ಜಗತ್ತಿಗೇ ಕಂಟಕವಾಗಲಿದೆ ಇರಾನ್ ಯುದ್ಧ: ಮಾರಕ ಕಾಯಿಲೆ ಹರಡುವ ಭೀತಿ, ಭಾರತಕ್ಕೂ ಇದೆ ಆತಂಕ!

Updated on: Mar 09, 2026 | 12:45 PM

ಇರಾನ್-ಇಸ್ರೇಲ್ ಸಂಘರ್ಷದಲ್ಲಿ ತೈಲ ಕೇಂದ್ರಗಳ ಮೇಲಿನ ದಾಳಿ ಪರಿಸರ ದುರಂತಕ್ಕೆ ಕಾರಣವಾಗಲಿದೆ. ತೈಲ ಬಾವಿಗಳ ಹೊಗೆಯಿಂದ ಹೊರಬರುವ ವಿಷಕಾರಿ ಅನಿಲಗಳು ಮಾನವನ ಆರೋಗ್ಯಕ್ಕೆ ಮಾರಕವಾಗಿದ್ದು, ಕ್ಯಾನ್ಸರ್, ಶ್ವಾಸಕೋಶದ ಕಾಯಿಲೆಗಳು 30 ವರ್ಷಗಳ ನಂತರವೂ ಕಾಡಬಹುದು. 1991ರ ಗಲ್ಫ್ ಯುದ್ಧದ ಕರಾಳ ನೆನಪುಗಳು ಇದೀಗ ಮತ್ತೆ ಮರುಕಳಿಸುವ ಭೀತಿಯಿದೆ, ಇದು ಜಾಗತಿಕ ಹವಾಮಾನ ವೈಪರಿತ್ಯಕ್ಕೂ ಕಾರಣವಾಗಬಹುದು.

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ತೈಲ ಕೇಂದ್ರಗಳ ಮೇಲೆ ದಾಳಿಗಳಿಗೆ ಕಾರಣವಾಗಿದ್ದು, ಇದು ಕೇವಲ ಆರ್ಥಿಕ ನಷ್ಟವಲ್ಲದೆ, ಭೀಕರ ಪರಿಸರ ದುರಂತಕ್ಕೆ ನಾಂದಿ ಹಾಡಿದೆ. ತೈಲ ಬಾವಿಗಳಿಗೆ ಬೆಂಕಿ ಬಿದ್ದಾಗ ಹೊರಹೊಮ್ಮುವ ದಟ್ಟ ಕಪ್ಪು ಹೊಗೆ ನೂರಾರು ಕಿಲೋಮೀಟರ್ ದೂರದವರೆಗೆ ಹರಡಿ ಜನರ ಆರೋಗ್ಯಕ್ಕೆ ಮಾರಕವಾಗಲಿದೆ. ಈ ಹೊಗೆಯಲ್ಲಿರುವ ಕಾರ್ಬನ್ ಮೊನಾಕ್ಸೈಡ್, ಸಲ್ಫರ್ ಡೈಯಾಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್‌ಗಳು ಶ್ವಾಸಕೋಶ ಮತ್ತು ರಕ್ತದ ಮೇಲೆ ನೇರ ಪರಿಣಾಮ ಬೀರುತ್ತವೆ. ಗಾಳಿಯಲ್ಲಿ ಸೇರಿದ ಈ ವಿಷಗಳು ಮಳೆ ನೀರಿನಲ್ಲಿ ಬೆರೆತು ಆಮ್ಲ ಮಳೆಯನ್ನು ಸೃಷ್ಟಿಸಿ ಶ್ವಾಸಕೋಶಗಳನ್ನು ಹಾನಿಗೊಳಿಸುತ್ತವೆ. ಚರ್ಮ ರೋಗಗಳು, ಕ್ಯಾನ್ಸರ್ ಮತ್ತು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ತಕ್ಷಣವೇ ಸಾವು ಸಂಭವಿಸದಿದ್ದರೂ, ದೀರ್ಘಾವಧಿಯಲ್ಲಿ ದೇಹದ ಅಂಗಾಂಗಗಳನ್ನು ಹಾನಿಗೊಳಿಸುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

1991ರಲ್ಲಿ ಗಲ್ಫ್ ಯುದ್ಧದ ವೇಳೆ ಅಮೆರಿಕ ಇರಾಕ್​​ ತೈಲ ಬಾವಿಗಳಿಗೆ ಬೆಂಕಿ ಹಚ್ಚಿದ್ದ ನಂತರ ಗಲ್ಫ್ ವಾರ್ ಸಿಂಡ್ರೋಮ್ ಕಾಣಿಸಿಕೊಂಡಿತ್ತು. ಅಮೆರಿಕದ ಸಾವಿರಾರು ಸೈನಿಕರು 30 ವರ್ಷಗಳ ನಂತರವೂ ದೀರ್ಘಕಾಲದ ಆಯಾಸ, ನರಗಳ ಹಾನಿ, ಕ್ಯಾನ್ಸರ್‌ನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದೀಗ ಇರಾನ್‌ನ ಬೃಹತ್ ತೈಲ ಸಂಗ್ರಹಾಗಾರಗಳ ಮೇಲೆ ದಾಳಿಯಾದರೆ, ಈ ದುರಂತ 1991ರ ಗಲ್ಫ್ ಯುದ್ಧಕ್ಕಿಂತ ಹತ್ತು ಪಟ್ಟು ಹೆಚ್ಚು ಅಪಾಯಕಾರಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹೊಗೆ ಪರ್ಷಿಯನ್ ಗಲ್ಫ್ ದಾಟಿ ನೆರೆ ರಾಷ್ಟ್ರಗಳಿಗೂ ಹರಡಿ ಜಾಗತಿಕ ಹವಾಮಾನ ವೈಪರಿತ್ಯಕ್ಕೆ ಕಾರಣವಾಗಬಹುದು. ಭಾರತದ ವರೆಗೂ ಪರಿಣಾಮ ತಟ್ಟುವ ಸಾಧ್ಯತೆ ಇದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow Us