ಅವೈಜ್ಞಾನಿಕ ಕಾಮಗಾರಿಯಿಂದ ಕುಮಟಾ-ಶಿರಸಿ ನಡುವೆ ಅಡಕೆ ತೋಟಗಳಿಗೆ ನೀರು ನುಗ್ಗಿ ಬೆಳೆಗಾರರಿಗೆ ಅಪಾರ ನಷ್ಟ

|

Updated on: Jul 08, 2024 | 11:31 AM

ಅವೈಜ್ಞಾನಿಕ ಕಾಮಗಾರಿಗಳಿಂದ ಕೃತಕ ಪ್ರವಾಹಗಳು ಉಂಟಾಗುತ್ತಿವೆ, ಗುಡ್ಡಕುಸಿತ ಉಂಟಾಗುತ್ತಿದೆ, ತೋಟ ಮತ್ತು ಹೊಲ-ಗದ್ದೆಗಳಲ್ಲಿ ನೀರು ಶೇಖರಗೊಳ್ಳುತ್ತಿದೆ-ಒಟ್ಟಿನಲ್ಲಿ ರೈತರು ಮತ್ತು ಜನಸಾಮಾನ್ಯ ತೀವ್ರ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಪ್ರತಿ ಮಳೆಗಾಲದಲ್ಲಿ ಇದೇ ಪರಿಸ್ಥತಿ ನಿರ್ಮಾಣವಾಗುತ್ತಿದೆ. ಬೇಸಿಗೆ ಮತ್ತು ಚಳಿಗಾಲದಲ್ಲೇ ಸೂಕ್ತ ಪರಿಹಾರ ಕಂಡುಕೊಳ್ಳಲು ಸರ್ಕಾರಗಳಿಗೆ ಕಷ್ಟವಾಗುತ್ತಿದೆಯೇ?

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮತ್ತು ಅದರಿಂದುಟಾಗುವ ಅನಾಹುತಗಳು ಮುಂದುವರಿದಿವೆ. ಕುಮಟಾ ಮತ್ತು ಶಿರಸಿ ನಡುವೆ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಅಡಕೆ ತೋಟಗಳಿಗೆ ನೀರು ನುಗ್ಗಿ ಅಡಕೆ ಬೆಳೆಗಾರರು ಅಪಾರ ನಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ನಮ್ಮ ಕಾರವಾರ ವರದಿಗಾರ ಅವೈಜ್ಞಾನಿಕ ರಸ್ತೆ ಮತ್ತು ಸೇತುವೆ ಕಾಮಗಾರಿಯಿಂದ ಕೇವಲ ಇಲ್ಲಿ ಮಾತ್ರ ಅಲ್ಲ ಹಲವಾರು ಭಾಗಗಳಲ್ಲಿ ಅವಾಂತರಗಳು ಎದುರಾಗುತ್ತಿವೆ ಎಂದು ಹೇಳುತ್ತಾರೆ. ಅಳಕೋಡ ಗ್ರಾಮದಿಂದ ಶಿರಸಿಗೆ ಹೋಗುವ ರಸ್ತೆಯಲ್ಲಿ ಕಾಮಗಾರಿ ಜಾರಿಯಲ್ಲಿರವುದರಿಂದ ಮೊನ್ನೆ ಇದೇ ಭಾಗದಲ್ಲಿ ಬಸ್ಸೊಂದು ಕೆಟ್ಟು ನಿಂತು ರಸ್ತೆಯಲ್ಲಿ ನೀರು ಹರಿಯುತ್ತಿದ್ದ ಕಾರಣ ಬಸ್ಸಲ್ಲಿದ್ದ ಪ್ರಯಾಣಿಕರನ್ನು ದೋಣಿಯ ಮೂಲಕ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿತ್ತು ಎಂದು ನಮ್ಮ ವರದಿಗಾರ ಹೇಳುತ್ತಾರೆ. ಸ್ಥಳೀಯರೊಬ್ಬರು ಹೇಳುವ ಪ್ರಕಾರ ಗುಡ್ಡ ಪ್ರದೇಶದಿಂದ ಹರಿದು ಬರುವ ನೀರು ರಸ್ತೆಯನ್ನು ದಾಟಿ ಯಾಣದ ಚಂಡಿಕಾ ಹೊಳೆ ಸೇರುತಿತ್ತು. ಆದರೆ ರಸ್ತೆಯನ್ನು ಎತ್ತರಿಸುವ ದೃಷ್ಟಿಯಿಂದ 5-ಅಡಿ ಎತ್ತರದ ತಡೆಗೋಡೆ ಕಟ್ಟಿರುವುದರಿಂದ ನೀರು ಕೆಳಗೆ ಹರಿಯದೆ ಆ ಭಾಗದಲ್ಲಿರುವ ಅಡಕೆ ತೋಟಗಳಿಗೆ ನುಗ್ಗುತ್ತಿದೆ. ಅವೈಜ್ಞಾನಿಕ ಕಾಮಗಾರಿಗಳಿಂದ ರೈತರು ಮತ್ತು ಜನಸಾಮಾನ್ಯರಿಗೆ ಎದುರಾಗುತ್ತಿರುವ ಸಂಕಷ್ಟಗಳಿಗೆ ಹೊಣೆ ಯಾರು ಅಂತ ಸರ್ಕಾರ ಹೇಳಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ: ನೀರಿನ ನಡುಗಡ್ಡೆಗಳಾದ ಚೆಂಡಿಯಾ ಗ್ರಾಮದ ಮನೆಗಳು

Follow us on