ತಮಿಳುನಾಡಿನ ದೇವಸ್ಥಾನವೊಂದರಲ್ಲಿ ಕೆಂಡಹಾಯುವಾಗ ಬಾಲಕನಬೊಬ್ಬ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.
ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಅರಂಬಾಕ್ಕಂ ಬಳಿ ಭಾನುವಾರ ದೇವಸ್ಥಾನದ ಉತ್ಸವದ ಅಂಗವಾಗಿ ನಡೆದ ಅಗ್ನಿಹೋತ್ರ ಆಚರಣೆ ವೇಳೆ 7 ವರ್ಷದ ಬಾಲಕ ಕೆಂಡದ ಮೇಲೆ ಬಿದ್ದು ಸುಟ್ಟ ಗಾಯಗಳಾಗಿವೆ.
ದೇವಸ್ಥಾನದ ವಾರ್ಷಿಕ ಆದಿ ಉತ್ಸವದ ಅಂಗವಾಗಿ ಕಟ್ಟುಕೊಳ್ಳೈಮೇಡು ಗ್ರಾಮದ ಮಾರಿಯಮ್ಮನ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ.
ಗ್ರಾಮದಲ್ಲಿ 100ಕ್ಕೂ ಹೆಚ್ಚು ಭಕ್ತರು ಉರಿಯುತ್ತಿದ್ದ ಕೆಂಡದ ಮೇಲೆ ಓಡುವ ಮೂಲಕ ಉತ್ಸವವನ್ನು ಆಚರಿಸಿದರು.
ಎಲ್ಲರೂ ಕೆಂಡದ ಮೇಲೆ ಒಬ್ಬರ ಹಿಂದೆ ಒಬ್ಬರು ದಾಟಿದರು, ಆದರೆ 7 ವರ್ಷದ ಮೋನಿಶ್ನ ಸರದಿ ಬರುತ್ತಿದ್ದಂತೆ, ಅವನು ಮುಂದೆ ಹೋಗಲು ಹಿಂಜರಿದನು. ಆದರೆ ಬಾಲಕನಿಗೆ ಹೋಗುವಂತೆ ಎಲ್ಲರೂ ಮನವೊಲಿಸಿದರು.
ಹುಡುಗ ಇನ್ನೂ ಹಿಂಜರಿಯುತ್ತಿದ್ದಂತೆ, ಆತನ ಹಿಂದೆ ಇದ್ದವರು ಅವನ ಕೈಯನ್ನು ಹಿಡಿದು ಅವನೊಂದಿಗೆ ಓಡಲು ಶುರುಮಾಡಿದರು. ತಕ್ಷಣವೇ ಇಬ್ಬರೂ ಕೆಂಡದ ಮೇಲೆ ಬಿದ್ದಿದ್ದಾರೆ. ಅಲ್ಲಿದ್ದವರು ಓಡಿ ಬಂದು ಅವರನ್ನು ಮೇಲಕ್ಕೆತ್ತಿದ್ದಾರೆ. ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ