ಪ್ರಧಾನಿ ಮೋದಿ ತಮ್ಮ ಟ್ವೀಟ್ ನಲ್ಲಿ ಹೇಳಿರುವಂತೆ ಜನವರಿ 22 ನಮ್ಮ ಸ್ಮೃತಿಪಟಲದಲ್ಲಿ ಶಾಶ್ವತವಾಗಿ ಉಳಿಯಲಿದೆ!

Updated on: Jan 23, 2024 | 12:50 PM

ಜನವರಿ 22 ರಂದು ಕೇವಲ ಒಂದು ತಾರೀಖಲ್ಲ, ಭಾರತದಲ್ಲಿ ಒಂದು ನೂತನ ಕಾಲಚಕ್ರ ಉದಯಿಸಿದನ್ನು ಸೂಚಿಸುವ ದಿನವಾಗಿದೆ ಅಂತ ಪ್ರಧಾನಿ ಮೋದಿ ಹೇಳಿದ್ದು ಭಾರತೀಯರ ಮನದಲ್ಲಿ ಅಚ್ಚಳಿಯದೆ ಉಳಿಯಲಿದೆ. ಮಂದಿರ ನಿರ್ಮಾಣದ ಕೆಲಸಗಾರರ ಮೇಲೆ ಅವರು ಪುಷ್ಪವೃಷ್ಟಿ ಸುರಿಸಿ ಅಭಿನಂದಿಸಿದ್ದು ಹಿಂದೆ ಯಾವತ್ತೂ ಕಾಣದ ಒಂದು ದೃಶ್ಯ!

ಬೆಂಗಳೂರು: ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣಗೊಂಡಿರುವ ರಾಮನ ದೇಗುಲದಲ್ಲಿ ಸೋಮವಾರದಂದು ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ (Ram temple consecration ceremony) ಮುಖ್ಯ ಯಜಮಾನನಾಗಿ (Chief Yajaman) ಭಾಗಿಯಾಗಿ ಎಲ್ಲ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ತಮ್ಮ X ಹ್ಯಾಂಡಲ್ ನಲ್ಲಿ, ‘ನಿನ್ನೆ ಜನವರಿ 22 ರಂದು ಅಯೋಧ್ಯೆಯಲ್ಲಿ ನಾವೆಲ್ಲ ನೋಡಿದ್ದು ಮುಂಬರುವ ಅನೇಕ ವರ್ಷಗಳವರೆಗೆ ನಮ್ಮ ಸ್ಮೃತಿಪಟಲಗಳಲ್ಲಿ ಅಚ್ಚಳಿಯದೆ ಉಳಿಯಲಿದೆ,’ ಅಂತ ಬರೆದುಕೊಂಡಿದ್ದಾರೆ.

 

ಅದಲ್ಲೇನೂ ಅನುಮಾನವೇ ಬೇಡ, ನಿನ್ನೆ ಅಯೋಧ್ಯೆಯಲ್ಲಿ ಭಾರತೀಯರು ನೋಡಿದ್ದು ಅಸಾಧಾರಣ ಮತ್ತು ಅಭೂತಪೂರ್ವವಾದ ದೃಶ್ಯಗಳು. ಶತಮಾನಗಳಿಂದ ಭಾರತೀಯರು ಎದುರು ನೋಡುತ್ತಿದ್ದ ಕ್ಷಣಗಳವು. ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕಾಗಿ ನೂತನ ರಾಮಮಂದಿರ ಬಗೆಬಗೆಯ ಹೂವು ಮತ್ತು ಹಾರಗಳಿಂದ ದಿವ್ಯವಾಗಿ ಸಜ್ಜಾಗಿತ್ತು. ದೇಗುಲವನ್ನು ನೋಡಿದಾಕ್ಷಣ ಭಕ್ತಿಭಾವ ಮತ್ತು ಒಂದು ಬಗೆಯ ಸಾರ್ಥಕತೆ ಮನದಲ್ಲಿ ಮೂಡಿತು. ಪ್ರಧಾನಿ ಮೋದಿ ರಾಮನ ವಸ್ತ್ರಗಳನ್ನು ಹಿಡಿದು ಶ್ರದ್ಧೆ ಮತ್ತು ಭಕ್ತಿಯಿಂದ ಗಂಭೀರವಾಗಿ ಮಂದಿರದ ಗರ್ಭಗುಡಿಯೊಳಗೆ ನಡೆದುಹೋದದ್ದು, ಬಾಲರಾಮನಿಗೆ ಆರತಿ ಬೆಳಗಿ ಸಾಷ್ಟಾಂಗವೆರಗಿದ್ದು, ಹೊರಬಂದು ಪ್ರಾಂಗಣದಲ್ಲಿ ನೆರೆದಿದ್ದ ಸಾವಿರಾರು ಸಾಧು ಸಂತರಿಗೆ ನಮಿಸಿದ್ದು, ನಂತರ ತಮ್ಮ ಭಾಷಣದಲ್ಲಿ, ಜನವರಿ 22 ರಂದು ಕೇವಲ ಒಂದು ತಾರೀಖಲ್ಲ, ಭಾರತದಲ್ಲಿ ಒಂದು ನೂತನ ಕಾಲಚಕ್ರ ಉದಯಿಸಿದನ್ನು ಸೂಚಿಸುವ ದಿನವಾಗಿದೆ ಅಂತ ಹೇಳಿದ್ದು ಭಾರತೀಯರ ಮನದಲ್ಲಿ ಅಚ್ಚಳಿಯದೆ ಉಳಿಯಲಿದೆ. ಮಂದಿರ ನಿರ್ಮಾಣದ ಕೆಲಸಗಾರರ ಮೇಲೆ ಪ್ರಧಾನಿ ಮೋದಿ ಪುಷ್ಪವೃಷ್ಟಿ ಸುರಿಸಿ ಅಭಿನಂದಿಸಿದ್ದು ಹಿಂದೆ ಯಾವತ್ತೂ ಕಾಣದ ಒಂದು ದೃಶ್ಯ! ಸಾಧು ಸಂತರು ಈ ಪವಿತ್ರ ಸಂದರ್ಭದಲ್ಲಿ ಭಾವುಕರಾಗಿದ್ದು ಅವರಲ್ಲಿ ಮನೆಮಾಡಿದ ಕೃತಾರ್ಥತೆಯ ಪ್ರತೀಕಾವಾಗಿತ್ತು. ಸಚಿನ್ ತೆಂಡೂಲ್ಕರ್, ರಜಿನೀಕಾಂತ್, ಅಮಿತಾಬ್ ಬಚ್ಚನ್ ಮತ್ತು ಇನ್ನೂ ಅನೇಕ ಸೆಲೆಬ್ರಿಟಿಗಳು ಭಕ್ತಿಪರವಶರಾಗಿದ್ದರು ಮತ್ತು ಭಾವಪರವಶರಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 23, 2024 12:15 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More