ಹಿಜಾಬ್: ಹೈಕೋರ್ಟ್ ತೀರ್ಪು ಹೊರಬಿದ್ದ ನಂತರ ಯಾದಗಿರಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುವುದು ಬಿಟ್ಟು ಮನೆಗೆ ಹೋದರು!

Edited By:

Updated on: Mar 15, 2022 | 9:44 PM

ವಿದ್ಯಾರ್ಥಿನಿಯರು ಹೈಕೋರ್ಟ್ ತೀರ್ಪು 10:30ಕ್ಕೆ ಹೊರಬೀಳುತ್ತದೆ, ಅಲ್ಲಿಯವರೆಗೆ ಕಾಯುತ್ತೇವೆ ಅಂತ ಹೇಳಿ ತೀರ್ಪು ಬಂದ ಮೇಲೆ ನಾವು ಪರೀಕ್ಷೆ ಬರೆಯುವುದಿಲ್ಲ ಎಂದು ಹೇಳಿ ಮನೆಗಳಿಗೆ ಹೋದರಂತೆ.

ಯಾದಗಿರಿ: ಮಂಗಳವಾರ ಹಿಜಾಬ್ ವಿವಾದ (hijab row) ಕುರಿತ ಪ್ರಕರಣದಲ್ಲಿ ಹೈಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದ ಬಳಿಕ ರಾಜ್ಯದಲ್ಲಿ ಹೊಸ ಪ್ರಕ್ರಿಯೆ ಶುರುವಾಗಿದೆ. ಹಿಜಾಬ್ ತೆಗೆದು ತರಗತಿಗಳಿಗೆ ಬನ್ನಿ ಅಂತ ಪ್ರಿನ್ಸಿಪಾಲರು (principal) ಮತ್ತು ಉಪನ್ಯಾಸಕರು ಹೇಳುತ್ತಿದ್ದಂತೆಯೇ ಕೆಲ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುವುದನ್ನು ಸಹ ಬಿಟ್ಟು ಮನೆಗಳಿಗೆ ವಾಪಸ್ಸು ಹೋಗುತ್ತಿದ್ದಾರೆ. ಯಾದಗಿರಿಯ ಟಿವಿ9 ವರದಿಗಾರ ಒಂದು ವರದಿಯನ್ನು ಕಳಿಸಿದ್ದು ಅದನ್ನು ನೀವು ನೋಡಬಹುದು. ವಿಡಿಯೋನಲ್ಲಿ ಮಾತಾಡುತ್ತಿರುವವರು ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿರುವ ಸರ್ಕಾರೀ ಪದವಿ-ಪೂರ್ವ ಕಾಲೇಜಿನ ಪ್ರಿನ್ಸಿಪಾಲರಾಗಿರುವ ಶಕುಂತಲಾ (Shakuntala). ಮಂಗಳವಾರ ಬೆಳಗ್ಗೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕಾಲೇಜಿಗೆ ಬಂದಾಗ ಅದನ್ನು ತೆಗೆದು ಕ್ಲಾಸುಗಳಿಗೆ ಹೋಗುವಂತೆ ಹೇಳಲಾಗಿದೆ. ವಿದ್ಯಾರ್ಥಿನಿಯರು ಹೈಕೋರ್ಟ್ ತೀರ್ಪು 10:30ಕ್ಕೆ ಹೊರಬೀಳುತ್ತದೆ, ಅಲ್ಲಿಯವರೆಗೆ ಕಾಯುತ್ತೇವೆ ಅಂತ ಹೇಳಿ ತೀರ್ಪು ಬಂದ ಮೇಲೆ ನಾವು ಪರೀಕ್ಷೆ ಬರೆಯುವುದಿಲ್ಲ ಎಂದು ಹೇಳಿ ಮನೆಗಳಿಗೆ ಹೋದರಂತೆ.

ಶಕುಂತಲಾ ಅವರು ಹೇಳುವ ಪ್ರಕಾರ 11 ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೆ ಮನೆಗಳಿಗೆ ವಾಪಸ್ಸು ಹೋಗಿದ್ದಾರೆ. ಅವರಿಗಿಂತ ಮೊದಲು 4 ವಿದ್ಯಾರ್ಥಿನಿಯರು ವಾಪಸ್ಸು ಹೋಗಿದ್ದಾರಂತೆ. ಈ ಕಾಲೇಜಲ್ಲಿ ಮುಸ್ಲಿಂ ಸಮುದಾಯದ 35 ವಿದ್ಯಾರ್ಥಿನಿಯರಿದ್ದಾರೆ ಅವರ ಪೈಕಿ 15 ಜನ ಹಿಜಾಬ್ ಧರಿಸುವ ಅವಕಾಶ ನೀಡದ ಕಾರಣ ಮನೆಗಳಿಗೆ ಮರಳಿದ್ದಾರೆ.

ಈ 15 ವಿದ್ಯಾರ್ಥಿನಿಯರು ಪರೀಕ್ಷೆಗಳನ್ನು ಸಹ ಬರೆಯಲೊಲ್ಲರು. ಬೇರೆ ಮಕ್ಕಳು ಕೋರ್ಟ್ ಆದೇಶವನ್ನು ಪಾಲಿಸಿ ಹಿಜಾಬ್ ಮತ್ತು ಬುರ್ಖಾ ತೆಗೆದಿಟ್ಟು ಪರೀಕ್ಷೆ ಬರೆದಿದ್ದಾರೆ.

ಇದನ್ನೂ ಓದಿ:  ಹಿಜಾಬ್​: ಹೈಕೋರ್ಟ್​ ಆದೇಶ ಒಪ್ಪಲೇಬೇಕು, ರಾಜಕೀಯ ಲಾಭ-ನಷ್ಟದ ಬಗ್ಗೆ ಯೋಚನೆ ಮಾಡಲ್ಲ -ಜೆಡಿಎಸ್ ವರಿಷ್ಠ ದೇವೇಗೌಡ

Follow Us
Web contact

TV9 Kannada

Read More