ಸುಮಾರು 21 ತಿಂಗಳ ಸುದೀರ್ಘ ಕಾಯುವಿಕೆಯ ನಂತರ ರೆಡ್ ಬಾಲ್ ಕ್ರಿಕೆಟ್ಗೆ ಮರಳಿದ ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಪ್ರಸ್ತುತ ನಡೆಯುತ್ತಿರುವ ದುಲೀಪ್ ಟ್ರೋಫಿಯಲ್ಲಿ ಕೇವಲ 34 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಭಾರತ-ಬಿ ಪರ ಆಡುತ್ತಿರುವ ಪಂತ್, ಪಂದ್ಯದ ಮೂರನೇ ದಿನದಂದು ಬಿರುಗಾಳಿಯ ಇನ್ನಿಂಗ್ಸ್ ಆಡಿ, ತಮ್ಮ ತಂಡದ ಮುನ್ನಡೆಯನ್ನು 200 ರನ್ಗಳ ಆಚೆಗೆ ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 10 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಔಟಾಗಿದ್ದ ಪಂತ್, ಎರಡನೇ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿದರು.
ಬಂದ ತಕ್ಷಣ ಸ್ಫೋಟಕ ಬ್ಯಾಟಿಂಗ್ ಆರಂಭಿಸಿ ಪಂತ್, ಭಾರತ ಎ ತಂಡದ ಬೌಲರ್ಗಳ ಮೇಲೆ ದಾಳಿ ನಡೆಸಿದರು. ಆಕಾಶ್ ದೀಪ್ ಎಸೆತದಲ್ಲಿ ರಿವರ್ಸ್ ಸ್ಕೂಪ್ ಶಾಟ್ ಆಡುವ ಮೂಲಕ ಬೌಂಡರಿ ಬಾರಿಸಿದ ಪಂತ್, ಆ ಬಳಿಕ ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್ ವಿರುದ್ಧವೂ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ನಂತರ ಪಂತ್ ಕೇವಲ 34 ಎಸೆತಗಳಲ್ಲಿ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ಒಂದೇ ಓವರ್ನಲ್ಲಿ ಬೌಂಡರಿ ಮತ್ತು ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಆದರೆ ಪಂತ್ ಅವರ ಇನ್ನಿಂಗ್ಸ್ ಹೆಚ್ಚು ಕಾಲ ಉಳಿಯಲಿಲ್ಲ. ಅಂತಿಮವಾಗಿ ತಮ್ಮ ಇನ್ನಿಂಗ್ಸ್ನಲ್ಲಿ 47 ಎಸೆತಗಳನ್ನು ಎದುರಿಸಿದ ಪಂತ್, 9 ಬೌಂಡರಿ ಮತ್ತು 2 ಸಿಕ್ಸರ್ಗಳನ್ನು ಬಾರಿಸುವ ಮೂಲಕ ತಮ್ಮ ಕೆಲಸವನ್ನು ಪೂರ್ಣಗೊಳಿಸಿದರು.