ಬೆಂಗಳೂರು: ಕೇವಲ ಭಾರತ ಮಾತ್ರವಲ್ಲ, ಇಡೀ ವಿಶ್ವದ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಇತಿಹಾಸದಲ್ಲಿ ನಾಳೆ ಅಂದರೆ ಬುಧವಾರ ಒಂದು ಮಹತ್ವದ ದಿನ ಅನಿಸಿಕೊಳ್ಳಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) (ISRO) ಮಹತ್ವಾಕಾಂಕ್ಷೆಯ ಮಿಷನ್ ಚಂದ್ರಯಾನ-3 (Chandrayaan-3) ಲ್ಯಾಂಡರ್ ವಿಕ್ರಮ ನಾಳೆ ಚಂದ್ರನ ದಕ್ಷಿಣ ಧ್ರುವದಲ್ಲಿ (South Pole) ಲ್ಯಾಂಡ್ ಆಗಲಿದೆ. ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ಯಾವುದೇ ಅಡಚಣೆ ವ್ಯತ್ಯಯ ಉಂಟಾಗದಿರಲಿ ಅಂತ ಇಡೀ ಭಾರತ ಪ್ರಾರ್ಥಿಸುತ್ತಿದೆ. ಏತನ್ಮಧ್ಯೆ, ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ನಗರದಲ್ಲಿರುವ ಜವಾಹರಲಾಲ ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ ಗಲಗಲಿ ಅವರೊಂದಿಗೆ ನಾಳಿನ ಮೈಲಿಗಲ್ಲು ಬಗ್ಗೆ ಹಲವು ವಿಷಯಗಳನ್ನು ಚರ್ಚಿಸಿದ್ದು ಅವರು ಲ್ಯಾಂಡಿಂಗ್ ಹಂತದ ಪ್ರತಿಯೊಂದು ಅಂಶ ಮತ್ತು ಸೂಕ್ಷ್ಮತೆಯನ್ನು ವಿವರಿಸಿದ್ದಾರೆ. ಕಳೆದ ಸಲ ಅಂದರೆ ಚಂದ್ರಯಾನ- 1ರಲ್ಲಿ ಮೂನ್ ಇಂಪ್ಯಾಕ್ಟ್ ಪ್ರೋಬ್ ನಿಧಾನಗತಿಯಲ್ಲಿ ಲ್ಯಾಂಡ್ ಆಗದೆ ಅಪ್ಪಳಿಸಿದ್ದರಿಂದ ಮಿಷನ್ ವಿಫಲವಾಗಿತ್ತು. ಅದರೆ ಈ ಬಾರಿ ಲ್ಯಾಂಡರ್ ನಿಧಾನ ಗತಿಯಲ್ಲಿ ಅಂದರೆ 220 ಕಿಮಿ/ಗಂಟೆ ವೇಗದಲ್ಲಿ ಇಳಿಯುತ್ತಾ ತನ್ನ ಸೆನ್ಸರ್ ಗಳ ಮೂಲಕ ವೇಗವನ್ನು ಮತ್ತಷ್ಟು ಕುಂಠಿತಗೊಳಿಸಿಕೊಳ್ಳುತ್ತಾ ಹೆಲಿಕ್ಯಾಪ್ಟರ್ ನಂತೆ ಚಂದ್ರನ ಮೇಲ್ಮೈಯಲ್ಲಿ ಸುತ್ತುತ್ತಾ ನಿಧಾನವಾಗಿ ಲ್ಯಾಂಡ್ ಅಗಲಿದೆ. ಅದು ಎಷ್ಟು ನಿಧಾನಗತಿಯಲ್ಲಿ ಲ್ಯಾಂಡ್ ಅಗುತ್ತದೆಂದರೆ, ಲ್ಯಾಂಡರ್ ಒಳಗಿನ ಯಾವುದೇ ಕಾಂಪೋನೆಂಟ್ ಗೆ ಹಾನಿಯುಂಟಾಗುವುದಿಲ್ಲ ಎಂದು ಹೇಳಿದ ಗಲಗಲಿ ಇದನ್ನೇ ಸಾಫ್ಟ್ ಲ್ಯಾಂಡಿಂಗ್ ಅಂತ ಕರೆಯೋದು ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ