Belagavi News: ಪಶ್ಚಿಮ ಘಟ್ಟದಲ್ಲಿ ಮುಂದುವರಿದ ಮಳೆ, ಖಾನಾಪುರದ ಹಳ್ಳಗಳಲ್ಲೂ ನದಿಯೋಪಾದಿ ನೀರು

ಅರುಣ್​ ಕುಮಾರ್​ ಬೆಳ್ಳಿ

Updated on: Jul 26, 2023 | 10:29 AM

ಸೇತುವೆ ಎತ್ತರವನ್ನು ಹೆಚ್ಚಿಸುವಂತೆ ಭಾಗದ ಜನ ಬಹಳ ವರ್ಷಗಳಿಂದ ಸರ್ಕಾರಗಳಿಗೆ ಮನವಿ ಮಾಡುತ್ತಿದ್ದರೂ ಘನ ಸರ್ಕಾರಗಳು ಕ್ಯಾರೆ ಅಂದಿಲ್ಲ.

ಬೆಳಗಾವಿ: ಎತ್ತಿಗೆ ಜ್ವರ ಕೋಣಕ್ಕೆ ಬರೆ ಅಂತ ಒಂದು ಮಾತಿದೆ, ಜಿಲ್ಲೆಯ ಅದರಲ್ಲೂ ವಿಶೇಷವಾಗಿ ಖಾನಾಪೂರ (Khanapur) ತಾಲ್ಲೂಕಿನ ಜನರ ಸ್ಥಿತಿ ಹಾಗಾಗಿದೆ. ಮಳೆ ಎಡೆಬಿಡದೆ ಧಾರಾಕಾರವಾಗಿ ಸುರಿಯುತ್ತಿರೋದು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಆದರೆ ನೀರು ಹರಿದು ಬರುತ್ತಿರೋದು ಖಾನಾಪೂರದ ಮೂಲಕ ಹರಿಯುವ ಮಲಪ್ರಭಾ ನದಿಗೆ (Malaprabha River)! ಮಲಪ್ರಭೆ ಉಕ್ಕಿ ಹರಿಯುತ್ತಿರುವ ಸಂಗತಿಯನ್ನು ನಾವು ಕಳೆದ ವಾರವೇ ಚರ್ಚಿಸಿದ್ದೆವು. ಈಗ ನದಿಯಲ್ಲಿ ಮತ್ತಷ್ಟು ನೀರು ಹೆಚ್ಚಿದೆ. ನದಿ ಉಕ್ಕಿ ಹರಿಯುತ್ತಿರುವುದರಿಂದ ಅಶೋಕ ನಗರದ ಬಳಿ ಹರಿಯುವ ಹಾಲಿತ್ರಿ ಹಳ್ಳ (Halitri stream) ಕೂಡ ನದಿಯಂತೆ ಕಾಣುತ್ತಿದೆ. ಇಲ್ಲಿರುವ ಸೇತುವೆಯ ಸ್ಥಿತಿ ನೋಡಿ, ಸಂಪೂರ್ಣವಾಗಿ ಮುಳುಗಿಹೋಗಿದೆ. ಬೆಳಗಾವಿಯ ಟಿವಿ9 ಕನ್ನಡ ವಾಹಿನಿಯ ವರದಿಗಾರ ಹೇಳುವಂತೆ ಸೇತುವೆ ಖಾನಾಪುರ-ಅನಮೋಡ-ಗೋವಾ ಸೇರಿದಂತೆ ಸುಮಾರು 40 ಊರುಗಳನ್ನು ಸಂಪರ್ಕಿಸುತ್ತದೆ. ಅದರ ಎತ್ತರವನ್ನು ಹೆಚ್ಚಿಸುವಂತೆ ಭಾಗದ ಜನ ಬಹಳ ವರ್ಷಗಳಿಂದ ಸರ್ಕಾರಗಳಿಗೆ ಮನವಿ ಮಾಡುತ್ತಿದ್ದರೂ ಘನ ಸರ್ಕಾರಗಳು ಕ್ಯಾರೆ ಅಂದಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.