಲ್ ನಡುವೆ ಮಧ್ಯಮ ಕ್ರಮಾಂಕದ ಸ್ಥಾನಕ್ಕಾಗಿ ಪೈಪೋಟಿಯಿತ್ತು. ಆದರೀಗ ಯುವ ದಾಂಡಿಗ ದುಲೀಪ್ ಟ್ರೋಫಿಯಲ್ಲಿ ಮುಂದುವರೆಯುತ್ತಿರುವುದರಿಂದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಕನ್ಫರ್ಮ್ ಆಗಿದೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸರ್ಫರಾಝ್ ಖಾನ್, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ , ಆಕಾಶ್ ದೀಪ್ ಮತ್ತು ಯಶ್ ದಯಾಳ್.

ಇದನ್ನೂ ಓದಿ: CSK ಪರ ಆಡಬೇಕು… RCB ಆಟಗಾರನ ಹೇಳಿಕೆ..!

ದುಲೀಪ್ ಟ್ರೋಫಿ ಭಾರತ B ತಂಡ:  ಅಭಿಮನ್ಯು ಈಶ್ವರನ್ (ನಾಯಕ), ಸರ್ಫರಾಝ್ ಖಾನ್, ಮುಶೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಮುಖೇಶ್ ಕುಮಾರ್, ರಾಹುಲ್ ಚಹರ್, ಆರ್ ಸಾಯಿ ಕಿಶೋರ್, ಮೋಹಿತ್ ಅವಸ್ತಿ, ಎನ್ ಜಗದೀಸನ್ (ವಿಕೆಟ್ ಕೀಪರ್), ಸುಯಶ್ ಪ್ರಭುದೇಸಾಯಿ, ರಿಂಕು ಸಿಂಗ್, ಹಿಮಾಂಶು ಮಂತ್ರಿ.

 

Published On - 10:26 am, Wed, 11 September 24