ಮಹಿಳೆಯರ ಮೇಲೆ ಹರಿದ ಸರ್ಕಾರಿ ಬಸ್​​: ಓರ್ವ ಮಹಿಳೆಯ ಕಾಲು ಕಟ್, ಇಬ್ಬರಿಗೆ ಗಂಭೀರ ಗಾಯ!

Updated on: Feb 24, 2026 | 4:07 PM

ಗದಗ ಹೊಸ ಬಸ್ ನಿಲ್ದಾಣದಲ್ಲಿ ಕೆಕೆಆರ್‌ಟಿಸಿ ಬಸ್ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್‌ ಚಕ್ರಕ್ಕೆ ಸಿಲುಕಿ ಶಾಂತವ್ವ ಕೊರ್ತಿ ಎಂಬುವರ ಕಾಲು ತುಂಡಾಗಿದ್ದು, ಅವರನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಾರಿಗೆ ಸಂಸ್ಥೆಯೂ ಆಂತರಿಕ ತನಿಖೆಗೆ ಆದೇಶಿಸಿದೆ.

ಗದಗ,ಫೆ.24: ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯಕ್ಕೆ ಅಮಾಯಕ ಪ್ರಯಾಣಿಕರು ಬಲಿಯಾಗುತ್ತಿರುವ ಘಟನೆಗಳು ಮುಂದುವರಿದಿವೆ. ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (KKRTC) ಬಸ್ ಹರಿದು ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಯಚೂರು ವಿಭಾಗದ ಮಾಸ್ಕಿ ಡಿಪೋಗೆ ಸೇರಿದ ಬಸ್ ಚಾಲಕ, ನಿಲ್ದಾಣದ ಒಳಗೆ ಅತಿವೇಗವಾಗಿ ಬಸ್ ಚಾಲನೆ ಮಾಡಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯರ ಮೇಲೆ ಬಸ್ ಹರಿದಿದೆ. ಸುನಗ ಗ್ರಾಮದ ನಿವಾಸಿ ಶಾಂತವ್ವ ಸಿದ್ದಪ್ಪ ಕೊರ್ತಿ ಎಂಬುವವರು ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಚಕ್ರ ಹರಿದ ಪರಿಣಾಮ ಅವರ ಕಾಲು ತುಂಡಾಗಿದ್ದು, ಬೆನ್ನಿನ ಭಾಗಕ್ಕೂ ಗಂಭೀರ ಗಾಯಗಳಾಗಿವೆ. ಥಮಿಕ ಚಿಕಿತ್ಸೆಯ ನಂತರ ಶಾಂತವ್ವ ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್‌ಡಿಎಂ (SDM) ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಇಬ್ಬರು ಮಹಿಳೆಯರಿಗೂ ಗಂಭೀರ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಗದಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯದ ಚಾಲನೆ ತೋರಿದ ಬಸ್ ಚಾಲಕನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಬಸ್ ನಿಲ್ದಾಣದ ಒಳಗೆ ಇಷ್ಟು ವೇಗವಾಗಿ ಬಸ್ ಚಲಿಸಲು ಕಾರಣವೇನು ಎಂಬ ಬಗ್ಗೆ ಸಾರಿಗೆ ಸಂಸ್ಥೆಯೂ ಆಂತರಿಕ ತನಿಖೆಗೆ ಆದೇಶಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 24, 2026 04:07 PM
Follow Us