ಟೋಲ್ ಕಟ್ಟಲ್ಲ ಅಂದ್ರೆ ಒನ್ ವೇ ನಲ್ಲಿ ನುಗ್ತೀರಾ?: ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ

Edited By:

Updated on: Jun 22, 2026 | 10:35 AM

ದಕ್ಷಿಣ ಕನ್ನಡದ ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರು ಭೀಕರ ಗೂಂಡಾಗಿರಿ ನಡೆಸಿದ್ದಾರೆ. ಟೋಲ್ ಶುಲ್ಕ ಪಾವತಿಸಲು ನಿರಾಕರಿಸಿ, ವಾಹನಗಳನ್ನು ಏಕಮುಖ ಮಾರ್ಗದಲ್ಲಿ ನುಗ್ಗಿಸಿ ಬ್ಯಾರಿಯರ್‌ಗಳನ್ನು ಧ್ವಂಸಗೊಳಿಸಿದ್ದಾರೆ. ಟೋಲ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಕಾರ್ಯಕರ್ತರು, ಟೋಲ್ ಗೇಟ್‌ಗೆ ಹಾನಿ ಮಾಡಿ ಪರಾರಿಯಾಗಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಂಗಳೂರು, ಜೂ.22: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಟೋಲ್ ಗೇಟ್‌ನಲ್ಲಿ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಭೀಕರ ಗೂಂಡಾಗಿರಿ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಟೋಲ್ ಪಾವತಿಸುವುದನ್ನು ತಪ್ಪಿಸಲು ನಿಯಮ ಉಲ್ಲಂಘಿಸಿ ಏಕಮುಖ ಸಂಚಾರ (One-Way) ಮಾರ್ಗದಲ್ಲಿ ನುಗ್ಗಿದ ವಾಹನಗಳು, ಟೋಲ್ ಬ್ಯಾರಿಯರ್‌ಗಳನ್ನು ಧ್ವಂಸಗೊಳಿಸಿದೆ. ಸಿಪಿಐಎಂ (CPIM) ಪಕ್ಷದ ಕಾರ್ಯಕರ್ತರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಬ್ರಹ್ಮರಕೂಟ್ಲು ಟೋಲ್ ಗೇಟ್‌ಗೆ ಆಗಮಿಸಿದೆ. ಈ ವೇಳೆ ಟೋಲ್ ಸಿಬ್ಬಂದಿ ವಾಹನವನ್ನು ತಡೆದು ಶುಲ್ಕ ಪಾವತಿಸುವಂತೆ ಸೂಚಿಸಿದ್ದಾರೆ. ಆದರೆ ಟೋಲ್ ನೀಡಲು ನಿರಾಕರಿಸಿದ ಬಸ್ ಚಾಲಕ ಮತ್ತು ಒಳಗಿದ್ದ ಸಿಪಿಐಎಂ ಕಾರ್ಯಕರ್ತರು ದರ್ಪ ತೋರಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಬಸ್ ಅನ್ನು ವೇಗವಾಗಿ ಚಲಾಯಿಸಿ ಟೋಲ್ ಗೇಟ್‌ನ ಸುರಕ್ಷತಾ ಬೂಮ್ ಬ್ಯಾರಿಯರ್ ಅನ್ನು (Boom Barrier) ಸಂಪೂರ್ಣವಾಗಿ ಜಖಂ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಕೇವಲ ಬಸ್ ಮಾತ್ರವಲ್ಲದೆ ಸಿಪಿಐಎಂ ಕಾರ್ಯಕರ್ತರಿದ್ದ ಇನ್ನೂ ಹಲವು ವಾಹನಗಳು ಇದೇ ರೀತಿ ಟೋಲ್ ಗೇಟ್‌ಗೆ ಡಿಕ್ಕಿ ಹೊಡೆದು ಉದ್ಧಟತನ ಪ್ರದರ್ಶಿಸಿವೆ. ಟೋಲ್ ಸಿಬ್ಬಂದಿಯ ಜತೆ ಗಲಾಟೆ ಮಾಡಿಕೊಂಡ ಇವರು, ಒನ್ ವೇ ನಲ್ಲಿ ವಾಹನಗಳನ್ನು ನುಗ್ಗಿಸಿ ದಾಂಧಲೆ ಎಬ್ಬಿಸಿದ್ದಾರೆ. ಇಡೀ ಘಟನೆಯ ದೃಶ್ಯಾವಳಿಗಳು ಟೋಲ್ ಗೇಟ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us