ಬೆಂಗಳೂರು: ಬೀದರ್ ಲೋಕಸಭಾ ಕ್ಷೇತ್ರದಿಂದ ಸಾಗರ್ ಖಂಡ್ರೆ (Sagar Khandre) ಗೆದ್ದಿದ್ದು ಮುಸ್ಲಿಂ ಸಮುದಾಯದ ವೋಟುಗಳಿಂದ; ಹಾಗಾಗಿ ಈಶ್ವರ್ ಖಂಡ್ರೆ (Eshwar Khandre) ಅವರು ಆ ಸಮುದಾಯದ ಮುಂದೆ ತಲೆಬಾಗಿ ಕೆಲಸ ಮಾಡಬೇಕು ಎಂದು ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ನೀಡಿದ ವಿವಾದಾತ್ಮಕ ಹೇಳಿಕೆಗೆ ನಗರದಲ್ಲಿಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರತಿಕ್ರಿಯೆ ನೀಡಿದರು. ಜನಪ್ರತಿನಿಧಿಯೊಬ್ಬ ಆಯ್ಕೆಯಾಗಬೇಕಾದರೆ ಅವನಿಗೆ ಎಲ್ಲ ಸಮುದಾಯದವರು ವೋಟು ಹಾಕಿರುತ್ತಾರೆ. ಗೆದ್ದ ಬಳಿಕ ಅವನು ತನಗೆ ಯಾವ ಸಮುದಾಯದವರು ವೋಟು ಮಾಡಿದ್ದಾರೆ, ಯಾರು ಮಾಡಿಲ್ಲ ಅಂತ ಯೋಚಿಸುತ್ತಾ ಕಾಲಹರಣ ಮಾಡೋದು ಸರಿಯಲ್ಲ, ಜನತಾ ಜನಾರ್ಧನ ಅಂತ ನಾವು ಹೇಳೋದ್ಯಾಕೆ? ಗೆದ್ದವನು ಎಲ್ಲ ಸಮುದಾಯಗಳಿಗಾಗಿ ಕೆಲಸ ಮಾಡಬೇಕು. ಜನಸೇವೆ ಮಾಡಲೆಂದೇ ಅವನಿಗೆ ಮ್ಯಾಂಡೇಟ್ ಸಿಕ್ಕಿರುತ್ತದೆ ಎಂದು ಖರ್ಗೆ ಹೇಳಿದರು. ಕಲುಷಿತ ನೀರಿನಿಂದ ಜನರ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಮಾತಾಡಿದ ಅವರು ನೀರು ಟೆಸ್ಟ್ ಮಾಡುವ ಕಿಟ್ ಗಳನ್ನು ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸರಬರಾಜು ಮಾಡಲಾಗುತ್ತಿದೆ ಮತ್ತು ಪಿಡಿಓ, ವಾಟರ್ ಮನ್ ಮತ್ತು ಜ್ಯೂನಿಯರ್ ಇಂಜಿನೀಯರ್ಗಳಿಗೆ ತರಬೇತಿ ನೀಡುವ ಕೆಲಸವೂ ಆರಂಭವಾಗಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ