ಹೊಳೆ ಆಲೂರು – ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ; 20 ಅಡಿ ಆಳಕ್ಕೆ ಬೀಳುವ ಭೀತಿಯಲ್ಲಿ ಗ್ರಾಮಸ್ಥರ ನಿತ್ಯ ಸಂಚಾರ
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು-ಅಮರಗೋಳ ರಸ್ತೆ ಅತ್ಯಂತ ದುಸ್ಥಿತಿಯಲ್ಲಿದೆ. ಮಲಪ್ರಭಾ ನದಿಯ ಪ್ರವಾಹದಿಂದ ಪ್ರತಿ ವರ್ಷವೂ ಹದಗೆಡುವ ಈ ರಸ್ತೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಧಕ್ಕೆಯಾಗಿದ್ದು, ಜನರು ಜೀವಭಯದಲ್ಲೇ ನಿತ್ಯ ಸಂಚಾರ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗ, ಆ.20: ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳು ಅಕ್ಷರಶಃ ಅದ್ವಾನವಾಗಿವೆ. ಅದರಲ್ಲೂ ರೋಣ ತಾಲೂಕಿನ ಹೊಳೆ ಆಲೂರು ಮತ್ತು ಅಮರಗೋಳ ಗ್ರಾಮಗಳ ನಡುವಿನ ರಸ್ತೆ ಅತ್ಯಂತ ಭಯಾನಕವಾಗಿದೆ ಎಂದು ನಮ್ಮ ಪ್ರತಿನಿಧಿ ಸಂಜೀವ ಪಾಂಡ್ರೆ ವರದಿ ಮಾಡಿದ್ದಾರೆ. ಸ್ವಲ್ಪ ಯಾಮಾರಿದರೂ 20 ಅಡಿ ಆಳಕ್ಕೆ ಬೀಳುವ ಅಪಾಯವಿದ್ದು, ಜನರು ಪ್ರತಿನಿತ್ಯ ಜೀವಭಯದಲ್ಲೇ ಸಂಚರಿಸುತ್ತಿದ್ದಾರೆ. ರಸ್ತೆ ಪಕ್ಕದಲ್ಲಿ ಮಲಪ್ರಭಾ ನದಿ ಹರಿಯುವುದರಿಂದ, ಪ್ರತಿ ವರ್ಷವೂ ಮಳೆಗಾಲದಲ್ಲಿ ಪ್ರವಾಹ ಬಂದು ರಸ್ತೆ ಕೊಚ್ಚಿ ಹೋಗುತ್ತದೆ. ಆದರೆ, ಗದಗ ಜಿಲ್ಲಾ ಪಂಚಾಯಿತಿಯು ಶಾಶ್ವತ ಮತ್ತು ಗುಣಮಟ್ಟದ ಕಾಮಗಾರಿ ನಡೆಸುತ್ತಿಲ್ಲ. ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ರಸ್ತೆ ರಿಪೇರಿ ಮಾಡುವ ಗೋಜಿಗೆ ಹೋಗಿಲ್ಲ. ಈ ದುಸ್ಥಿತಿಯಿಂದಾಗಿ, ಸರ್ಕಾರಿ ಬಸ್ಗಳ ಸಂಚಾರವನ್ನೂ ಕಡಿತಗೊಳಿಸಲಾಗಿದೆ. ಪರಿಣಾಮವಾಗಿ, ಬಸರಕೋಡ, ಅಮರಗೋಳ ಸೇರಿದಂತೆ ಹಲವು ಗ್ರಾಮಗಳ ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ಹೊಳೆ ಆಲೂರಿಗೆ ತಲುಪಲು ಬೈಕ್, ಸೈಕಲ್ ಅಥವಾ ಟಂಟಂಗಳನ್ನು ಅವಲಂಬಿಸಿದ್ದಾರೆ. ಇದು ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದೆ. ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ದುಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯ ಶಾಸಕ ಸಿ.ಸಿ. ಪಾಟೀಲ್ ಅವರು ಈ ಬಗ್ಗೆ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
