ಚಿತ್ರದುರ್ಗ: 7-8 ಕಿ.ಮೀ ನಡಿಗೆ, ಚಿರತೆ-ಕರಡಿಗಳ ಭಯ; ಬಸ್‌ಗಾಗಿ ಬೇಡಿಕೆಯಿಟ್ಟ 140 ವಿದ್ಯಾರ್ಥಿಗಳು

Edited By:

Updated on: Sep 16, 2026 | 12:47 PM

ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ತೇಕಲವಟ್ಟಿ ಗ್ರಾಮದ ಶಾಲಾ ಮಕ್ಕಳು ಸಾರಿಗೆ ವ್ಯವಸ್ಥೆ ಇಲ್ಲದೆ ಪ್ರತಿದಿನ 7-8 ಕಿ.ಮೀ. ನಡೆಯುವ ದುಸ್ಥಿತಿಯಲ್ಲಿದ್ದಾರೆ. ಕಾಡು ಪ್ರಾಣಿಗಳು, ಹಾವು-ಚೇಳುಗಳ ಭೀತಿಯ ಜೊತೆಗೆ ಹೆಣ್ಣು ಮಕ್ಕಳ ಸುರಕ್ಷತೆಯೂ ಪ್ರಶ್ನಾರ್ಥಕವಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಪೋಷಕರ ಆತಂಕ ಹೆಚ್ಚಿದೆ.

ಚಿತ್ರದುರ್ಗ, ಸೆ.16: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತೇಕಲವಟ್ಟಿ ಗ್ರಾಮದ ಬಳಿಯ ಸರ್ಕಾರಿ ಪ್ರೌಢಶಾಲೆಗೆ ಸುತ್ತಮುತ್ತಲಿನ ಒಂಬತ್ತು ಹಳ್ಳಿಗಳಿಂದ ಸುಮಾರು 140 ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಲಭ್ಯವಿದ್ದರೂ, ಸಮರ್ಪಕ ಸಾರಿಗೆ ವ್ಯವಸ್ಥೆಯ ಕೊರತೆಯಿಂದಾಗಿ ಮಕ್ಕಳು ಪ್ರತಿದಿನ 7-8 ಕಿಲೋಮೀಟರ್ ದೂರ ನಡೆದುಕೊಂಡೇ ಶಾಲೆಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಏಕೈಕ ಬಸ್ ಸಹ ಶಾಲಾ ಸಮಯಕ್ಕೆ ಬರುವುದಿಲ್ಲ. ಸಂಜೆ ಮನೆಗೆ ಮರಳುವಾಗ ಕತ್ತಲಾಗಿದ್ದು, ಕಾಡುಪ್ರಾಣಿಗಳಾದ ಚಿರತೆ, ಕರಡಿ ಹಾಗೂ ಹಾವು-ಚೇಳುಗಳ ಭೀತಿ ಮಕ್ಕಳನ್ನು ಕಾಡುತ್ತಿದೆ. ವಿಶೇಷವಾಗಿ ಪ್ರೌಢಾವಸ್ಥೆಯ ವಿದ್ಯಾರ್ಥಿನಿಯರ ಸುರಕ್ಷತೆ ಬಗ್ಗೆ ಪೋಷಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಪೋಷಕರು ತಮ್ಮ ಮಕ್ಕಳ ಸುರಕ್ಷತೆಗಾಗಿ ಪ್ರತಿದಿನವೂ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ಹೊಳಲ್ಕೆರೆ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಸಹಾಯಕರಾದ ಪೋಷಕರು ಮತ್ತು ವಿದ್ಯಾರ್ಥಿಗಳು ಬಸ್ ತಡೆ, ರಸ್ತೆ ತಡೆ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಮಕ್ಕಳ ಶಿಕ್ಷಣ ಹಾಗೂ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 16, 2026 12:16 PM
Loading...
Unable to load recommendations.
Follow Us