ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯಮಾಡಲು ಪೊಲೀಸರಿಗೆ ಕರೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Updated on: Jan 16, 2024 | 7:12 PM

ಪೊಲೀಸ್ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪೊಲೀಸ್ ಸಿಬ್ಬಂದಿಗೆ ಒಂದೊಂದು ಬೆಳ್ಳಿ ಪದಕ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ಹಾಗೆಯೇ, ಪೊಲೀಸರಿಗೆ ಇದುವರೆಗೆ ಪ್ರತಿತಿಂಗಳು ನೀಡುತ್ತಿದ್ದ ರೂ. 1,000 ಆರೋಗ್ಯ ತಪಾಸಣೆ ಭತ್ಯೆಯನ್ನು ರೂ. 1,500 ಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.

ಬೆಂಗಳೂರು: ನಗರದ ಪೊಲೀಸ್ ಮಹಾನಿರ್ದೇಶಕ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪೊಲೀಸ್ ಇಲಾಖೆಗೆ ಸಂತಸ ನೀಡಬಹುದಾದ ಕೆಲ ಘೋಷಣೆಗಳನ್ನು ಮಾಡಿದರು. ರಾಜ್ಯ ಪೊಲೀಸ್ ಇಲಾಖೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಒಂದು ಪೊಲೀಸ್ ಭವನ (Police Bhavan) ನಿರ್ಮಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹೇಳಿದರಾದರೂ ಅದನ್ನು ಎಲ್ಲಿ ಕಟ್ಟಲಾಗುತ್ತದೆ ಅನ್ನೋದನ್ನು ಬಹಿರಂಗಗೊಳಿಸಲಿಲ್ಲ. ಪೊಲೀಸ್ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪೊಲೀಸ್ ಸಿಬ್ಬಂದಿಗೆ ಒಂದೊಂದು ಬೆಳ್ಳಿ ಪದಕ (Silver Coin) ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ಹಾಗೆಯೇ, ಪೊಲೀಸರಿಗೆ ಇದುವರೆಗೆ ಪ್ರತಿತಿಂಗಳು ನೀಡುತ್ತಿದ್ದ ರೂ. 1,000 ಆರೋಗ್ಯ ತಪಾಸಣೆ ಭತ್ಯೆಯನ್ನು ರೂ. 1,500 ಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚಿತ್ತಿದ್ದು ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡಲು ಪಣತೊಡುವಂತೆ ಪೊಲೀಸರಿಗೆ ಮುಖ್ಯಮಂತ್ರಿ ಕರೆನೀಡಿದರು. ಡ್ರಗ್ಸ್ ನಿಂದ ನಮ್ಮ ಯುವ ಜನಾಂಗ ಹಾದಿ ತಪ್ಪುತ್ತಿದೆ, ಮಾದಕವಸ್ತುಗಳ ವ್ಯಸನಿಯಾಗುವವರು ಅದರಿಂದ ಹೊರಬರಲಾಗದೆ ಒದ್ದಾಡುತ್ತಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ, ಪೀಡೆಯನ್ನು ತೊಡೆದು ಹಾಕಲೇಬೇಕೆಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us