ಉತ್ತರ ಕರ್ನಾಟಕದಲ್ಲಿ ಬಸನಗೌಡ ಯತ್ನಾಳ್ ನೇತೃತ್ವದ ಪಾದಯಾತ್ರೆಗೆ ನನ್ನ ಅಭ್ಯಂತರವಿಲ್ಲ: ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ

Updated on: Aug 13, 2024 | 2:24 PM

ಬಸನಗೌಡ ಯತ್ನಾಳ್ ನೇತೃತ್ವದಲ್ಲಿ 22 ಬಿಜೆಪಿ ಶಾಸಕರಿಗೆ ಉತ್ತರ ಕರ್ನಾಟಕದಲ್ಲಿ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡುವ ಅನುಮತಿ ನೀಡಿದರೆ ಅದು ಪಕ್ಷದ ಸಂಘಟನೆಗೆ ಮಾರಕವಾಗಲಿದೆ, ಯಾವುದೇ ಕಾರಣಕ್ಕೂ ಈ ಪಾದಯಾತ್ರೆ ನಡೆಯುವುದನ್ನು ತಡೆಯಬೇಕೆಂದು ನಿನ್ನೆ ಹಿರಿಯ ರಾಜಕಾರಣಿ ಮತ್ತು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದರು.

ಬೆಂಗಳೂರು: ಬಿಜೆಪಿಯ ಹರ್ ಘರ್ ತಿರಂಗಾ ಅಭಿಯಾನಕ್ಕೆ ಇಂದು ವಸಂತನಗರ ಮಂಡಲ್ ಬೂತ್ ನಲ್ಲಿ ಚಾಲನೆ ನೀಡಿ ನಗರದ ಬಿಜೆಪಿ ಮುಖಂಡ ಎಂ ಸಾಗರ್ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಉತ್ತರ ಕರ್ನಾಟಕದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಇತರ ಕೆಲ ಶಾಸಕರು ಮಾಡಬೇಕೆಂದಿರುವ ಪಾದಯಾತ್ರೆಗೆ ತಮ್ಮದೇನೂ ತಕರಾರಿಲ್ಲ ಎಂದು ಹೇಳಿದರು. ಯತ್ನಾಳ್ ನೇತೃತ್ವದಲ್ಲಿ ಕೆಲವು ಬಿಜೆಪಿ ಶಾಸಕರು ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ಮಾಡುವ ನಿರ್ಧಾರ ಮಾಡಿಕೊಂಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಪ್ರಯತ್ನ ಮಾಡಿಕೊಂಡು ಬಂದಿದ್ದೇನೆ. ಯತ್ನಾಳ್ ಅವರ ಉದ್ದೇಶಿತ ಪಾದಯಾತ್ರೆ ಬಗ್ಗೆ ತನ್ನದೇನೂ ತಕರಾರಿಲ್ಲ ಅದರೆ ಅವರ ಪಾದಯಾತ್ರೆ ಪಕ್ಷದ ಸಂಘಟನೆಗೆ ಪೂರಕವಾಗಿರಬೇಕು ಎಂದು ವಿಜಯೇಂದ್ರ ಹೇಳಿದರು. ಎಲ್ಲಕ್ಕಿಂತ ಮುಖ್ಯವಾಗಿ ಅವರು ವರಿಷ್ಠರ ಅನುಮತಿ ಪಡೆದೇ ಪಾದಯಾತ್ರೆ ಮಾಡಬೇಕೆಂದು ವಿಜಯೇಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಿಲ್ಲ: ಬಹಿರಂಗವಾಗಿಯೇ ಅಸಹಾಯಕತೆ ಹೊರಹಾಕಿದ ಅಶೋಕ್   

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.