ದಾಂಡೇಲಿ: ಶೌಚಕ್ಕೆ ಕುಳಿತಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ; ಸ್ಥಳೀಯರ ಸಮಯಪ್ರಜ್ಞೆಯಿಂದ ಬಚಾವ್!

Edited By:

Updated on: May 03, 2026 | 12:00 PM

ಉತ್ತರ ಕನ್ನಡದ ದಾಂಡೇಲಿಯಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಇಲ್ಲದ ಕಾರಣ ನದಿ ದಡಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಮೊಸಳೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಳಿ ನದಿ ತೀರದಲ್ಲಿ ನಡೆದ ಈ ಘಟನೆ ಸ್ಥಳೀಯ ಆಡಳಿತದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಗ್ರಾಮಸ್ಥರು ಶೌಚಾಲಯಗಳ ಸುಧಾರಣೆಗೆ ಆಗ್ರಹಿಸಿದ್ದು, ಇಂತಹ ದುರಂತಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಒತ್ತಾಯಿಸಿದ್ದಾರೆ.

ದಾಂಡೇಲಿ, ಮೇ.3: ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಇಲ್ಲದ ಕಾರಣ ನದಿ ದಡಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಮೊಸಳೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಕುಳಗಿ ರಸ್ತೆಯಲ್ಲಿ ನಡೆದಿದೆ. ಕುಳಗಿ ನಿವಾಸಿ ಆನಂದ ಮಣ್ಣವಡ್ಡರ (42) ಎಂಬುವವರೇ ಮೊಸಳೆ ದಾಳಿಗೆ ಒಳಗಾದ ದುರ್ದೈವಿ. ಕುಳಗಿ ರಸ್ತೆಯ ಕಾಳಿ ನದಿ ದಡದಲ್ಲಿ ಆನಂದ ಅವರು ಶೌಚಕ್ಕೆಂದು ಕುಳಿತಿದ್ದಾಗ ಏಕಾಏಕಿ ನದಿಯಿಂದ ಬಂದ ಮೊಸಳೆ ಅವರ ಮೇಲೆರಗಿದೆ. ದಾಳಿಯಿಂದ ಕಂಗಾಲಾದ ಆನಂದ ಅವರು ಜೋರಾಗಿ ಕೂಗಾಡಿದ್ದಾರೆ. ಅವರ ಕಿರುಚಾಟ ಕೇಳಿ ಸ್ಥಳೀಯರು ಕೂಡಲೇ ಧಾವಿಸಿ ಬಂದು ಮೊಸಳೆಯನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಆನಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರಾದರೂ, ಅವರ ದೇಹದ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಅವರನ್ನು ದಾಂಡೇಲಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಭಾಗದಲ್ಲಿರುವ ಸಾರ್ವಜನಿಕ ಶೌಚಾಲಯಗಳು ಸಮರ್ಪಕವಾಗಿ ನಿರ್ವಹಣೆ ಆಗದ ಕಾರಣ ಅನಿವಾರ್ಯವಾಗಿ ಜನರು ನದಿ ತೀರಕ್ಕೆ ಹೋಗುತ್ತಿದ್ದಾರೆ. ಸ್ಥಳೀಯ ಆಡಳಿತದ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: May 03, 2026 11:58 AM
Follow Us