ಮಂಗಳೂರು-ಮೂಡಬಿದರೆ ರಸ್ತೆಯಲ್ಲಿ ಗುಡ್ಡಕುಸಿತವುಂಟಾಗುವ ಭೀತಿ, ರಸ್ತೆ ಕಾಮಗಾರಿಗಾಗಿ ಗುಡ್ಡ ಅಗೆದಿದ್ದು ಶಾಪವಾಯಿತೇ?

|

Updated on: Jul 05, 2024 | 12:10 PM

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಮಳೆಗಾಲದಲ್ಲೂ ಗುಡ್ಡ ಕುಸಿತದ ಭೀತಿ ಸೃಷ್ಟಿಯಾಗುತ್ತದೆ. ಸುರಿಯುವ ಮಳೆ ಒಂದು ಕಾರಣವಾದರೆ ಮಾನವ ನಿರ್ಮಿತ ದುಸ್ಸಾಹಸ ಮತ್ತೊಂದು ಕಾರಣವಾಗುತ್ತದೆ. ನಿಸರ್ಗದ ಜೊತೆ ನಾವು ಚೆಲ್ಲಾಟವಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಗುಡ್ಡಗಳನ್ನು ಅಗೆಯುವುದು ದುಸ್ಸಾಹಸವಲ್ಲದೆ ಮತ್ತೇನೂ ಅಲ್ಲ.

ಮಂಗಳೂರು: ಉಡುಪಿ ಜಿಲ್ಲೆಯ ಹಾಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಸತತ ಮಳೆಯಿಂದಾಗಿ ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕೆತ್ತಿಕಲ್ ಎಂಬಲ್ಲಿ ಗುಡ್ಡಕುಸಿತದ ಆತಂಕ ಸೃಷ್ಟಿಯಾಗಿದೆ. ನಮ್ಮ ಮಂಗಳೂರು ವರದಿಗಾರ ಕೆತ್ತಿಕಲ್ ಸ್ಥಳಕ್ಕೆ ಹೋಗಿ ಈ ವರದಿಯನ್ನು ಕಳಿಸಿದ್ದಾರೆ. ಅಸಲಿಗೆ ಮಂಗಳೂರು-ಮೂಡಬಿದರೆ ನಡುವೆ 4 ಲೇನ್ ಗಳ ರಸ್ತೆ ಕಾಮಗಾರಿ ಜಾರಿಯಲ್ಲಿದೆ ಮತ್ತು ಕೆಲಸಕ್ಕಾಗಿ ಅಲ್ಲಲ್ಲಿ ಗುಡ್ಡವನ್ನು ಅಗೆಯಲಾಗಿದೆ. ಗುಡ್ಡವನ್ನು ಅಗೆದಾಗ ಅದು ಶಿಥಿಲಗೊಳ್ಳೋದು ಸಹಜ. ಒಂದು ಪಕ್ಷ ಈ ಭಾಗದಲ್ಲಿ ಗುಡ್ಡವೇನಾದರೂ ಕುಸಿದರೆ ಮಂಗಳೂರು-ಮೂಡಬಿದರೆ ನಡುವೆ ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಗುಡ್ಡದ ಮೇಲಿಂದ ಕೆಳಭಾಗಕ್ಕೆ ಸಣ್ಣ ಜಲಪಾತದಂತೆ ಹರಿಯುತ್ತಿರುವ ನೀರು ಸಹ ಗುಡ್ಡ ಶಿಥಿಲಗೊಳ್ಳಲು ಕಾರಣವಾಗಲಿದೆ ಎಂದು ವರದಿಗಾರ ಹೇಳುತ್ತಾರೆ. ಗುಡ್ಡ ಕುಸಿತವುಂಟಾಗಿ ಅದರ ಮೇಲಿಂದ ಹಾದುಹೋಗಿರುವ ಹೈಟೆನ್ಷನ್ ವೈರ್ ಗಳು ರಸ್ತೆಗೆ ಬಿದ್ದರೆ ಮತ್ತಷ್ಟು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಲಿದೆ. ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮುನ್ನೆಚ್ಚರಿಕೆಯ ಕ್ರಮವಾಗಿ 168 ಅಪಾಯಕಾರಿ ಸ್ಥಳಗಳನ್ನು ಗುರುತು ಮಾಡಿದ್ದಾರೆ ಎಂದು ವರದಿಗಾರ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Uttara Kannada: ಜಿಲ್ಲಾಕೇಂದ್ರಕ್ಕೆ ಸಂಪರ್ಕಿಸುವ ಮೂರ್ನಾಲ್ಕು ರಸ್ತೆಗಳಲ್ಲೇ ಗುಡ್ಡಕುಸಿತದ ಭಯ; ಜೀವ ಕೈಯಲ್ಲಿ ಹಿಡಿದು ವಾಹನ ಸವಾರರ ಸಂಚಾರ

Follow us on