25 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಕೈಗೆ ರೆಡ್ ಹ್ಯಾಂಡ್ ಸಿಕ್ಕಿದ್ದ ಅಬಕಾರಿ ಉಪ ಆಯುಕ್ತ

Updated on: Jan 17, 2026 | 5:18 PM

ಬೆಂಗಳೂರಿನಲ್ಲಿ ಲೋಕಾಯುಕ್ತ ಪೊಲೀಸರು ಅಬಕಾರಿ ಉಪ ಆಯುಕ್ತ ಜಗದೀಶ್ ನಾಯಕ್ ಅವರನ್ನು 25 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಮೈಕ್ರೋ ಬ್ರಿವರಿ ಮತ್ತು ಸಿಎಲ್ 7 ಪರವಾನಗಿಗಳಿಗಾಗಿ ಒಟ್ಟು 75 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಸೂಪರಿಂಟೆಂಡೆಂಟ್ ತಮ್ಮಣ್ಣ ಹಾಗೂ ಕಾನ್ಸ್ಟೇಬಲ್ ಲಕ್ಕಪ್ಪ ಕೂಡ ಸೆರೆಯಾಗಿದ್ದಾರೆ.

ಬೆಂಗಳೂರು, ಜ.17: ಲೋಕಾಯುಕ್ತ ಪೊಲೀಸರು ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಅಬಕಾರಿ ಉಪ ಆಯುಕ್ತ (ಡಿಸಿ) ಜಗದೀಶ್ ನಾಯಕ್ ಅವರನ್ನು ಬಂಧಿಸಿದ್ದಾರೆ. ಮೈಕ್ರೋ ಬ್ರಿವರಿ ಮತ್ತು ಸಿಎಲ್ 7 ಪರವಾನಗಿಗಳಿಗಾಗಿ 75 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಅವರ ಮೇಲಿತ್ತು. ಮೊದಲ ಕಂತಿನ 25 ಲಕ್ಷ ರೂಪಾಯಿ ಲಂಚವನ್ನು ಸ್ವೀಕರಿಸುತ್ತಿದ್ದಾಗ ಬ್ಯಾಟರಾಯನಪುರದ ಅಬಕಾರಿ ಕಚೇರಿಯಲ್ಲಿ ಜಗದೀಶ್ ನಾಯಕ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ಈ ಪ್ರಕರಣದಲ್ಲಿ ಜಗದೀಶ್ ನಾಯಕ್ ಜೊತೆಗೆ ಅಧೀಕ್ಷಕ ತಮ್ಮಣ್ಣ ಮತ್ತು ಅಬಕಾರಿ ಇಲಾಖೆಯ ಕಾನ್ಸ್ಟೇಬಲ್ ಲಕ್ಕಪ್ಪ ಅವರನ್ನೂ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ದೂರುದಾರರು ಲಕ್ಷ್ಮೀನಾರಾಯಣ ನೀಡಿದ ಮಾಹಿತಿ ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನೂ ವಶಕ್ಕೆ ಪಡೆದಿದ್ದಾರೆ. ಲಂಚದ ಹಣದ ಸಮೇತ ಕಾನ್ಸ್ಟೇಬಲ್ ಲಕ್ಕಪ್ಪನನ್ನು ಕರೆದುಕೊಂಡು ಹೋಗಿದ್ದಾರೆ. ಲಕ್ಷ್ಮೀನಾರಾಯಣ ಅವರ ಪ್ರಕಾರ, ಮೈಕ್ರೋ ಬ್ರಿವರಿ ಮತ್ತು ಸಿಎಲ್ 7 ಪರವಾನಗಿಗಳಿಗಾಗಿ ಆರಂಭದಲ್ಲಿ 80 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ನಂತರ ಈ ಮೊತ್ತವನ್ನು 2.25 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿತ್ತು. ಕೊನೆಗೆ 50 ಲಕ್ಷ ರೂಪಾಯಿಗೆ ಬಂದು ನಿಂತಿದ್ದು, ಮೊದಲ ಕಂತಿನ 25 ಲಕ್ಷ ರೂಪಾಯಿ ಹಣವನ್ನು ನೀಡುವಂತೆ ಒತ್ತಾಯಿಸಲಾಗಿತ್ತು. ಈ ಹಣವನ್ನು ಹೊಂದಿಸಲು ತಾನು ಸ್ನೇಹಿತರಿಂದ ಸಾಲ ಪಡೆದಿದೆ ಎಂದು ಹೇಳಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಲಂಚ ನೀಡದೆ ಯಾವುದೇ ಕೆಲಸ ಆಗುವುದಿಲ್ಲ ಎಂದು ಅಧಿಕಾರಿಗಳು ನೇರವಾಗಿ ಹೇಳುತ್ತಿದ್ದರು ಎಂದು ದೂರುದಾರರು ಹೇಳಿದ್ದಾರೆ.

ವರದಿ: ಪ್ರದೀಪ್ 

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 17, 2026 05:17 PM