ಕೆಸರು ಗದ್ದೆಯಾದ ಬೆಳಗಾವಿ-ಗೋವಾ ಹೆದ್ದಾರಿ: ನಡುರಸ್ತೆಯಲ್ಲೇ ಸಿಲುಕಿಕೊಂಡ ಕೆಎಸ್‌ಆರ್‌ಟಿಸಿ ಬಸ್

Edited By:

Updated on: Jul 01, 2026 | 10:06 AM

ಮುಖ್ಯಾಂಶಗಳು

  • ಬೆಳಗಾವಿ-ಗೋವಾ ಹೆದ್ದಾರಿಯು ಸಂಪೂರ್ಣವಾಗಿ ಕೆಸರು ಗದ್ದೆ
  • ರಸ್ತೆಯ ಈ ದುಸ್ಥಿತಿಯಿಂದಾಗಿ ನಡುರಸ್ತೆಯಲ್ಲೇ ನಿಂತ ಕೆಎಸ್‌ಆರ್‌ಟಿಸಿ
  • ಪ್ರಯಾಣಿಕರು ಸುರಿಯುವ ಮಳೆಯಲ್ಲೇ ರಸ್ತೆಬದಿಯಲ್ಲಿ ನಿಂತು ತೀವ್ರ ತೊಂದರೆ

ಸತತ ಮಳೆಯಿಂದಾಗಿ ಬೆಳಗಾವಿ-ಗೋವಾ ಹೆದ್ದಾರಿ ಕೆಸರುಮಯವಾಗಿದೆ. ಖಾನಾಪುರದ ವರಕಡ ಬಳಿ ಕೆಎಸ್‌ಆರ್‌ಟಿಸಿ ಬಸ್ ಕೆಸರಿನಲ್ಲಿ ಸಿಲುಕಿ, ಪ್ರಯಾಣಿಕರು ಪರದಾಡಿದರು. ಎರಡು ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡು, ಸ್ಥಳೀಯರ ಸಹಾಯದಿಂದ ಬಸ್ ಹೊರತೆಗೆಯಲಾಯಿತು. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ರಸ್ತೆ ದುರಸ್ತಿಪಡಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ, ಜು.1: ಸತತವಾಗಿ ಸುರಿಯುತ್ತಿರುವ ಮಳೆಯ ಬೆನ್ನಲ್ಲೇ ಎರಡು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿ-ಗೋವಾ ಹೆದ್ದಾರಿಯು ಸಂಪೂರ್ಣವಾಗಿ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ರಸ್ತೆಯ ಈ ದುಸ್ಥಿತಿಯಿಂದಾಗಿ ನಡುರಸ್ತೆಯಲ್ಲೇ ಕೆಎಸ್‌ಆರ್‌ಟಿಸಿ (KSRTC) ಬಸ್ಸೊಂದು ಕೆಸರಿನಲ್ಲಿ ಸಿಲುಕಿಕೊಂಡಿದ್ದು, ಪ್ರಯಾಣಿಕರು ತೀವ್ರವಾಗಿ ಪರದಾಡಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ವರಕಡ ಗ್ರಾಮದ ಬಳಿ ನಡೆದಿದೆ. ಬೆಳಗಾವಿಯಿಂದ ಗೋವಾ ಕಡೆಗೆ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ವರಕಡ ಗ್ರಾಮದ ಬಳಿ ಬರುತ್ತಿದ್ದಂತೆ, ರಸ್ತೆಯಲ್ಲಿದ್ದ ಭಾರಿ ಪ್ರಮಾಣದ ಕೆಸರಿನ ಹೂಳಿನಲ್ಲಿ ಸಿಲುಕಿಕೊಂಡಿದೆ. ಬಸ್‌ನ ಚಕ್ರಗಳು ಕೆಸರಿನಲ್ಲಿ ಹೂತುಹೋಗಿ ಮುಂದೆ ಚಲಿಸಲಾಗದೆ ನಡುರಸ್ತೆಯಲ್ಲೇ ನಿಂತಿದೆ. ಬಸ್ ಅನ್ನು ಕೆಸರಿನಿಂದ ಹೊರತೆಗೆಯಲು ಚಾಲಕ ಸತತ ಪ್ರಯತ್ನ ನಡೆಸಿದರೂ ಸಾಧ್ಯವಾಗದ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ಹೆದ್ದಾರಿಯ ನಡುಭಾಗದಲ್ಲೇ ಬಸ್ ಸಿಲುಕಿಕೊಂಡಿದ್ದರಿಂದ ಎರಡು ರಾಜ್ಯಗಳ ನಡುವಿನ ವಾಹನ ಸಂಚಾರ ಸಂಪೂರ್ಣವಾಗಿ ಕಡಿತಗೊಂಡು ಅಸ್ತವ್ಯಸ್ತವಾಗಿತ್ತು. ಸ್ಥಳೀಯರು ಹಾಗೂ ಇತರ ವಾಹನ ಸವಾರರ ಸಹಾಯದೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ, ಕೊನೆಗೂ ಬಸ್ ಅನ್ನು ಕೆಸರಿನಿಂದ ಹೊರಕ್ಕೆ ಎಳೆಯಲಾಯಿತು. ಅಲ್ಲಿಯವರೆಗೆ ಪ್ರಯಾಣಿಕರು ಸುರಿಯುವ ಮಳೆಯಲ್ಲೇ ರಸ್ತೆಬದಿಯಲ್ಲಿ ನಿಂತು ತೀವ್ರ ತೊಂದರೆ ಅನುಭವಿಸಿದರು. ಈ ಹೆದ್ದಾರಿಯಲ್ಲಿ ಪ್ರತಿದಿನ ಸಾವಿರಾರು ಲಘು ಹಾಗೂ ಭಾರಿ ವಾಹನಗಳು ಸಂಚರಿಸುತ್ತವೆ. ಗೋವಾ ಮತ್ತು ಕರ್ನಾಟಕದ ನಡುವಿನ ಪ್ರಮುಖ ವಾಣಿಜ್ಯ ರಸ್ತೆಯಾಗಿದ್ದರೂ, ಇದರ ಅಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಈ ರಸ್ತೆಯನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದಿದ್ದರೆ, ಮುಂದಿನ ದಿನಗಳಲ್ಲಿ ಹೆದ್ದಾರಿ ತಡೆದು ಉಗ್ರ ಹೋರಾಟ ಮಾಡುವುದಾಗಿ ಖಾನಾಪುರ ಮತ್ತು ವರಕಡ ಗ್ರಾಮದ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us