ಕೋವಿಡ್-19 ಮೂರನೇ ಅಲೆ ವಿರುದ್ಧ ಮಕ್ಕಳನ್ನು ರಕ್ಷಿಸಲು ಸರ್ಕಾರಗಳು ಮಾಡಿಕೊಂಡಿರುವ ಏರ್ಪಾಟುಗಳು ಯಾವುದಕ್ಕೂ ಸಾಲದು: ವರದಿ

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Aug 24, 2021 | 4:09 PM

ಇದುವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿಕೊಂಡಿರುವ ಏರ್ಪಾಟುಗಳು ಏನೇನೂ ಅಲ್ಲ, ಈ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡುವುದರ ಜೊತೆಗೆ ಲಸಿಕೆ ನೀಡುವ ವೇಗವನ್ನು ಹತ್ತಾರು ಪಟ್ಟು ಹೆಚ್ಚಿಸಬೇಕೆಂದು ವರದಿಯಲ್ಲಿ ಹೇಳಲಾಗಿದೆ.

ಕೋವಿಡ್-19 ಮೂರನೇ ಅಲೆ ಕುರಿತು ನಮಗಿದ್ದ ಭೀತಿ ನಿಜವಾಗುವ ದಿನಗಳು ಹತ್ತಿರದಲ್ಲಿವೆ. ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕೇಂದ್ರ (ಎನ್ಐಡಿಎಮ್) ರಚಿಸಿದ ತಜ್ಞರ ಸಮಿತಿ ಮೂರನೇ ಅಲೆ ಬಗ್ಗೆ ವರದಿಯೊಂದನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯ ತಲುಪಿಸಿದ್ದು ಕೆಲ ಅಘಾತಕಾರಿ ಸಂಗತಿಗಳು ಅದರಲ್ಲಿವೆ. ಸೆಪ್ಟೆಂಬರ್ ಅಂತ್ಯ ಮತ್ತು ಅಕ್ಟೋಬರ್ ಮೊದಲ ವಾರದಲ್ಲಿ ಕೋವಿಡ್ ಮೂರನೇ ಅಲೆ ಇಡೀ ಭಾರತವನ್ನು ಅಪ್ಪಳಿಸಲಿದೆ ಎಂದು ತಜ್ಞರ ಸಮಿತಿ ಎಚ್ಚರಿದೆ. ಈ ಹಿನ್ನೆಲೆಯಲ್ಲಿ ಲಸಿಕಾ ಅಭಿಯಾನವನ್ನು ತೀವ್ರಗೊಳಿಸುವಂತೆ ಸರ್ಕಾರಕ್ಕೆ ತಿಳಿಸಲಾಗಿದೆ.

ಮೂರನೇ ಅಲೆ ಅಪ್ಪಳಿಸಿದಾಗ ವಯಸ್ಕರ ಹಾಗೆ ಚಿಕ್ಕ ಮಕ್ಕಳೂ ಸಹ ಅಪಾಯಕ್ಕೆ ಸಿಲುಕಲಿದ್ದಾರೆ ಅಂತ ಸಮಿತಿಯು ಎಚ್ಚರಿಸಿದೆ. ಮಕ್ಕಳಿಗೆ ಚಿಕಿತ್ಸೆ ಒದಗಿಸಲು ಸೂಕ್ತ ಏರ್ಪಾಟುಗಳು ಅಂದರೆ ಹೆಚ್ಚಿನ ಸಂಖ್ಯೆಯ ವೈದ್ಯರು, ವೆಂಟಿಲೇಟರ್ಗಳು, ಅಂಬ್ಯುಲೆನ್ಸ್ ಮೊದಲಾದವುಗಳ ವ್ಯವಸ್ಥೆ ಇನ್ನೂ ಅಗಿಲ್ಲದಿರುವುದು ಮಕ್ಕಳನ್ನು ಅಪಾಯದ ಅಂಚಿಗೆ ನೂಕಿದಂತಾಗಿದೆ ಎಂದು ಸಮಿತಿ ಹೇಳಿದೆ.

ಇದುವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿಕೊಂಡಿರುವ ಏರ್ಪಾಟುಗಳು ಏನೇನೂ ಅಲ್ಲ, ಈ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡುವುದರ ಜೊತೆಗೆ ಲಸಿಕೆ ನೀಡುವ ವೇಗವನ್ನು ಹತ್ತಾರು ಪಟ್ಟು ಹೆಚ್ಚಿಸಬೇಕೆಂದು ವರದಿಯಲ್ಲಿ ಹೇಳಲಾಗಿದೆ.

ಪ್ರಧಾನ ಮಂತ್ರಿಗಳ ಕಚೇರಿ ತಲುಪಿರುವ ವರದಿಯ ಪ್ರಕಾರ ಇದುವರೆಗೆ ಕೇವಲ ಶೇಕಡಾ 7 ರಷ್ಟು ಭಾರತೀಯರು ಮಾತ್ರ (ಸುಮಾರು ಹತ್ತೂವರೆ ಕೋಟಿ ಜನ) ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದಿದ್ದಾರೆ. ಅಂದರೆ ಇನ್ನೂ 125 ಕೋಟಿ ಜನ ಲಸಿಕೆ ಪಡೆಯಬೇಕಿದೆ. 12-18 ವಯೋಮಾನದ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಕೂಡಲೇ ಪ್ರಾರಂಭಿಸಬೇಕು ಎಂದು ತಜ್ಞರ ಸಮಿತಿ ಹೇಳಿದೆ.

ಇದನ್ನೂ ಓದಿ: ಹೆದ್ದಾರಿಯ ಮೇಲೆ ಮಹಿಂದ್ರ ಅವರ XUV500 ಮಾತ್ರ ಹುಲಿಯಲ್ಲ, ಎರಡೆರಡು ನೈಜ ಹುಲಿಗಳೂ ಅಲ್ಲಿವೆ! ವಿಡಿಯೋ ನೋಡಿ

Loading...
Unable to load recommendations.
Follow Us