ಬೆಂಗಳೂರು: ಚಿಕ್ಕನಾಯಕನಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಬಾಬು (Suresh Babu) ಇಂದು ವಿಧಾನ ಮಂಡಲ ಬಜೆಟ್ ಅಧಿವೇಶನಲ್ಲಿ ತಮ್ಮ ಭಾಗದ ರೈತರು ಎದುರಿಸುತ್ತಿರುವ ನೀರಿನ ಸಮಸ್ಯೆಯನ್ನು ಪ್ರಸ್ತಾಪಿಸಿದಾಗ ನೀರಾವರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸಮಂಜಸ ಉತ್ತರ ನೀಡಿದರು. ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ (Chikkanayakanahalli) ಕೆರೆಗಳಿಗೆ 1.39 ಟಿಎಂಸಿ ನೀರು ಒದಗಿಸುವ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದ್ದರೂ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ 4,657 ಹೆಕ್ಟೇರ್ ಜಮೀನಿನಲ್ಲಿ ಕೃಷಿಕರು ನಡೆಸುತ್ತಿರುವ ತುಂತುರು ನೀರಾವರಿ ಬೇಸಾಯ ಪ್ರಭಾವಕ್ಕೊಳಗಾಗಿದೆ, ಕೋವಿಡ್ ಸಮಯದಲ್ಲಿ ಪೇಟೆಗಳಲ್ಲಿದ್ದ ಅನೇಕ ಯುವಕರು ತಮ್ಮ ಹಳ್ಳಿಗಳಿಗೆ ವಾಪಸ್ಸಾಗಿ, ವ್ಯವಸಾಯದಲ್ಲಿ ತೊಡಗಿ ಅಡಕೆ, ತೆಂಗು ಮತ್ತು ಬೇರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಪ್ರಸಕ್ತವಾಗಿ ರಾಜ್ಯ ಭೀಕರ ಬರಗಾಲ ಸ್ಥಿತಿಯಲ್ಲಿರುವುದರಿಂದ ಕಷಿಗಾಗಿ ನೀರಿನ ಸಮಸ್ಯೆ ಉಲ್ಬಣಿಸಿದೆ, ಹಾಗಾಗಿ ಕಾಮಗಾರಿಯನ್ನು ಚುರುಕುಗೊಳಿಸಿ ರೈತರಿಗೆ ನೆರವಾಗಬೇಕು ಎಂದು ಹೇಳಿದರು.
ಅಂಕಿಅಂಶಗಳೊಂದಿಗೆ ಉತ್ತರ ನೀಡಿದ ಶಿವಕುಮಾರ್ ಆದಷ್ಟು ಬೇಗೆ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದರಾದರೂ ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ವರ್ಷ ಕಳೆದರೂ ಇನ್ನೂ ಹಣ ಬಿಡುಗಡೆ ಮಾಡದ ಕಾರಣ ಕಾಮಗಾರಿ ಕುಂಠಿತಗೊಳ್ಳುತ್ತಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ