IND vs BAN: ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ

Updated on: Sep 27, 2024 | 2:13 PM

IND vs BAN: ಆಕಾಶ್ ದೀಪ್​ರನ್ನು ಹೊರತುಪಡಿಸಿ ತಂಡದ ಮತ್ತ್ಯಾವ ಆಟಗಾರ ಕೂಡ ಡಿಆರ್​ಎಸ್ ತೀರ್ಪು ನಮ್ಮ ಪರವಾಗಿ ಬರುತ್ತದೆ ಎಂದು ಭಾವಿಸಿರಲಿಲ್ಲ. ಸ್ವತಃ ನಾಯಕ ರೋಹಿತ್ ಕೂಡ ನಂಬಿರಲಿಲ್ಲ. ಆದರೆ ಡಿಆರ್​ಎಸ್​ನಲ್ಲಿ ಔಟಾಗಿರುವುದು ಖಚಿತವಾದ ಬಳಿಕ ಆಟಗಾರರೆಲ್ಲರೂ ಅಚ್ಚರಿಗೊಂಡರು.

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ ನಡೆಯುತ್ತಿದೆ. ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಬೌಲಿಂಗ್ ದಾಳಿ ಆರಂಭಿಸಿದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್​ರಂತಹ ಅನುಭವಿ ವೇಗಿಗಳಿಗೆ ಆರಂಭದಲ್ಲಿ ವಿಕೆಟ್ ಸಿಗಲಿಲ್ಲ. ಆದ್ದರಿಂದ ಬೌಲಿಂಗ್‌ನಲ್ಲಿ ಬದಲಾವಣೆ ತಂಡ ನಾಯಕ ರೋಹಿತ್ ಶರ್ಮಾ, ಯುವ ಬೌಲರ್ ಆಕಾಶ್​ ದೀಪ್​ಗೆ ಬೌಲಿಂಗ್ ನೀಡಿದರು. ಈ ವೇಳೆ ದಾಳಿಗಿಳಿದ ಆಕಾಶ್, ಬಾಂಗ್ಲಾದೇಶ ತಂಡದ ಆರಂಭಿಕರಿಬ್ಬರನ್ನು ಪೆವಿಲಿಯನ್​ಗಟ್ಟಿದರು. ಅದರಲ್ಲೂ ಆಕಾಶ್ ಉರುಳಿಸಿದ ಎರಡನೇ ವಿಕೆಟ್​ ನಾಯಕ ರೋಹಿತ್ ಶರ್ಮಾಗೂ ಅಚ್ಚರಿ ತರಿಸಿತು.

ಆಕಾಶ್​ಗೆ 2 ವಿಕೆಟ್

ಪಂದ್ಯದ ಮೊದಲ ಎಂಟು ಓವರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್​ಗೆ ಯಾವುದೇ ವಿಕೆಟ್ ಸಿಗಲಿಲ್ಲ. ಇದೇ ವೇಳೆ ನಾಯಕ ರೋಹಿತ್, ಆಕಾಶ್ ದೀಪ್​ಗೆ ಬೌಲಿಂಗ್ ನೀಡಿದರು. ಏತನ್ಮಧ್ಯೆ, ಆಕಾಶ್ ತನ್ನ ಮೊದಲ ಓವರ್‌ನಲ್ಲಿ ಆರಂಭಿಕ ಝಾಕಿರ್ ಹಸನ್‌ನನ್ನು ಔಟ್ ಮಾಡಿದರು. ಜಾಕಿರ್ ಬರೋಬ್ಬರಿ 24 ಎಸೆತಗಳನ್ನು ಎದುರಿಸಿದರೂ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ಇದಾದ ಬಳಿಕ ಮತ್ತೊಬ್ಬ ಆರಂಭಿಕ ಸದ್ಮಾನ್ ಇಸ್ಲಾಂ ಅವರನ್ನು ಆಕಾಶ್ ಎಲ್​ಬಿ ಬಲೆಗೆ ಬೀಳಿಸಿದರು.

ಆರಂಭಿಕರಿಬ್ಬರೂ ಔಟ್

ಆಕಾಶ್ ದೀಪ್ ಎಸೆದ ಮೂರನೇ ಓವರ್‌ನ ಮೊದಲ ಎಸೆತ ಬಾಂಗ್ಲಾದೇಶದ ಮತ್ತೊಬ್ಬ ಆರಂಭಿಕ ಸಾದ್ಮಾನ್ ಇಸ್ಮಲ್ ಅವರ ಪ್ಯಾಡ್‌ಗೆ ಬಡಿತು. ಹೀಗಾಗಿ ಟೀಂ ಇಂಡಿಯಾ ಆಟಗಾರರು ಅಂಪೈರ್‌ಗೆ ಮನವಿ ಸಲ್ಲಿಸಿದರೂ ಅಂಪೈರ್ ಅದನ್ನು ಔಟ್ ನೀಡಲಿಲ್ಲ. ಆಕಾಶ್ ದೀಪ್​ಗೆ ಇದು ಖಚಿತವಾಗಿ ಔಟೆಂದು ಗೊತ್ತಿದ್ದ ಕಾರಣ ನಾಯಕ ರೋಹಿತ್​ಗೆ ಡಿಆರ್​ಎಸ್ ತೆಗೆದುಕೊಳ್ಳುವಂತೆ ಕೇಳಿಕೊಂಡರು. ಕೊಂಚ ಸಮಯ ಯೋಚಿಸಿದ ರೋಹಿತ್ ಕೊನೆಗೂ ಡಿಆರ್​ಎಸ್ ತೆಗೆದುಕೊಂಡರು. ಡಿಆರ್‌ಎಸ್​ನಲ್ಲಿ ನೋಡಲಾಗಿ ಇಸ್ಮಾಲ್ ಔಟ್ ಆಗಿರುವುದು ಖಚಿತವಾಯಿತು.

ಅಚ್ಚರಿಗೊಂಡ ರೋಹಿತ್

ಅಲ್ಲಿಯವರೆಗೂ ಆಕಾಶ್ ದೀಪ್​ರನ್ನು ಹೊರತುಪಡಿಸಿ ತಂಡದ ಮತ್ತ್ಯಾವ ಆಟಗಾರ ಕೂಡ ಡಿಆರ್​ಎಸ್ ತೀರ್ಪು ನಮ್ಮ ಪರವಾಗಿ ಬರುತ್ತದೆ ಎಂದು ಭಾವಿಸಿರಲಿಲ್ಲ. ಸ್ವತಃ ನಾಯಕ ರೋಹಿತ್ ಕೂಡ ನಂಬಿರಲಿಲ್ಲ. ಆದರೆ ಡಿಆರ್​ಎಸ್​ನಲ್ಲಿ ಔಟಾಗಿರುವುದು ಖಚಿತವಾದ ಬಳಿಕ ಆಟಗಾರರೆಲ್ಲರೂ ಅಚ್ಚರಿಗೊಂಡರು. ನಾಯಕ ರೋಹಿತ್​ ಕೂಡ ವಿಕೆಟ್​ ಸಿಕ್ಕ ಅಚ್ಚರಿಯಲ್ಲಿ ಆಕಾಶ್​ ದೀಪ್​ರನ್ನು ತಬ್ಬಿಕೊಂಡು ಸಂಭ್ರಮಿಸಿದರು. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

Follow Us
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More