ಬಿಜೆಪಿಗೆ ವಾಪಸ್ಸಾಗುವಂತೆ ಕರೆ ಬರುತ್ತಿವೆ ಎಂದು ಮತ್ತೊಮ್ಮೆ ಹೇಳಿದ ಪಕ್ಷದಿಂದ ಉಚ್ಛಾಟಿತ ನಾಯಕ ಕೆಎಸ್ ಈಶ್ವರಪ್ಪ

|

Updated on: Jul 08, 2024 | 2:42 PM

ವಿನೋದ ಹೆಸರಿನ ವಕೀಲರೊಬ್ಬರು ತನ್ನ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯು, ವಕೀಲ ಮಾಡುತ್ತಿರುವ ಆಪಾದನೆಗಳಲ್ಲಿ ಯಾವುದೇ ಹುರುಳಿಲ್ಲ ಎಂದು ನ್ಯಾಯಾಲಯ ವಜಾ ಮಾಡಿದೆ ಮತ್ತು ತಾನು ಅದೇ ವಕೀಲನ ವಿರುದ್ಧ ಹೂಡಿರುವ ಮಾನಹಾನಿ ಮೊಕದ್ದಮೆಯ ವಿಚಾರಣೆ ಇನ್ನೊಂದು ವಾರದ ಅವಧಿಯಲ್ಲಿ ಶುರುವಾಗಲಿದೆ ಎಂದು ಮಾಜಿ ಶಾಸಕ ಈಶ್ವರಪ್ಪ ಹೇಳಿದರು.

ಶಿವಮೊಗ್ಗ: ಉಕ್ಕಿ ಹರಿಯುತ್ತಿರುವ ತುಂಗೆಗೆ ರಾಷ್ಟ್ರಭಕ್ತರ ಬಳಗದ ವತಿಯಿಂದ ಬಾಗಿನ ಅರ್ಪಿಸಿದ ಹಿರಿಯ ರಾಜಕಾರಣಿ ಕೆಎಸ್ ಈಶ್ವರಪ್ಪ, ಬಿಜೆಪಿಗೆ ವಾಪಸ್ಸಾಗುವಂತೆ ಒತ್ತಡ ಬರುತ್ತಿದೆ ಆದರೆ ತಾನು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮತ್ತೊಮ್ಮೆ ಹೇಳಿದರು. ಯಾವ ವಿಚಾರ ಮತ್ತು ಸಿದ್ಧಾಂತಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದೆ ಅನ್ನೋದರ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆಯಾಗಬೇಕಿದೆ. ತಾನು ಮೊದಲಿಂದಲೂ ಬಿಜೆಪಿ ಪಕ್ಷದವನು, ಈಗ ಮತ್ತು ಮುಂದೆಯೂ ಬಿಜೆಪಿಯವನೇ. ಆದರೆ ಪಕ್ಷದ ಎಲ್ಲ ಹೊಣೆಗಾರಿಕೆ ಒಂದೇ ಕುಟುಂಬಕ್ಕೆ ಸೀಮಿತಗೊಳ್ಳುವುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿರೋಧಿಸುವ ಹಾಗೆ ತಾನು ಸಹ ಬಿಎಸ್ ಯಡಿಯೂರಪ್ಪ ಕುಟುಂಬ ವಿರುದ್ಧ ಬಂಡಾಯವೆದ್ದು ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಕೇವಲ ಅದೊಂದೇ ಕಾರಣವಲ್ಲ, ಹಿಂದುತ್ವ ಮತ್ತು ಕೆಲ ನಾಯಕರನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡುತ್ತಿರುವ ಕುತಂತ್ರದ ವಿರುದ್ಧ ಧ್ವನಿಯಾಗಿ ಸಿಡಿದೆದ್ದಿದ್ದೆ ಎಂದು ಈಶ್ವರಪ್ಪ ಹೇಳಿದರು. ತಾನು ರಾಯಣ್ಣ ಬ್ರಿಗೇಡ್ ಸಂಘಟನೆ ರಚಿಸಿದಾಗಲೂ ಯಡಿಯೂರಪ್ಪ ಅದನ್ನು ಸಹಿಸಲಾಗದೆ ಅಮಿತ್ ಶಾ ಅವರ ಮೂಲಕ ಸಂಘಟನೆಯನನ್ನು ರದ್ದು ಮಾಡಿಸಿದ್ದರು ಎಂದು ಹೇಳಿದ ಈಶ್ವರಪ್ಪ ತಾನು ಪ್ರಸ್ತಾಪಿಸುತ್ತಿರುವ ವಿಷಯಗಳಿಗೆ ಪರಿಹಾರ ಸಿಕ್ಕ ಬಳಿಕ ಬಿಜೆಪಿಗೆ ವಾಪಸ್ಸು ಹೋಗುವ ನಿರ್ಧಾರ ಮಾಡುವುದಾಗಿ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೆಲವರಿಗೆ ಮಾತನಾಡುವ ಚಟ; ಕೆಎಸ್ ಈಶ್ವರಪ್ಪ ವಿರುದ್ಧ ಶಾಸಕ ಶಿವರಾಮ್ ಹೆಬ್ಬಾರ್​ ಆಕ್ರೋಶ

Follow us on