ಸೋನಿಯಾ ಗಾಂಧಿಯವರ ಮೂಲ ಯಾವುದು ಅಂತ ಸಿದ್ದರಾಮಯ್ಯ ಮೊದಲು ಹೇಳಲಿ: ಪ್ರತಾಪ್ ಸಿಂಹ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 28, 2022 | 10:31 PM

ಸಿದ್ದರಾಮಯ್ಯನವರು ತಮ್ಮ ಈ ಮಹಾತಾಯಿಯ ಮೂಲ ಯಾವುದು ಅಂತ ದಯವಿಟ್ಟು ಕರ್ನಾಟಕದ ಮಹಾಜನತೆಗೆ ತಿಳಿಸಲಿ ಎಂದು ಪ್ರತಾಪ್ ಸಿಂಹ ಹೇಳಿದರು.

Udupi: ಶನಿವಾರವೆಲ್ಲ ನಾವು ಇದನ್ನೇ ಚರ್ಚೆ ಮಾಡಿದ್ದೇವೆ. ಆರ್ ಎಸ್ ಎಸ್ ಮೂಲ ಯಾವುದು, ದ್ರಾವಿಡರು ಯಾರು, ಆರ್ಯರು ಯಾರು, ನಮ್ಮ ಮೂಲ ಯಾವುದು ಅವರ ಮೂಲ ಯಾವುದು, ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಮೂಲ ಯಾವುದು? ನಮ್ಮ ನಾಯಕರೆಲ್ಲ ಬರೀ ಇದನ್ನೇ ಮಾತಾಡುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸಿದ್ದರಾಮಯ್ಯ ಕೆದಕಿರುವ ವಿಷಯದ ಬಗ್ಗೆ ಏನು ಹೇಳಿದರು, ಅದಕ್ಕೆ ಪ್ರತ್ಯುತ್ತರವಾಗಿ ತುಮಕೂರಲ್ಲಿ ಸಿದ್ದರಾಮಯಯ್ಯ ಏನು ಹೇಳಿದರು ಅನ್ನೋದನ್ನೆಲ್ಲ ನಾವು ವರದಿ ಮಾಡಿದ್ದೇವೆ. ಬಿಜೆಪಿಯ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಅವರು ಶನಿವಾರ ಉಡುಪಿ ಪ್ರವಾಸದಲ್ಲಿದ್ದರು. ಮಾಧ್ಯಮದವರು ಸಿಂಹ ಅವರಿಗೂ ಸಿದ್ದರಾಮಯ್ಯ ಆರ್ ಎಸ್ ಎಸ್ ಮೂಲದ ಪ್ರಶ್ನೆ ಬಗ್ಗೆ ಕೇಳಿದ್ದಾರೆ ಅಂತ ಹೇಳಿದಾಗ ಅವರು ವಿರೋಧ ಪಕ್ಷದ ನಾಯಕರ ಧೋರಣೆಯನ್ನೇ ಪ್ರಶ್ನಿಸಿದರು.

ಸಿದ್ದರಾಮಯ್ಯನವರು ಹಲವು ವರ್ಷಗಳ ಹಿಂದೆ ಜೆಡಿ(ಎಸ್) ಪಕ್ಷದ ಕಾರ್ಯಕರ್ತರಾಗಿದ್ದಾಗ, ಸೋನಿಯಾ ಗಾಂಧಿಯವರನ್ನು ಅವಳು, ಇವಳು ಅಂತ ಸಂಬೋಧಿಸುತ್ತಿದ್ದರು. ಕಾಂಗ್ರೆಸ್ ಪಕ್ಷದ ಸೇರಿದ ಬಳಿಕ ಸೋನಿಯಾರನ್ನು ತಾಯಿ, ಮಹಾತಾಯಿ, ಅಧಿನಾಯಕಿ ಅನ್ನುತ್ತಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಈ ಮಹಾತಾಯಿಯ ಮೂಲ ಯಾವುದು ಅಂತ ದಯವಿಟ್ಟು ಕರ್ನಾಟಕದ ಮಹಾಜನತೆಗೆ ತಿಳಿಸಲಿ ಎಂದು ಪ್ರತಾಪ್ ಸಿಂಹ ಹೇಳಿದರು.

ಸೋನಿಯಾ ಗಾಂಧಿಯವರ ಮೂಲದ ಬಗ್ಗೆ ತುಮಕೂರಲ್ಲಿ ಮಾತಾಡಿದ ಸಿದ್ದರಾಮಯ್ಯನವರು ಅವರು ಭಾರತ ದೇಶದ ಪೌರತ್ವ ಪಡೆದುಕೊಂಡಿರುವುದರಿಂದ ಅವರು ಭಾರತದಲ್ಲಿ ಹುಟ್ಟದಿದ್ದರೂ ಭಾರತೀಯರು ಎಂದು ಹೇಳಿದರು. ಈ ವಿಷಯ ವೀಕೆಂಡ್ ಚರ್ಚೆಗೆ ಗ್ರಾಸವಾಗಿದೆ ಮಾರಾಯ್ರೇ. ರವಿವಾರದಂದು ಎರಡೂ ಪಕ್ಷಗಳ ಹಲವು ನಾಯಕರು ಹೇಳಿಕೆಗಳನ್ನು ನೀಡಬಹುದು ಇಲ್ಲವೇ ಟ್ವೀಟ್ ಮಾಡಲಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on