ಗೂಗಲ್, ಯೂಟ್ಯೂಬ್ ನೋಡಿ ಕೊಲೆಗೆ ಪ್ಲಾನ್: ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸೆಪ್ಟೆಂಬರ್ 5ರಂದು ನಡೆದ ನಾಗರಾಜು ಕೊಲೆ ಪ್ರಕರಣದಲ್ಲಿ ಆರೋಪಿ ಆದಿನಾರಾಯಣನನ್ನು ಪತ್ತೆಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಕೊಲೆಗೆ ಎರಡು ವರ್ಷಗಳಿಂದ ಸಿದ್ಧತೆ ನಡೆಸಿ, ಗೂಗಲ್, ಯೂಟ್ಯೂಬ್ ಬಳಸಿ ತಂತ್ರಜ್ಞಾನದ ಬಗ್ಗೆ ಅಧ್ಯಯನ ಮಾಡಿದ್ದ ಆರೋಪಿ 12 ಸಿಮ್ಗಳನ್ನು ಬಳಸಿ ಪೊಲೀಸರಿಗೆ ಸವಾಲಾಗಿದ್ದಾನೆ.
ಚಿಕ್ಕಬಳ್ಳಾಪುರ, ಸೆ.12: ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಸೆಪ್ಟೆಂಬರ್ 5ರಂದು ಹಾಡಹಗಲೇ ನಡೆದ ಕಾರು ಚಾಲಕ ನಾಗರಾಜು ಬರ್ಬರ ಕೊಲೆ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಕೊಂಡಮ್ಮವಾರಪಲ್ಲಿ ರಸ್ತೆಯ ಬಾರ್ ಬಳಿ ಮದ್ಯಪಾನ ಮಾಡುತ್ತಿದ್ದ ನಾಗರಾಜ್ ಅವರನ್ನು ಹೆಲ್ಮೆಟ್ ಧರಿಸಿದ ದುಷ್ಕರ್ಮಿಯೊಬ್ಬ ಡ್ರ್ಯಾಗರ್ನಿಂದ ಇರಿದು ಕೊಲೆ ಮಾಡಿದ್ದ. ಈ ಘಟನೆ ನಡೆದು ಹಲವು ದಿನಗಳಾದರೂ ಪೊಲೀಸರಿಗೆ ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆರೋಪಿ ಮದುರೆಪಲ್ಲಿ ನಿವಾಸಿ ಆದಿನಾರಾಯಣ ಎಂದು ಗುರುತಿಸಲಾಗಿದ್ದು, ಆತನ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ನಾಗರಾಜು ಕೊಲೆಗೆ ಆರೋಪಿ ಎರಡು ವರ್ಷಗಳಿಂದಲೇ ಸಂಚು ರೂಪಿಸಿದ್ದ ಎನ್ನಲಾಗಿದೆ. ಗೂಗಲ್ ಮತ್ತು ಯೂಟ್ಯೂಬ್ನಲ್ಲಿ ಕೊಲೆ ಮತ್ತು ಅದರಿಂದ ತಪ್ಪಿಸಿಕೊಳ್ಳುವ ವಿಧಾನಗಳ ಕುರಿತು ಅಧ್ಯಯನ ನಡೆಸಿದ್ದ ಆದಿನಾರಾಯಣ, ತಾಂತ್ರಿಕ ಜ್ಞಾನವನ್ನು ಬಳಸಿಕೊಂಡು ಪೊಲೀಸರಿಗೆ ಸವಾಲಾಗಿದ್ದಾನೆ. ನಿರಂತರವಾಗಿ ಸಿಮ್ಗಳು ಮತ್ತು ಫೋನ್ಗಳನ್ನು ಬದಲಾಯಿಸುವ ಮೂಲಕ ಆತ ಪೊಲೀಸರಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದಾನೆ. ಬಾಗೇಪಲ್ಲಿ ಪೊಲೀಸರು ಮತ್ತು ಚಿಕ್ಕಬಳ್ಳಾಪುರ ಎಸ್ಪಿ ಕಚೇರಿಯ ತಾಂತ್ರಿಕ ತಂಡ ತೀವ್ರ ತನಿಖೆ ನಡೆಸುತ್ತಿದ್ದು, ಆರೋಪಿಯ ಬಂಧನಕ್ಕಾಗಿ ಶ್ರಮಿಸುತ್ತಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
