ಮನುಷ್ಯನಿಗಿಂತ ಎತ್ತರದ ಬೃಹತ್ ಬಂಡೆಗಳು, ಕುಸಿದ ಕಟ್ಟಡಗಳು, ಸುತ್ತಲೂ ಮಣ್ಣು, ಕೆಸರುಮಯ.. ರಭಸದಲ್ಲಿ ಮುನ್ನುಗ್ಗುತ್ತಿರುವ ಪ್ರವಾಹ. ಕೇರಳದ ವಯನಾಡಿನ ಚೂರಲ್ಮಲ ಮತ್ತು ಮುಂಡಕೈ ಪ್ರದೇಶದಲ್ಲಿ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ 50ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಸುಮಾರು 250 ಮಂದಿ ಸಿಲುಕಿದ್ದಾರೆ. ರಾಜ್ಯ ಹಿಂದೆಂದೂ ಕಂಡರಿಯದ ಸಂಕಷ್ಟದ ಸ್ಥಿತಿಯಲ್ಲಿದೆ. ದುರಂತ ಸ್ಥಳದಿಂದ ಮೃತದೇಹಗಳು ಚಾಲಿಯಾರ್ ನದಿ ಮೂಲಕ ಸಮೀಪದ ಜಿಲ್ಲೆ ಮಲಪ್ಪುರಂಗೆ ಕೊಚ್ಚಿ ಹೋಗಿದೆ. ರಕ್ಷಣಾ ಸಿಬ್ಬಂದಿಗೆ ಇನ್ನೂ ದುರಂತದ ಸ್ಥಳಕ್ಕೆ ತಲುಪಲು ಸಾಧ್ಯವಾಗಿಲ್ಲ.
ಚೂರಲ್ಮಲದಿಂದ ಮುಂಡಕೈಗೆ ಹೋಗುವ ಸೇತುವೆ ಕೊಚ್ಚಿ ಹೋಗಿರುವುದರಿಂದ ಅಲ್ಲಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಪ್ರದೇಶವು ಪ್ರತ್ಯೇಕವಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ವಾಯುಪಡೆಯು ಸೂಲೂರಿನಿಂದ ಎರಡು ಹೆಲಿಕಾಪ್ಟರ್ಗಳನ್ನು ಕಳುಹಿಸಿದೆ, ಆದರೆ ಪ್ರತಿಕೂಲ ಹವಾಮಾನವು ಏರ್ಲಿಫ್ಟಿಂಗ್ಗೆ ಬಿಕ್ಕಟ್ಟು ಸೃಷ್ಟಿಸುತ್ತಿದೆ. ಮುಂಡಕೈ ಒಂದರಲ್ಲೇ ಸುಮಾರು 100 ಕುಟುಂಬಗಳು ದುರಂತಕ್ಕೆ ಸಿಲುಕಿವೆ. ಸಿಕ್ಕಿಬಿದ್ದವರಲ್ಲಿ ವಿದೇಶಿಗರೂ ಇರುವ ಶಂಕೆ ಇದೆ. ಚೂರಲ್ಮಲದಲ್ಲಿ ಶಾಲೆಯೊಂದು ಮಳೆ ನೀರಿಗೆ ಕೊಚ್ಚಿ ಹೋಗಿದೆ.
ಭೂಕುಸಿತದಿಂದ ಸೇತುವೆ ಕುಸಿದರೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಸೇನೆಯ ಎಂಜಿನಿಯರಿಂಗ್ ಗುಂಪು ವಯನಾಡ್ಗೆ ಆಗಮಿಸಲಿದೆ. ಬೆಂಗಳೂರಿನಿಂದ ತಂಡ ಆಗಮಿಸುವ ಮೂಲಕ ಈ ಭಾಗದ ಜತೆಗಿನ ಸಂಬಂಧವನ್ನು ಮರುಸ್ಥಾಪಿಸಲು ಹಾಗೂ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಬಹುದು ಎಂಬ ನಿರೀಕ್ಷೆ ಇದೆ. ವಯನಾಡ್ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ