ದಾಂಡೇಲಿಯಲ್ಲಿ ಬ್ಯಾಂಕಿನೊಳಗೆ ಬಂದ ಹೊಸ ಗ್ರಾಹಕನನ್ನು ಕಂಡು ಸಿಬ್ಬಂದಿ ಮತ್ತು ಗ್ರಾಹಕರು ಹೊರಗೋಡಿದರು!

ಪುಣ್ಯಕ್ಕೆ ದಾಂಡೇಲಿಯಲ್ಲಿ ರಾಘವೇಂದ್ರ ನಾಯಕ್ ಹೆಸರಿನ ಉರಗ ತಜ್ಞರಿದ್ದಾರೆ. ಈ ವಿಡಿಯೋನಲ್ಲಿ ಹಾವು ಹಿಡಿದು ನಿಂತಿರುವವರು ಅವರೇ. ಅಲ್ಲಿದ್ದ ಜನರ ಪೈಕಿ ಯಾರಲ್ಲೋ ರಾಘವೇಂದ್ರ ಅವರ ಫೋನ್ ನಂಬರ್ ಇತ್ತು ಅನಿಸುತ್ತೆ. ಅವರು ಫೋನ್ ಮಾಡಿದಾಗ ಉರಗ ತಜ್ಞ ಸ್ಥಳಕ್ಕೆ ಧಾವಿಸಿದ್ದಾರೆ.

ದಾಂಡೇಲಿಯಲ್ಲಿ ಬ್ಯಾಂಕಿನೊಳಗೆ ಬಂದ ಹೊಸ ಗ್ರಾಹಕನನ್ನು ಕಂಡು ಸಿಬ್ಬಂದಿ ಮತ್ತು ಗ್ರಾಹಕರು ಹೊರಗೋಡಿದರು!
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:May 26, 2022 | 10:48 PM

Dandeli: ಬ್ಯಾಂಕ್ ಗಳಲ್ಲಿ ಕೇವಲ ನಮ್ಮಂಥ ಜನ ಮಾತ್ರ ಹೋಗುತ್ತಾರೆ ಅಂದ್ಕೋಬೇಡಿ ಮಾರಾಯ್ರೇ. ಇಲ್ಲಿ ನೋಡಿ. ದಾಂಡೇಲಿಯ ಅಂಬೇವಾಡಿಯಲ್ಲಿರುವ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋಆಪರೇಟಿವ್ ಬ್ಯಾಂಕಲ್ಲಿ ಈ ಹಾವು ಸಹ ಪ್ರವೇಶಿಸಿದೆ. ಬ್ಯಾಂಕಿನ ಹೊರಗಡೆ ನಿಂತಿದ್ದ ಸೆಕ್ಯುರಿಟಿ ಗಾರ್ಡ್ಗೆ ಈ ಹೊಸ ಗ್ರಾಹಕನನ್ನು ತಡೆಯುವುದು ಸಾಧ್ಯವಾಗಿಲ್ಲ. ಪ್ರಾಯಶಃ ಪಕ್ಕಕ್ಕೆ ಸರಿದು ದಾರಿಬಿಟ್ಟಿರಬಹುದು. ಆದರೆ ಅದು ಬ್ಯಾಂಕ್ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಒಳಗಿದ್ದಗ್ರಾಹಕರು ಮತ್ತು ಸಿಬ್ಬಂದಿ ಬಿದ್ದನೋ ಸತ್ತೆನೋ ಅಂತ ಹೊರಗೆ ಓಡಿಬಂದಿದ್ದಾರೆ! ಅವರೆಲ್ಲ ಹೊರಬಂದ ಬಳಿಕ ಗಾರ್ಡ್ ಹೊಸ ಗ್ರಾಹಕನೊಬ್ಬನನ್ನೇ ಬ್ಯಾಂಕಲ್ಲಿ ಬಿಟ್ಟು ಕಬ್ಬಿಣದ ಮೇನ್ ಗೇಟ್ ಮುಚ್ಚಿಬಿಟ್ಟಿದ್ದಾನೆ!!

ಪುಣ್ಯಕ್ಕೆ ದಾಂಡೇಲಿಯಲ್ಲಿ ರಾಘವೇಂದ್ರ ನಾಯಕ್ ಹೆಸರಿನ ಉರಗ ತಜ್ಞರಿದ್ದಾರೆ. ಈ ವಿಡಿಯೋನಲ್ಲಿ ಹಾವು ಹಿಡಿದು ನಿಂತಿರುವವರು ಅವರೇ. ಅಲ್ಲಿದ್ದ ಜನರ ಪೈಕಿ ಯಾರಲ್ಲೋ ರಾಘವೇಂದ್ರ ಅವರ ಫೋನ್ ನಂಬರ್ ಇತ್ತು ಅನಿಸುತ್ತೆ. ಅವರು ಫೋನ್ ಮಾಡಿದಾಗ ಉರಗ ತಜ್ಞ ಸ್ಥಳಕ್ಕೆ ಧಾವಿಸಿದ್ದಾರೆ. ಮಿಕ್ಕಿದನ್ನೆಲ್ಲ ನೀವು ವಿಡಿಯೋನಲ್ಲಿ ನೋಡಬಹುದು.

ರಾಘವೇಂದ್ರ ಅವರು ಕೇವಲ ಹಾವು ಹಿಡಿಯುವುದರಲ್ಲಿ ಮಾತ್ರ ನಿಷ್ಣಾತರಲ್ಲ, ಅವರಿಗೆ ಹಾವುಗಳ ಬಗ್ಗೆ ಬಹಳಷ್ಟು ಗೊತ್ತಿದೆ. ಅವರು ಕೈಯಲ್ಲಿರುವ ಆರಡಿ ಉದ್ದವಿರುವ ಹಾವು ಇಂಡಿಯನ್ ಱಟ್ ಸ್ನೇಕ್ ಪ್ರಜಾತಿಯದ್ದು ಮತ್ತು ಅದು ಅಷ್ಟು ವಿಷಕಾರಿ ಅಲ್ಲವೆಂದು ಹೇಳುತ್ತಾರೆ. ಅದು ಮೈಗೆ ಸುತ್ತಿಕೊಂಡು ಕಚ್ಚುತ್ತದೆ ಅಂತ ಹೇಳುವ ಅವರು, ಹೇಗೆ ಮೈಗೆ ಸುತ್ತಿಕೊಳ್ಳುತ್ತದೆ ಅನ್ನೋದನ್ನು ತೋರಿಸುತ್ತಾರೆ.

ಬ್ಯಾಂಕಿನ ಹೊರಗಡೆ ಭಯಭೀತರಾಗಿ ನಿಂತಿರುವ ಸಿಬ್ಬಂದಿ ಎದುರುಗಡೆ ಅವರು ಉರಗವನ್ನು ಒಂದು ಚೀಲದಲ್ಲಿ ಹಾಕಿಕೊಂಡು ಸುರಕ್ಷಿತ ಸ್ಥಳಕ್ಕೆ ಒಯ್ಯುತ್ತಾರೆ. ಜನ ನೆಮ್ಮದಿಯ ನಿಟ್ಟಿಸಿರಾಗುತ್ತಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:23 pm, Thu, 26 May 22

Follow us